ತಂತ್ರಜ್ಞಾನ, ಸುಸ್ಥಿರತೆ ಅಳವಡಿಕೆಯಿಂದ ವಿಮೆ, ಬ್ಯಾಂಕಿಂಗ್ ಸುಭ

ತಂತ್ರಜ್ಞಾನ, ಸುಸ್ಥಿರತೆ ಅಳವಡಿಕೆಯಿಂದ ವಿಮೆ, ಬ್ಯಾಂಕಿಂಗ್ ಸುಭ

ದಾವಣಗೆರೆ ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ್

ದಾವಣಗೆರೆ, ಸೆ. 11 – ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿ ಸುಸ್ಥಿರ ಅಭ್ಯಾಸ ಗಳನ್ನು ಸಂಯೋಜಿಸುವ ಮಾರ್ಗವು ಹಲವಾರು ಅಡಚಣೆಗಳಿಂದ ತುಂಬಿದ್ದರೂ, ಉತ್ತಮ ಅವಕಾಶಗಳ ಸಾಮರ್ಥ್ಯವು ಅಪಾರವಾಗಿದೆ. ನಾವೀನ್ಯತೆಯನ್ನು ಅಳವಡಿಸಿಕೊಳ್ಳುವುದರಲ್ಲಿ ಯಶಸ್ಸು ಅಡಗಿದೆ ಎಂದು ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ .ಸಿ.ಎಂ. ತ್ಯಾಗರಾಜ್ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯ ವ್ಯವಹಾರ ನಿರ್ವಹಣೆ ವಿಭಾಗದ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ‘ಬ್ಯಾಂಕಿಂಗ್ ಮತ್ತು ವಿಮಾ ವಲಯದಲ್ಲಿ ಸುಸ್ಥಿರತೆ ಮತ್ತು ತಂತ್ರಜ್ಞಾನ: ಸವಾಲುಗಳು ಮತ್ತು ಅವಕಾಶಗಳು’ ಕುರಿತ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸುಸ್ಥಿರ ಹಣಕಾಸಿನ ಭವಿಷ್ಯದಲ್ಲಿ ಪರಿಸರ, ಸಾಮಾಜಿಕ ಮತ್ತು ಆಡಳಿತದ ಜವಾಬ್ದಾರಿ ನಿರ್ವಹಣೆಯಲ್ಲಿ ಕೈಗೊಳ್ಳುವ ನಿರ್ಧಾರಗಳು ಮುಖ್ಯವಾಗಿವೆ. ಡಿಜಿಟಲ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ, ಬ್ಲಾಕ್‍ಚೈನ್ ಮತ್ತಿತರೆ ತಾಂತ್ರಿಕತೆಗಳು, ಬ್ಯಾಂಕ್‍ಗಳು ಮತ್ತು ವಿಮಾದಾರರು ಸಮರ್ಥವಾಗಿ ಸೇವೆ ಒದಗಿಸಲು ಅವಕಾಶ ಮಾಡಿಕೊಡುತ್ತದೆ. ಹೊಸ ಬೆಳವಣಿಗೆಗೆ ಪೂರಕವಾಗಿ ಕೆಲಸ ಮಾಡಲು ಸಹಕಾರಿಯಾಗಿವೆ. ಅವುಗಳ ಸದ್ಬಳಕೆಯೂ ಮುಖ್ಯ ಎಂದು ತಿಳಿಸಿದದರು.

ತಂತ್ರಜ್ಞಾನವು ಬ್ಯಾಂಕಿಂಗ್ ಮತ್ತು ವಿಮಾ ಕ್ಷೇತ್ರಗಳಲ್ಲಿನ ಅನೇಕ ಆವಿಷ್ಕಾರಗಳ ಹಿಂದಿನ ಚಾಲನಾ ಶಕ್ತಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇವುಗಳ ಬೆಳವಣಿಗೆಯ ವೇಗಕ್ಕೆ ತಕ್ಕಂತೆ ಸುಸ್ಥಿರತೆಯ ಕಾಳಜಿಯೂ ಮುಖ್ಯ ಆದ್ಯತೆ ಆಗಬೇಕಾಗಿದೆ. ಬೆಳವಣಿಗೆಯ ಅವಕಾಶಗಳ ಜೊತೆಗೆ ಹೊಸ ಸವಾಲುಗಳು ಎದುರಾಗುತ್ತಿವೆ. ಅವುಗಳನ್ನು ನಿರ್ವಹಿಸುವ ಕೌಶಲ್ಯವೂ ಅನಿವಾರ್ಯವಾಗಿದೆ ಎಂದು ತಿಳಿಸಿದರು.

