ಪೌರಕಾರ್ಮಿಕರ ಸೇವೆ ಅಮೂಲ್ಯ, ಅನನ್ಯ

ಪೌರಕಾರ್ಮಿಕರ ಸೇವೆ ಅಮೂಲ್ಯ, ಅನನ್ಯ

ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಶ್ಲ್ಯಾಘನೆ

ದಾವಣಗೆರೆ, ಫೆ. 23 – ಪ್ರತಿನಿತ್ಯ ಸ್ವಚ್ಛತೆ ಕಾರ್ಯ ಮಾಡುವ ಪೌರ ಕಾರ್ಮಿಕರ ಸೇವೆ ಅನನ್ಯ. ಬಣ್ಣಿಸಲು ಆಗದು. ಎಂದಿಗೂ ಮರೆಯಲಾಗದಂಥ ಸೇವೆ. ಅವರನ್ನು ಗುರುತಿಸಿ ಕೈಯಲಾದಷ್ಟು ಸಹಾಯ ಮಾಡುವುದು ಪುಣ್ಯದ ಕೆಲಸ ಎಂದು ಮಹಾನಗರ ಪಾಲಿಕೆಯ ವಿರೋಧ ಪಕ್ಷದ ಮಾಜಿ ನಾಯಕ ಜಿ.ಎಸ್. ಮಂಜುನಾಥ್ ಗಡಿಗುಡಾಳ್ ಹೇಳಿದರು.

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಪೌರ ಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿ ಮಾತನಾಡಿದ ಅವರು, ನಗರದಲ್ಲಿ ಪೌರಕಾರ್ಮಿಕರು ಇಲ್ಲ ಎಂಬುದನ್ನು ಊಹಿಸಿಕೊಳ್ಳಲು ಆಗದು. ಎಂಥ ಪರಿಸ್ಥಿತಿ ಇರಲಿ ನಗರದ ಸ್ವಚ್ಛತೆಗೆ ಹೆಚ್ಚಿನ ಕಾಳಜಿ ವಹಿಸುವವರು. ಮಳೆ, ಗಾಳಿ, ಬಿಸಿಲು ಎನ್ನದೇ ಸ್ವಚ್ಛತೆ ಕಾರ್ಯ ಮಾಡಿ ನಗರವನ್ನು ಸುಂದರವಾಗಿ ಸುತ್ತಾರೆ ಎಂದು ಬಣ್ಣಿಸಿದರು.

ಪೌರಕಾರ್ಮಿಕರು ಏನೇ ಕಷ್ಟ ಇದ್ದರೂ, ಸಂಕಷ್ಟ ಎದುರಾದರೂ ತಮ್ಮ ಕರ್ತವ್ಯ ನಿರ್ವಹಿಸಿ ಎಲ್ಲಾ ವಾರ್ಡ್‌ ಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ಇಂಥವರಿಗೆ ಹೆಚ್ಚಿನ ನೆರವು ನೀಡಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷ ಮುತುವರ್ಜಿ ವಹಿಸಿದ್ದಾರೆ. ಪೌರ ಕಾರ್ಮಿಕರಿಗೆ ಎಲ್ಲಾ ರೀತಿಯ ನೆರವು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ. ನಮಗೂ ಮಾರ್ಗದ ರ್ಶನ ನೀಡಿದ್ದಾರೆ. ಪೌರ ಕಾರ್ಮಿಕರಿಗೆ ವಸತಿ, ಚಿಕಿತ್ಸಾ ಸೌಲಭ್ಯ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಸೂಚನೆ ನೀಡಿ ನೆರವಾಗಿದ್ದಾರೆ ಎಂದು ಮಂಜುನಾಥ್ ತಿಳಿಸಿದರು.

ಡಾ. ಕರಿಬಸಪ್ಪ ಮತ್ತು ನಿರ್ಮಲ ದಂಪತಿಯ ಪುತ್ರಿ ಡಾ. ಚೇತನಾ ಬಳ್ಳಾರಿ ಹಾಗೂ ಡಾ. ಷಡಾಕ್ಷರಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವ ಸಮಾರಂಭದ ಪ್ರಯುಕ್ತ ಪೌರ ಕಾರ್ಮಿಕರಿಗೆ ಕೊಡುಗೆ ನೀಡಿದರು. ಅದೇ ರೀತಿಯಲ್ಲಿ ಗಡಿಗುಡಾಳ್ ಮಂಜುನಾಥ್ ಅವರು ತಮ್ಮ ಕೈಯಲ್ಲಾದ ಸಹಾಯ ಮಾಡಿದರು.

ಈ ವೇಳೆ ಮಾತನಾಡಿದ ಪೌರ ಕಾರ್ಮಿಕರು, ನಾವು ಈ ವಾರ್ಡ್‌ನಲ್ಲಿ ಕೆಲಸ ಮಾಡುತ್ತಿರುವುದು ಪುಣ್ಯ ಎನಿಸಿದೆ. ಪಾಲಿಕೆ ಸದಸ್ಯರಾಗಿದ್ದ ಐದು ವರ್ಷಗಳ ಅವಧಿಯಲ್ಲಿಯೂ ತಮ್ಮ ಕೈಯಲಾದಷ್ಟು ಸಹಾಯ ಮಾಡುವ ಮಾದರಿ ಕಾರ್ಪೊರೇಟರ್ ಆಗಿದ್ದರು ಎಂದು ಹೇಳಿದರು. 

ಪೌರಕಾರ್ಮಿಕರು ಮಂಜುನಾಥ್ ಗಡಿಗುಡಾಳ್ ಅವರನ್ನು ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು.

error: Content is protected !!