ದಾವಣಗೆರೆ, ಫೆ. 19- ಶ್ರೀ ವೀರೇಂದ್ರ ಹೆಗ್ಗಡೆಯವರ ಮುಂದಾಲೋಚನೆಯಿಂದ ಸಮಾಜದ ಅಭಿವೃದ್ಧಿ ಹಾಗೂ ಕೆರೆಗಳಿಗೆ ಮರುಜನ್ಮ ಕಲ್ಪಿಸುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕಾರ್ಯನಿರ್ವಹಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಲಕ್ಷ್ಮಣ್ ಎಂ. ತಿಳಿಸಿದರು.
ತಾಲ್ಲೂಕಿನ ಯರಗುಂಟೆ ಕಾರ್ಯಕ್ಷೇತ್ರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನಮ್ಮೂರು – ನಮ್ಮ ಕೆರೆ ಕಾರ್ಯಕ್ರಮದಡಿಯಲ್ಲಿ ಕೆರೆಯ ಹೂಳು ತೆಗೆಯುವ ಕಾರ್ಯಕ್ರಮಕ್ಕೆ ಗುದ್ದಲಿ ಪೂಜೆ ನಡೆಸಿ ಅವರು ಮಾತನಾಡುತ್ತಿದ್ದರು.
ರಾಜ್ಯಾದ್ಯಂತ ಸುಮಾರು 56 ಕೋಟಿ ರೂ. ವೆಚ್ಚದಲ್ಲಿ 873 ಕೆರೆಗಳನ್ನು ಸಂಸ್ಥೆಯ ಮುಖಾಂತರ ಅಭಿವೃದ್ಧಿ ಪಡಿಸಲಾಗಿದ್ದು, ಇದು ಹೆಗ್ಗಡೆಯವರ ಭವಿಷ್ಯದ ಚಿಂತನೆಯಿಂದಾಗಿ ನೀರನ್ನು ಸಂಗ್ರಹಿಸು ವಲ್ಲಿ ಕೆರೆಗಳ ಪಾತ್ರ ಬಹು ಮುಖ್ಯವಾಗಿದೆ. ಅದ ಕ್ಕಾಗಿ ಸಂಸ್ಥೆಯ ವತಿಯಿಂದ ಹೂಳು ತುಂಬಿಕೊಂಡಿರುವ ಕೆರೆಗಳನ್ನು ಆಯ್ಕೆ ಮಾಡಿ ಅಂತಹ ಕೆರೆಗಳನ್ನು ಅಭಿವೃದ್ಧಿ ಪಡಿಸುವುದರ ಜೊತೆಗೆ ಸಮಾಜಮುಖಿ ಕಾರ್ಯಕ್ರಮಗಳಾದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಹಾಲಿನ ಡೈರಿ ರಚನೆಗೆ ಅನುದಾನ ವಿತರಣೆ, ವಾತ್ಸಲ್ಯ ಮನೆ ರಚನೆ, ನಿರ್ಗತಿಕರ ಮಾಸಾಶನ, ಜನಮಂಗಳ ಕಾರ್ಯಕ್ರಮದಡಿಯಲ್ಲಿ ವಿಕಲಚೇತನರ ಸಲಕರಣೆ ವಿತರಣೆ, ಜ್ಞಾನ ದೀಪ, ಶಿಕ್ಷಕರ ಒದಗಣೆ, ಸರ್ಕಾರಿ ಶಾಲಾ-ಕಾಲೇಜುಗಳಿಗೆ ಬೆಂಚು ಡೆಸ್ಕ್ಗಳ ವಿತರಣೆ, ಸಿಎಸ್ಸಿ ಕೇಂದ್ರಗಳು, ಮದ್ಯ ವರ್ಜನಾ ಶಿಬಿರ, ಕೃಷಿ ಯಂತ್ರಧಾರೆ, ಧಾರ್ಮಿಕ ಕಾರ್ಯಕ್ರಮ,ಆರೋಗ್ಯ ಅರಿವು ಕಾರ್ಯಕ್ರಮ ಮತ್ತು ಮಹಿಳೆಯರು ಸ್ವಾವಲಂಬಿ ಗಳಾಗಿ ಬದುಕು ಕಟ್ಟಿಕೊಳ್ಳುವಲ್ಲಿ ಧರ್ಮಸ್ಥಳ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಪುರಾತನ ಕಾಲದ ಕೆರೆಗಳನ್ನು ಉಳಿಸಿ, ಬೆಳೆಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ನೀರಿನ ಸಂಗ್ರಹಣೆಯ ಹಿನ್ನಡೆಯಿಂದಾಗಿ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿಯೂ ಸಹ ಸಮಸ್ಯೆಯಗುತ್ತಿದ್ದು, ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸಿ ನೀರಿನ ಅಂತರ್ಜಲ ಮಟ್ಟ ಹೆಚ್ಚಿಸಬೇಕಾಗಿದೆ ಎಂದರು.
