ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯಿಂದ ಸೇವಾ ಕಾರ್ಯ

ಮೋದಿ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿಯಿಂದ ಸೇವಾ ಕಾರ್ಯ

ಹೊನ್ನಾಳಿ, ಸೆ. 17 – ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ನಿಮಿತ್ತ ಬಿಜೆಪಿ ವತಿಯಿಂದ 15 ದಿನಗಳ ಕಾಲ ಸೇವಾ ಪಾಕ್ಷಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಮಂಡಲದ ಮಾಜಿ ತಾಲ್ಲೂಕು ಅಧ್ಯಕ್ಷ ಎ.ಬಿ. ಹನುಮಂತಪ್ಪ ತಿಳಿಸಿದರು.

ನರೇಂದ್ರ ಮೋದೀಜಿಯವರ ಹುಟ್ಟುಹಬ್ಬದ ಪ್ರಯುಕ್ತ ಪಕ್ಷದ ವತಿಯಿಂದ ಸೇವಾ ಕಾರ್ಯದ ಅಂಗವಾಗಿ ತಾಲ್ಲೂಕಿನ ಮಾಸಡಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಗುಂಡಿ ಮುಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಸೇವಾ ಕಾರ್ಯದ ಅಂಗವಾಗಿ ಮಾಸಡಿ ಮುಖ್ಯ ರಸ್ತೆಯಲ್ಲಿನ ಗುಂಡಿಗಳಿಂದ ವಾಹನ ಸವಾರರಿಗೆ ಸಮಸ್ಯೆಗಳುಂಟಾಗುತ್ತಿದ್ದು, ಈ ಗುಂಡಿಗಳಿಂದ ಅನೇಕ ರಸ್ತೆ ಅಪಘಾತಗಳೂ ಕೂಡ ಸಂಭವಿಸಿವೆ. ಸುಗಮ ಸಂಚಾರಕ್ಕಾಗಿ ರಸ್ತೆಯ ಗುಂಡಿಗಳನ್ನು ಮುಚ್ಚುವ ಕೆಲಸವನ್ನು ಮಾಡುತ್ತಿದ್ದು, ಜೊತೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿನ ಸಿಬ್ಬಂದಿ ಮತ್ತು ಒಳರೋಗಿಗಳಿಗೆ ಹಣ್ಣು, ಬ್ರೆಡ್, ಬಿಸ್ಕೆಟ್ ವಿತರಿಸಲಾಯಿತು ಎಂದು ಅವರು ಹೇಳಿದರು.

ಬಿಜೆಪಿ ಮಾಜಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಂತರಾಜ್ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಹತ್ತಿರ ರಸ್ತೆಯಲ್ಲಿನ ಗುಂಡಿಗಳನ್ನೂ ಮುಚ್ಚಲೂ ಕೂಡ ಹಣವಿಲ್ಲ, ಈ ರಸ್ತೆಯಲ್ಲಿನ ಗುಂಡಿಗಳಿಂದ ದಿನ ನಿತ್ಯ ಒಂದಿಲ್ಲೊಂದು ಕಡೆ ವಾಹನ ಸವಾರರು ತಮ್ಮ ಪ್ರಾಣ ಕೈ ಚೆಲ್ಲುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಜಿ.ಪಂ. ಉಪಾಧ್ಯಕ್ಷ ಕೆ.ವಿ. ಚನ್ನಪ್ಪ ಮತ್ತು ಮಾಜಿ ಜಿ.ಪಂ. ಸದಸ್ಯ ಎಂ.ಆರ್. ಮಹೇಶ್ ಮಾತನಾಡಿದರು. 

ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಸಿ.ಕೆ. ರವಿ, ಮಾಜಿ ಜಿ.ಪಂ. ಅಧ್ಯಕ್ಷ ದೀಪಾ ಜಗದೀಶ್, ಮುಖಂಡ  ಟಿ.ಎಸ್. ಜಗದೀಶ್, ಬಳ್ಳೇಶ್ವರದ ಹಾಲೇಶಣ್ಣ, ಮಲ್ಲಣ್ಣ, ಎಚ್.ಎಂ. ಪಾಟೀಲ್, ಪ್ರಭು ಸೋಗಿಲು, ಎಸ್.ಎಮ್.ಟಿ. ಶಿವು, ಚನ್ನೇಶ್ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!