ನಗರದಲ್ಲಿ ನಾಳೆ ಶ್ರೀ ವಿಶ್ವಕರ್ಮ ಮಹೋತ್ಸವ

ನಗರದಲ್ಲಿ ನಾಳೆ ಶ್ರೀ ವಿಶ್ವಕರ್ಮ ಮಹೋತ್ಸವ

ದಾವಣಗೆರೆ, ಸೆ.15- ವಿಶ್ವಕರ್ಮ ಸಮಾಜದ ವತಿಯಿಂದ ನಾಡಿದ್ದು ದಿನಾಂಕ 17ರಂದು ಕಾಳಿಕಾಂಬ ವಿಶ್ವಕರ್ಮ ಕಲ್ಯಾಣ ಮಂಟಪದಲ್ಲಿ `ಭಗವಾನ್‌ ಶ್ರೀ ವಿಶ್ವಕರ್ಮ ಮಹೋತ್ಸವ ನಡೆಯಲಿದೆ’ ಎಂದು ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ. ಶಿವಾನಂದ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 5.30ಕ್ಕೆ ವಿಶ್ವಕರ್ಮ ಹೋಮ ನಡೆಯಲಿದ್ದು, 10ಕ್ಕೆ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್‌, ಮಾಯಕೊಂಡ ಶಾಸಕ ಕೆ.ಎಸ್‌. ಬಸವಂತಪ್ಪ, ಮೇಯರ್‌ ವಿನಾಯಕ ಪೈಲ್ವಾನ್‌, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಎಸ್ಪಿ ಉಮಾ ಪ್ರಶಾಂತ್‌, ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್‌ ಹಾಗೂ ಜಿ.ಪಂ. ಸಿಇಓ ಸುರೇಶ್‌ ಬಿ. ಇಟ್ನಾಳ್‌ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಧ್ಯಾಹ್ನ 12ಕ್ಕೆ ಕುಂಭೋತ್ಸವ, ಸ್ತಬ್ಧ ಚಿತ್ರ ಹಾಗೂ ಕಲಾ ತಂಡಗಳೊಂದಿಗೆ ಭಗವಾನ್‌ ವಿಶ್ವಕರ್ಮ ಮೂರ್ತಿಯ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಇದೇ ವೇಳೆ ಅವರು, ಮುಜರಾಯಿ ಇಲಾಖೆಗೆ ಸೇರಿದ ದೇವಸ್ಥಾನಗಳಲ್ಲಿ ವಿಶ್ವಕರ್ಮ ಸಮಾಜದವರಿಗೆ ಟ್ರಸ್ಟಿ ಹಾಗೂ ಸದಸ್ಯರಾಗಿ ನಿಯೋಜಿಸಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು. ಅಧ್ಯಕ್ಷ ಬಸಾಪುರದ ನಾಗೇಂ ದ್ರಾಚಾರ್‌, ಗೌರವಾಧ್ಯಕ್ಷ ಎನ್‌. ಪೂರ್ವಾಚಾರ್‌, ಉಪಾಧ್ಯಕ್ಷ ಬಿ. ಸಿದ್ದಾಚಾರ್‌, ಬಸವರಾಜಾಚಾರ್‌ ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!