ಗೋಕಟ್ಟೆ ಕೆರೆ ಅಭಿವೃದ್ಧಿಯ ನಂತರ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಮಹಾನಗರ ಪಾಲಿಕೆ ಕೈ ಜೋಡಿಸುತ್ತದೆ. ಈ ಕೆರೆಯನ್ನು ಮಾದರಿ ಕೆರೆಯಾಗಿ ನಿರ್ಮಿಸುವಲ್ಲಿ ಪ್ರಯತ್ನಿಸೋಣ ಎಂದು ಮಹಾಪೌರ ಕೆ. ಚಮನ್ ಸಾಬ್ ತಿಳಿಸಿದರು.
ನಂತರ ನೆಲ ಜಲ ಸಂರಕ್ಷಣೆಯ ಹೋರಾಟಗಾರ ರವಿಕುಮಾರ್ ಬಲ್ಲೂರು ಮಾತನಾಡಿ, ಊರಿಗೊಂದು ಕೆರೆಯ ಅವಶ್ಯಕತೆ ಇದ್ದು ಕೆರೆಗಳ ರಕ್ಷಣೆ ಹಾಗೂ ಕೆರೆಗಳನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಬೇಕು. ಜೊತೆಯಲ್ಲಿ ಮನೆಯ ನೀರಿನ ಶೇಖರಣೆಗಾಗಿ ಇಂಗುಗುಂಡಿ ರಚನೆ, ಮಳೆ ನೀರು ಕೊಯ್ಲು ಮಾಡಿಕೊಳ್ಳಬೇಕು. ಹೆಚ್ಚುವರಿ ಯಾಗಿ ಬರುವ ನೀರನ್ನು ಕೆರೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಿ ನೀರಿನ ಶೇಖರಣೆಗೆ ಸರ್ವರೂ ಕೈ ಜೋಡಿಸುವಂತೆ ಕರೆ ಕೊಟ್ಟರು.
ಕಾರ್ಯಕ್ರಮದಲ್ಲಿ ಉಪ ಮಹಾ ಪೌರ ಸೋಗಿ ಶಾಂತ ಕುಮಾರ್, ಸಮಿತಿ ಅಧ್ಯಕ್ಷ ಬಸವರಾಜ್, ಚೇತನಾ ಶಿವಕುಮಾರ್, ಯೋಜನಾಧಿಕಾರಿಗಳಾದ ಶ್ರೀನಿವಾಸ್ ಬಿ., ಇಂಜಿನಿಯರ್ ಹರೀಶ್, ಕೃಷಿ ಅಧಿಕಾರಿ ಪ್ರವೀಣ್, ನರೇಂದ್ರ, ಮೇಲ್ವಿಚಾರಕರಾದ ಚಂದ್ರಶೇಖರ ಹಾಗೂ ಇತರರು ಉಪಸ್ಥಿತರಿದ್ದರು.