ದಾವಣಗೆರೆ, ಫೆ.21- ಬಸವ ಭಕ್ತರನ್ನು ನಿಂದಿಸಿದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಉಪ ವಿಭಾಗಾಧಿಕಾರಿಗಳಿಗೆ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕ ಶುಕ್ರವಾರ ಮನವಿ ಸಲ್ಲಿಸಿತು.
ಈ ವೇಳೆ ಮಾತನಾಡಿದ ಪರಿಷತ್ ತಾಲ್ಲೂಕು ಅಧ್ಯಕ್ಷ ಎಸ್.ಬಿ. ರುದ್ರಗೌಡ ಗೋಪನಾಳ್ ಅವರು, ಇತ್ತೀಚೆಗೆ ನ್ಯೂಸ್ ಚಾನೆಲ್ ಒಂದರಲ್ಲಿ ಬಸವ ಧರ್ಮದ ತತ್ವಗಳನ್ನು ಗಾಳಿಗೆ ತೂರಿ, ಬಸವ ಭಕ್ತರನ್ನು ತಾಲಿಬಾನ್ ಎಂದು ಅವಮಾನಿಸಿರುವ ಕಾಡಸಿದ್ದೇಶ್ವರ ಶ್ರೀಗಳ ನಡೆ ಅತ್ಯಂತ ಖಂಡನೀಯ ಎಂದರು.
ಮನುವಾದಿಗಳ ಕೈಗೊಂಬೆಯಾಗಿ ನಡೆದುಕೊಂಡ ಶ್ರೀಗಳು, ವಿಶ್ವಗುರು ಬಸವಣ್ಣನವರ ಸಿದ್ಧಾಂತ ಮತ್ತು ತತ್ವಗಳಿಗೆ ವಿರುದ್ಧವಾಗಿ ಹೇಳಿಕೆ ನೀಡುತ್ತಿದ್ದಾರೆ. ಕೂಡಲೇ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ದೇಶದ ಯಾವುದೇ ದಾರ್ಶನಿಕರು, ಹೋರಾಟಗಾರರಿಗೆ ಅವಮಾನ ಮಾಡಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದ ಅವರು, ಬಸವ ಭಕ್ತರ ಬಳಿ ಕ್ಷಮೆ ಯಾಚಿಸುವಂತೆ ಕಾಡಸಿದ್ದೇಶ್ವರ ಶ್ರೀಗಳಿಗೆ ಒತ್ತಾಯಿಸಿದರು.