ದಾವಣಗೆರೆ, ಫೆ.19- ಜೆ.ಎಂ.ಇಮಾಂ ಟ್ರಸ್ಟ್ ಹಾಗೂ ಜೆ.ಎಂ. ಇಮಾಂ ಸ್ಮಾರಕ ಶಾಲೆ ಜಗಳೂರು ಇವರ ವತಿಯಿಂದ ನಾಳೆ ದಿನಾಂಕ 20 ರ ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ `ಮಾನವತೆಯ ಬೆಳಕು- ಜಗಳೂರು ಮಹಮದ್ ಇಮಾಂ’ ಪುಸ್ತಕ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಪುಸ್ತಕ ಸಂಪಾದನಾ ಸಮಿತಿಯ ಪ್ರಧಾನ ಸಂಪಾದಕರೂ, ಸಾಹಿತಿಯೂ ಆದ ಎನ್.ಟಿ. ಯರ್ರಿಸ್ವಾಮಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ಕೃತಿ ಲೋಕಾರ್ಪಣೆ ಮಾಡಲಿದ್ದಾರೆ. ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಪುಸ್ತಕದ ಪ್ರಥಮ ಪ್ರತಿ ಹಸ್ತಾಂತರ ಮಾಡುವರು. ಕೃತಿ ಕುರಿತು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ರಾಜೇಂದ್ರ ಜೆನ್ನಿ ಮಾತನಾಡಲಿದ್ದಾರೆ.
ಜೆ.ಎಂ. ಇಮಾಂ ಟ್ರಸ್ಟ್ ಜಗಳೂರು ಇದರ ಗೌರವಾಧ್ಯಕ್ಷರೂ, ಪುಸ್ತಕ ಸಪಾದನಾ ಸಮಿತಿಯ ಗೌರವ ಸಂಪಾದಕರೂ ಆದ ಕೆ. ಹುಸೇನ್ ಮಿಯ್ಯಾ ಸಾಬ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಲೋಕಸಭಾ ಸದಸ್ಯರಾದ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕರಾದ ಬಿ.ದೇವೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ವಿಧಾನಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ಮಹಾನಗರ ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ಕರ್ನಾಟಕ ರಾಜ್ಯ ಪಿಂಜಾರ್, ನದಾಫ್ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ಜಲೀಲ್ ಸಾಬ್, ಉದ್ಯಮಿ ಹೆಚ್.ಇ. ದಾದಾ ಖಲಂದರ್ ಮತ್ತಿತರರು ಆಗಮಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಡಾ. ದಾದಾಪೀರ್ ನವಿಲೇಹಾಳ್, ಎನ್. ಹಾಲಪ್ಪ, ಆರ್. ಖಾಸಿಂಸಾಬ್ ಉಪಸ್ಥಿತರಿದ್ದರು.