ಚಿತ್ರದುರ್ಗ, ಮಾ. 3 – ಕುಣಿಗಲ್ ತಾಲ್ಲೂಕಿನ ಕಗ್ಗೆರೆಯ ಬಿ.ಎ ಪದವೀಧರ ಬಿ.ಎಂ. ಮಧುಕುಮಾರ್ಮುರುಘಾ ಮಠದಲ್ಲಿ ಇಂದು ‘ಬಸವಾಕ್ಷ’ ಎಂಬ ನಾಮಾಂಕಿತದೊಂದಿಗೆ ದಾವಣಗೆರೆ ವಿರಕ್ತಮಠದ ಡಾ. ಶ್ರೀ ಬಸವಪ್ರಭು ಸ್ವಾಮೀಜಿ ಅವರಿಂದ ಬಸವ ತತ್ವೋಪದೇಶ, ಸಮಾಜ ಸೇವಾ ದೀಕ್ಷೆ, ಲಾಂಛನ ದೀಕ್ಷೆ ಪಡೆದರು.
ನೂತನ ವಟುವಿಗೆ ಇಷ್ಟಲಿಂಗ ಧ್ಯಾನ, ಶಿವಯೋಗದ ಪರಿಕಲ್ಪನೆಯನ್ನು ತಿಳಿಸಿಕೊಡುತ್ತ, ವಿಭೂತಿಧಾರಣೆ, ಪ್ರಣವ ಸಂಬಂಧ, ಪ್ರತಿಜ್ಞಾ ವಚನ, ಬಸವ ತತ್ತ್ವ ಬೋಧನೆಯ ಮೂಲಕ ಗುರು, ಲಿಂಗ, ಜಂಗಮ, ಪಾದೋದಕ, ಪ್ರಸಾದ, ವಿಭೂತಿ, ರುದ್ರಾಕ್ಷಿ, ಮಂತ್ರ, ಪಂಚಾಚಾರಗಳು, ಷಟ್ಸ್ಥಲಗಳ ಕುರಿತಾಗಿ ಬೋಧಿಸಿದ ಶ್ರೀ ಬಸವಪ್ರಭು ಸ್ವಾಮೀಜಿ, ಎಲ್ಲಾ ಧರ್ಮಗಳಲ್ಲಿರುವಂತೆ ಲಿಂಗಾಯತ ಧರ್ಮದಲ್ಲಿ ಏಕದೇವೋಪಾಸನೆಯನ್ನು ಇಷ್ಟಲಿಂಗದ ಮೂಲಕ ಧ್ಯಾನ ಹಾಗೂ ಯೋಗವನ್ನು ಮಾಡಬಹುದಾಗಿದೆ. ಅಂತಹ ಯೋಗವನ್ನು ದೀಕ್ಷೆ ಪಡೆದ ನೂತನ ವಟುಗಳು ಧರ್ಮ ಪ್ರಚಾರದಲ್ಲಿ ತಿಳಿಸಿಕೊಡಬೇಕೆಂದು ಸಲಹೆ ನೀಡಿದರು.
ಸ್ವಾಮಿಗಳಾದವರು ಸಾರ್ವಜನಿಕವಾಗಿ ಸಮಾಜದ ಸ್ವಾಸ್ಥ್ಯಕ್ಕಾಗಿ ಜನರಲ್ಲಿ ಜಾಗೃತಿ, ಅರಿವು, ಕಾಯಕ ಪ್ರಜ್ಞೆ, ದಾಸೋಹ ಪ್ರಜ್ಞೆ ಮೂಡಿಸುತ್ತ ಯುವ ಸಮೂಹ ಶಿಕ್ಷಣವಂತರಾಗಲು, ಮೂಢನಂಬಿಕೆ ಹಾಗೂ ದುಶ್ಚಟಗಳಿಂದ ದೂರವಿರಲು ತಿಳಿಹೇಳುತ್ತ ಸತ್ಚಿಂತನಗೋಷ್ಠಿಗಳನ್ನು ಏರ್ಪಡಿಸುವ ಮೂಲಕ ಅರಿವು ಮೂಡಿಸುತ್ತ ಸಾಗಬೇಕೆಂದು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿಯ ಸದಸ್ಯರಾದ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.
ಗುರುಮಠಕಲ್ನ ಶ್ರೀ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮಿಗಳು, ಜೇವರ್ಗಿ ತಾಲ್ಲೂಕು ಚಿಗರಹಳ್ಳಿ ಮರುಳಶಂಕರ ಗುರುಪೀಠದ ಶ್ರೀ ಸಿದ್ಧಬಸವ ಕಬೀರ ಸ್ವಾಮಿಗಳು, ತುಮಕೂರು ಜಿಲ್ಲೆ ಹೊಳವನಳ್ಳಿ ಮತ್ತು ಗುಬ್ಬಿಹೊಸಳ್ಳಿಯ ಶ್ರೀ ಬಸವ ಮಹಾಲಿಂಗ ಸ್ವಾಮಿಗಳು ಉಪಸ್ಥಿತರಿದ್ದರು.
ಜಮುರಾ ಕಲಾವಿದ ಉಮೇಶ್ ಪತ್ತಾರ್ ದೀಕ್ಷಾ ಸಮಾರಂಭದ ವಿಧಿ, ವಿಧಾನಗಳಲ್ಲಿ ಬರುವ ವಚನಗಳನ್ನು ಹಾಡಿದರು.