ದಯಾಮರಣ ಹೋರಾಟಗಾರ್ತಿ ಹೆಚ್.ಬಿ. ಕರಿಬಸಮ್ಮ ಸಂತಸ
ದಾವಣಗೆರೆ, ಫೆ.10- ಕರಳು ಕ್ಯಾನ್ಸರ್ನಿಂದ ಬಳಲುತ್ತಿದ್ದ ನಾನು ದಯಾಮರಣಕ್ಕೆ ಹೋರಾಟ ನಡೆಸುತ್ತಿದ್ದು, ಕಳೆದ 24 ವರ್ಷಗಳ ನಂತರ ಇಚ್ಛಾ ಮರಣಕ್ಕೆ ಸರ್ಕಾರ ಒಪ್ಪಿಗೆ ನೀಡಿರುವುದು ಹರ್ಷವನ್ನುಂಟು ಮಾಡಿದೆ ಎಂದು ನಿವೃತ್ತ ಶಿಕ್ಷಕರೂ ಆದ ದಯಾಮರಣ ಹೋರಾಟಗಾರ್ತಿ ಶ್ರೀಮತಿ ಹೆಚ್.ಬಿ. ಕರಿಬಸಮ್ಮ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಣಪಡಿಸಲಾಗದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ಘನತೆಯಿಂದ ಮರಣ ಹೊಂದುವ ಹಕ್ಕು ಕರ್ನಾಟಕದಲ್ಲಿ ಜಾರಿಗೆ ಬಂದಿರುವುದು ನಿರಂತರವಾಗಿ ನಡೆಸಿದ ಹೋರಾಟದ ಫಲ ಎಂದು ಹೇಳಿದರು.
ಬದುಕಿನಲ್ಲಿ ಹಲವು ಬಾರಿ ಸಾವಿನ ಮನೆಯ ಬಾಗಿಲು ಬಡಿದಿದ್ದೇನೆ. ಕಾಯಿಲೆಯಿಂದ ನರಳಿ ಸಂಕಟ ಅನುಭವಿಸಿದ್ದೇನೆ. ಆತ್ಮಹತ್ಯೆ ಮಾಡಿಕೊಳ್ಳಲು ಮನಸ್ಸು ಒಪ್ಪಲಿಲ್ಲ. ಮರಣವೂ ಘನತೆಯಿಂದ ಇರಬೇಕು ಎಂಬುದು ನನ್ನ ಬಲವಾದ ನಂಬಿಕೆ. ವಿಶ್ವದ ಹಲವು ದೇಶಗಳಲ್ಲಿರುವ ಈ ಅವಕಾಶ ಭಾರತದಲ್ಲಿ ಏಕಿಲ್ಲ ? ಎಂಬ ಪ್ರಶ್ನೆ ಕಾಡಿತ್ತು ಎಂದು ಹೇಳಿದರು.
ನ್ಯಾಯಾಲಯದ ಮೆಟ್ಟಿಲು ಏರಿ ಕಾನೂನಾತ್ಮಕ ಹಕ್ಕು ಪಡೆಯಲು ಪ್ರಯತ್ನಿಸಿದ್ದೇನೆ. ಕಾನೂನಾತ್ಮಕವಾಗಿ ಇಚ್ಛಾಮರಣ ಪಡೆದ ಮೊದಲ ವ್ಯಕ್ತಿ ನಾನಾಗಬೇಕು ಎಂಬ ಬಯಕೆ ಇದೆ. ಈ ಅವಕಾಶಕ್ಕೆ ಕಾಯುತ್ತಿದ್ದೇನೆ ಎಂದು ಅವರು ತಿಳಿಸಿದರು.
ಮಾರಣಾಂತಿಕ ಕಾಯಿಲೆಗಳಿಂದ ಬಳಲುವ ವೃದ್ಧರ ಸಂಖ್ಯೆ ದೇಶದಲ್ಲಿ ದೊಡ್ಡ ದಾಗಿದೆ. ಘನತೆಯಿಂದ ಸಾಯುವ ಅವಕಾಶ ಸಿಗದೇ ನನ್ನಂತೆ ನರಳುತ್ತಿದ್ದಾರೆ. ಇಚ್ಛಾ ಮರಣ ಕಾನೂನು ಜಾರಿಗೆ ಒತ್ತಾಯಿಸಿ ಹೋರಾಟ ಆರಂಭಿಸಿದಾಗ ಎಲ್ಲರೂ ಗೇಲಿ ಮಾಡು ತ್ತಿದ್ದರು. ಕುಟುಂಬದ ಸದಸ್ಯರು, ಸಂಬಂಧಿಕರು ದೂರವಾದರು. 16 ವರ್ಷಗಳಿಂದ ವೃದ್ಧಾಶ್ರಮದಲ್ಲಿ ನೆಲೆಸಿ, ಹೋರಾಟ ಮುಂದುವರಿಸಿದೆ ಎಂದು ನೆನಪಿಸಿಕೊಂಡರು.
ಈ ವೇಳೆ ವಿಜಯಕುಮಾರಿ, ಹೆಚ್.ವಿ. ವೆಂಕಟೇಶ್, ಶಾಂತಮ್ಮ, ಟಿ.ಎನ್. ಚಿಕ್ನಿಸ್ ಸುದ್ದಿಗೋಷ್ಠಿಯಲ್ಲಿದ್ದರು.