ದಾವಣಗೆರೆ, ಫೆ.12- ನ್ಯಾಮತಿ ತಾಲ್ಲೂಕಿನ ಭಾಯಾಗಢ್ನಲ್ಲಿ ನಾಳೆ ದಿನಾಂಕ 13ರಿಂದ 15ರ ವರೆಗೆ 286ನೇ ಸಂತ ಸೇವಾಲಾಲ್ ಜಯಂತಿ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಮುಖಂಡ ರಾಘವೇಂದ್ರ ನಾಯ್ಕ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಹೇಳಿದರು.
ನಾಡಿದ್ದು ದಿನಾಂಕ 14ರ ಮಧ್ಯಾಹ್ನ 2ಕ್ಕೆ ಪ್ರಧಾನ ವೇದಿಕೆಯಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ಹೆಚ್.ಡಿ. ಕುಮಾರ್ ಸ್ವಾಮಿ ಉಪಸ್ಥಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸಂತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು.
ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾತಿರಾಂ ಬಾವಾಜಿ ಸಭಾಂಗಣ ಉದ್ಘಾಟಿಸಿದರೆ, ವಿಹಾರ ವನವನ್ನು ಹೆಚ್.ಕೆ. ಪಾಟೀಲ್, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಟ್ಟಡವನ್ನು ಡಾ. ಪ್ರಕಾಶ್ ರುದ್ರಪ್ಪ ಪಾಟೀಲ್ ಮತ್ತು ಸೇವಾಲಾಲ್ ಸರೋವರವನ್ನು ಸಂಜಯ್ ಡಿ. ರಾಥೋಡ್ ಉದ್ಘಾಟಿಸಲಿದ್ದಾರೆ.
ನ್ಯಾಮತಿ ತಾಲ್ಲೂಕಿನ ಭಾಯಾಗಢ್ನಲ್ಲಿ ಇಂದು ಬೆಳಗ್ಗೆ 9ಕ್ಕೆ ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರ ನೇತೃತ್ವದಲ್ಲಿ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಅವರು ಧ್ವಜಾರೋಹಣ ನೆರವೇರಲಿದೆ ಎಂದು ಹೇಳಿದರು.
ಇಂದು ಬೆಳಗ್ಗೆ 10 ಗಂಟೆಗೆ ಹಾತಿರಾಂ ಸಭಾಂಗಣದಲ್ಲಿ ಕವಿಗೋಷ್ಠಿ ನಡೆಯಲಿದ್ದು, ಚಂದ್ರಶೇಖರ್ ರಾಮಾನಾಯ್ಕ್ ಅಧ್ಯಕ್ಷತೆ ವಹಿಸುವರು. ಎಂ. ಮಹಾದೇವ ನಾಯ್ಕ್, ಶ್ರೀನಿವಾಸ್ ನಾಯ್ಕ್, ಬಾಸು ಪಿ. ಚೌವ್ಹಾಣ್ ಸೇರಿದಂತೆ ಗಣ್ಯರು ಗೋಷ್ಠಿಯಲ್ಲಿ ಪಾಲ್ಗೊಳ್ಳುವರು ಎಂದರು.
ಸಂಜೆ 4.30ಕ್ಕೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದ್ದು, ಡಾ. ಎ.ಆರ್. ಗೋವಿಂದಸ್ವಾಮಿ ಉದ್ಘಾಟಿಲಿದ್ದಾರೆ.
ರಾತ್ರಿ ವೇಳೆ ರಾಜ್ಯದ ವಿವಿಧ ಭಾಗದ ಕಲಾತಂಡಗಳಿಂದ ರಾತ್ರಿ ಸಾಂಸ್ಕೃತಿಕ ಸಭೆ ನಡೆಯಲಿದೆ.
ಡಾ.ಹೆಚ್.ಸಿ ಮಹಾದೇವಪ್ಪ ವಲಸೆ ಮಕ್ಕಳ ವಸತಿ ಶಾಲೆಯ ಶಂಕು ಸ್ಥಾಪನೆ ಮಾಡಲಿದ್ದು, ಸಚಿವರಾದ ಸತೀಶ್ ಜಾರಕಿಹೊಳಿ, ಮಧು ಬಂಗಾರಪ್ಪ, ಮಾಜಿ ಸಿಎಂ ಯಡಿಯೂರಪ್ಪ, ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್ ಸ್ಥಳೀಯ ಶಾಸಕ ಡಿ.ಜಿ. ಶಾಂತನಗೌಡ ಸೇರಿದಂತೆ ಗಣ್ಯರು ಭಾಗವಹಿಸುವರು.
ಸಂಜೆ 5.30ಕ್ಕೆ ಮಹಾ ವೇದಿಕೆಯಲ್ಲಿ `ಸಂಘ, ಸಂಸ್ಥೆ ಮತ್ತು ಧಾರ್ಮಿಕ ಮುಖಂಡರ ಸಮಾವೇಶ’ ನಡೆಯಲಿದ್ದು, ಸೇನಾಭಗತ್ ಮಹಾರಾಜ್, ಸಿದ್ದಲಿಂಗ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತ್ತು ಜಗನು ಮಹಾರಾಜ್ ಸೇರಿದಂತೆ ಇನ್ನಿತರ ಧಾರ್ಮಿಕ ಗುರುಗಳು ಭಾಗವಹಿಸಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಮಾವೇಶ ಉದ್ಘಾಟಿಸಲಿದ್ದು, ಉಪ ಸಭಾಪತಿ ರುದ್ರಪ್ಪ ಮಾನಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ `ಬಂಜಾರ ಅಧ್ಯಾತ್ಮಿಕ, ಸಂಸ್ಕೃತಿ ಮತ್ತು ಇತಿಹಾಸ’ ಕೃತಿ ಬಿಡುಗಡೆ ಮಾಡಲಾಗುವುದು.
ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯದೇವ ನಾಯ್ಕ್ ಮಾತನಾಡಿ, ನಿಗಮದ ವತಿಯಿಂದ ವಿದ್ಯುತ್ ಅಲಂಕಾರ, ಭಕ್ತರಿಗೆ ಊಟ-ಉಪಹಾರ, 40 ಸಾವಿರ ಮಜ್ಜಿಗೆ ಪ್ಯಾಕೆಟ್ ವಿತರಣೆ ಹಾಗೂ ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಬಿಜಾಪುರದಿಂದ 3 ಬಸ್ಸುಗಳು ಹಾಗೂ ರಾಯಚೂರಿನಿಂದ 2 ಬಸ್ಸುಗಳನ್ನು ಮಾಡಿದ್ದು, ಲಂಬಾಣಿ ಉಡುಗೆಯಲ್ಲಿ ಮಹಿಳೆಯರು ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ವೇಳೆ ಸಮಾಜದ ಮುಖಂಡ ಹನುಮಂತ ನಾಯ್ಕ್, ಮಂಜಾನಾಯ್ಕ್, ಪ್ರಕಾಶ್ ನಾಯ್ಕ್, ಡಾ. ಉತ್ತಮ ಇತರರು ಇದ್ದರು.