ನಮನ ಅಕಾಡೆಮಿಯ `ಶಿವ ಸ್ಮರಣೆ ನೃತ್ಯ ಜಾಗರಣೆ’
ದಾವಣಗೆರೆ, ಮಾ. 2 – ಶಿವರಾತ್ರಿ ಪ್ರಯುಕ್ತ ನಮನ ಅಕಾಡೆಮಿಯು ಆಯೋಜಿಸಿದ್ದ `ಶಿವ ಸ್ಮರಣೆ ನೃತ್ಯ ಜಾಗರಣೆ’ ಕಾರ್ಯಕ್ರಮವು ವಿಜೃಂಭಣೆಯಿಂದ ನಡೆಯಿತು. ನಗರದ ನಾಲ್ಕು ದೇವಾಲಯಗಳಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನೆಯು ವರ್ತುಲ ರಸ್ತೆಯ ಶಾರದಾ ಮಂದಿರದಲ್ಲಿ ನೆರವೇರಿತು.
ಉದ್ಘಾಟನಾ ಸಮಾರಂಭವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ರವಿಚಂದ್ರ, ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್ ಹಾಗೂ ವೇದಬ್ರಹ್ಮ ಶಂಕರನಾರಾಯಣ ಶಾಸ್ತ್ರಿಗಳು ನೆರವೇರಿಸಿದರು.
ನೃತ್ಯ ಜಾಗರಣೆಯು ರಾತ್ರಿ 9.30 ಗಂಟೆಗೆ ಶಾರದಾ ಮಂದಿರದಲ್ಲಿ ಪ್ರಾರಂಭವಾಗಿ ನಂತರ ಲಿಂಗೇಶ್ವರ ದೇವಸ್ಥಾನ, ತದನಂತರ ಕೂಡಲಿ ಶಂಕರ ಮಠ, ಅಂತಿಮ ವಾಗಿ ವಿದ್ಯಾನಗರದ ಶಿವ-ಪಾರ್ವತಿ ದೇವಸ್ಥಾನದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಪ್ರಸ್ತುತಪಡಿಸಿದ ಪ್ರಥಮ ನೃತ್ಯ ಗಣೇಶ ಸ್ತುತಿಯಲ್ಲಿ ಗಣೇಶನ ಮಹಿಮೆ ಹಾಗೂ ಎಲ್ಲಾ ದೇವತೆಗಳಿಂದ ಅವನ ಆರಾಧನೆಯನ್ನು ಈ ನೃತ್ಯ ರೂಪದಲ್ಲಿ ತೋರಿಸಲಾಯಿತು.
ಐದನೇ ವರ್ಷದ ನೃತ್ಯ ಜಾಗರಣೆಗೆ ವಿಶೇಷವಾಗಿ ಸಂಯೋಜಿಸಲಾದ 14 ನಿಮಿಷಗಳ ವರ್ಣಂ, ಭರತನಾಟ್ಯ, ಮಾರ್ಗಂನ ಪ್ರಮುಖ ಹಂತವಾಗಿದ್ದು, ಗಂಗಾ ವರ್ಣಂ ಗಂಗೆಯ ಪವಿತ್ರತೆ, ವಾಮನ ಅವತಾರದ ಸಂದರ್ಭದಲ್ಲಿನ ಗಂಗೆಯ ಉದ್ಭವ ಹಾಗೂ ಸಗರ ರಾಜನ 60,000 ಪುತ್ರರ ವಿಮೋಚನೆಗೆ ಗಂಗೆಯ ಉದ್ಭವಕ್ಕೆ ಸಂಬಂಧಿಸಿದ ಪ್ರಸಂಗಗಳನ್ನು ನೃತ್ಯ ರೂಪದಲ್ಲಿ ಪ್ರದರ್ಶಿಸಲಾಯಿತು.
ಕಪಾಲಿನಿ ನೃತ್ಯದಲ್ಲಿ ಶಿವನ ರೌದ್ರಾವತಾರ, ವಿಷಪಾನ ಹಾಗೂ ಮಾರ್ಕಂಡೇಯನ ಭಕ್ತಿಗೆ ಮೆಚ್ಚಿ ಅವನಿಗೆ ಶಿವನ ಆಶೀರ್ವಾದ ದೊರಕುವ ದೃಶ್ಯಗಳನ್ನು ಅಭಿನಯಿಸಲಾಯಿತು. ಅರ್ಧನಾರೀಶ್ವರ ಪ್ರಸ್ತುತಿಯಲ್ಲಿ ಶಿವ-ಪಾರ್ವತಿಯ ಸಮತ್ವವನ್ನು ಪ್ರತಿಪಾದಿಸುವ ಅರ್ಧನಾರೀಶ್ವರ ನೃತ್ಯಬಂಧ ಪ್ರಸ್ತುತವಾಯಿತು.
ಈ ಎಲ್ಲಾ ನೃತ್ಯ ಪ್ರಸ್ತುತಿಗಳನ್ನು ನಮನ ಅಕಾಡೆಮಿಯ 10 ವಿದ್ಯಾರ್ಥಿಗಳು ಹಾಗೂ ವಿದುಷಿ ಶ್ರೀಮತಿ ಡಿ.ಕೆ. ಮಾಧವಿ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ನಿರೂಪಣೆಯನ್ನು ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ ವಹಿಸಿದ್ದರು. ಅಕಾಡೆಮಿಯ ನಿರ್ದೇಶಕ ಅನಿಲ್ ಬಾರೆಂಗಳ್ ಸ್ವಾಗತಿಸಿದರು. ನಿರ್ದೇಶಕ ಪಿ.ಸಿ. ರಾಮನಾಥ್ ವಂದಿಸಿದರು. ನೃತ್ಯ ಪ್ರಸ್ತುತಿಗಳ ನಿರೂಪಣೆಯನ್ನು ಕು. ಯುಕ್ತ ಎಸ್. ಕಠಾರೆ ಮನೋಜ್ಞವಾಗಿ ನಡೆಸಿಕೊಟ್ಟರು.