ಬ್ಯಾಂಕಿಂಗ್ ಮತ್ತು ವಿಮಾ ಕಂಪನಿಗಳು ಡಿಜಿಟಲ್ ತಂತ್ರಜ್ಞಾನಗಳ ಮೇಲೆ ಅವಲಂಬನೆಯನ್ನು ಹೆಚ್ಚಿಸುವುದರಿಂದ, ಸೈಬರ್‍ ಟಾಕ್‍ಗಳು ಮತ್ತು ಡೇಟಾ ಉಲ್ಲಂಘನೆಗಳ ಅಪಾಯವು ಹೆಚ್ಚು ಸ್ಪಷ್ಟವಾಗುತ್ತದೆ. ಸೂಕ್ಷ್ಮ ಗ್ರಾಹಕ ಡೇಟಾವನ್ನು ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳುವುದು ಅತಿ ಮುಖ್ಯವಾಗಿದೆ. 

ತಂತ್ರಜ್ಞಾನದ ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ಕಾರಣ ನಿಯಂತ್ರಕ ಚೌಕಟ್ಟುಗಳನ್ನು ಮೀರಿಸುತ್ತದೆ, ಹಣಕಾಸು ಸಂಸ್ಥೆಗಳಿಗೆ ಅನಿಶ್ಚಿತತೆಯನ್ನು ಸೃಷ್ಟಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿಶ್ವವಿದ್ಯಾನಿಲಯ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಮಾತನಾಡಿ, ಮೊಬೈಲ್ ಬ್ಯಾಂಕಿಂಗ್, ಡಿಜಿಟಲ್ ವ್ಯಾಲೆಟ್‍ಗಳು ಮತ್ತು ಆನ್‍ಲೈನ್ ವೇದಿಕೆಗಳಿಂದಾಗಿ ಬ್ಯಾಂಕುಗಳು ಭೌತಿಕ ಶಾಖೆಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿವೆ. ಹೀಗಾಗಿ ಶಕ್ತಿಯ ಬಳಕೆ ಕಡಿಮೆಗುತ್ತಿದೆ ಎಂದು ಹೇಳಿದರು.

ಬ್ಲಾಕ್‍ಚೈನ್ ತಂತ್ರಜ್ಞಾನವು ಅದರ ವಿಕೇಂದ್ರೀಕೃತ ಮತ್ತು ಬದಲಾಗದ ಸ್ವಭಾವದೊಂದಿಗೆ, ಬ್ಯಾಂಕಿಂಗ್ ಮತ್ತು ವಿಮಾ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸಲು ಸಾಧ್ಯವಾಗಿದೆ. ಹೆಚ್ಚು ವೇಗವಾಗಿ ಸೇವೆ ಒದಗಿಸಲು ನೆರವಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ ವಿಶ್ವವಿದ್ಯಾಲಯದ ಪ್ರೊ. ಎಸ್.ಸಿ. ಪಾಟೀಲ ವಿಶೇಷ ಉಪನ್ಯಾಸ ನೀಡಿದರು. ಕುಲಸಚಿವ ಮತ್ತು ವಿಭಾಗದ ಅಧ್ಯಕ್ಷ ಪ್ರೊ. ಆರ್. ಶಶಿಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾಂಗ ಕುಲಸಚಿವ ಪ್ರೊ. ಸಿ.ಕೆ. ರಮೇಶ, ಪ್ರೊ. ಜೆ.ಕೆ. ರಾಜು ಉಪಸ್ಥಿತರಿದ್ದರು. 

ಕಾರ್ಯಕ್ರಮದ ಸಂಯೋಜಕರಾದ ಡಾ.ಸುನಿತಾ ಆರ್. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

error: Content is protected !!