ಹರಿಹರ : ವಿವಾಹ ಮಹೋತ್ಸವ ಸರಳೀಕರಣಕ್ಕೆ ಇಸ್ಲಾಂ ಧರ್ಮದ ಬೆಂಬಲ

ಹರಿಹರ : ವಿವಾಹ ಮಹೋತ್ಸವ ಸರಳೀಕರಣಕ್ಕೆ ಇಸ್ಲಾಂ ಧರ್ಮದ ಬೆಂಬಲ

ಹರಿಹರ, ಆ. 25 – ವಿವಾಹ ಮಹೋತ್ಸವಗಳ ಸರಳೀಕರಣಕ್ಕೆ ಇಸ್ಲಾಂ ಧರ್ಮ ಬೆಂಬಲ ನೀಡುತ್ತದೆ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.

ಹಿಂದೂಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ, ಲಾರಿ ಮಾಲೀಕರು ಮತ್ತು ಚಾಲಕರ ಸಂಘದಿಂದ ನಗರದ ಭಾಗೀರಥಿ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಿದ್ದ ಮುಸ್ಲಿಂ ಸಮುದಾಯದವರ ಸಾಮೂಹಿಕ ವಿವಾಹ  ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ವಿವಾಹ ಸೇರಿದಂತೆ, ಕುಟುಂಬದ ಇತರೆ ಶುಭ ಮಹೋತ್ಸವಗಳನ್ನು ಸರಳವಾಗಿ ಆಚರಿಸಿದವರಿಗೆ ಪುಣ್ಯ ಪ್ರಾಪ್ತಿಯಾಗುತ್ತದೆ. ಪ್ರವಾದಿ ಮೊಹಮ್ಮದ್ ರವರೂ ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ, ನಮಗೆಲ್ಲ ಮಾದರಿಯಾಗಿದ್ದಾರೆಂದರು.

ಕಾಂಗ್ರೆಸ್ ಮುಖಂಡ ನಂದಿಗಾವಿ ಶ್ರೀನಿವಾಸ್ ಮಾತನಾಡಿ, ವಿವಾಹಕ್ಕೆ ಮಾಡಬೇಕಿದ್ದ ಖರ್ಚನ್ನು ನಿಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಿ, ಆದರ್ಶ ಜೀವನ ನಡೆ ಸಿರಿ ಎಂದು ನವದಂಪತಿಗಳಿಗೆ ಕಿವಿ ಮಾತು ಹೇಳಿದರು.

ಸಮರ್ಥ ಎಸ್.ಎಸ್. ಮಲ್ಲಿಕಾರ್ಜುನ ಮಾತನಾಡಿ, ಮಕ್ಕಳ ವಿವಾಹಗಳನ್ನು ನೆರವೇ ರಿಸಿದ ಕುಟುಂಬದವರು ಹಲವು ವರ್ಷಗಳ ಕಾಲ ಆರ್ಥಿಕ ಸಂಕಷ್ಟಕ್ಕೆ ಈಡಾಗುತ್ತಾರೆ. ವಿವಾಹಗಳನ್ನು ಸರಳವಾಗಿ ಆಚರಿಸುವ ಪರಂಪರೆ ಸಮಾಜದಲ್ಲಿ ಬೆಳೆಯಬೇಕೆಂದರು.

ಅಂಜುಮನ್ ಸಂಸ್ಥೆ ಅಧ್ಯಕ್ಷ ಸೈಯದ್ ಏಜಾಜ್ ಮಾತನಾಡಿ, ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 8 ಜೋಡಿ ನವದಂಪತಿಗಳಿಗೆ ತಲಾ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ದಿನ ನಿತ್ಯದ ವಸ್ತುಗಳನ್ನು ಆಯೋಜಕರು ನೀಡಿರುವುದು ಶ್ಲ್ಯಾಘನೀಯ ಎಂದರು.

ಹಿಂದೂಸ್ಥಾನ್ ಟ್ರೇಡರ್ಸ್ ವೆಲ್ಫೇರ್ ಕಮಿಟಿ ಮುಖಂಡ ಅಬು ತುರಾಬ್ ಮಾತನಾಡಿ, ಎಲ್ಲಿಯೂ ದೇಣಿಗೆ ಎತ್ತದೆ ಲಾರಿ ಮಾಲೀಕರು, ಚಾಲಕರು ಹಾಗೂ ಕೆಲವು ವ್ಯಾಪಾರಿಗಳು ಪರಸ್ಪರ ಹಣ ಹಾಕಿ ಈ ಮಹೋತ್ಸವ ಆಯೋಜಿಸಿದೆ. ಇಂತಹ ಮಹೋತ್ಸವಗಳಲ್ಲಿ ಮದುವೆಯಾದ ದಂಪತಿಗಳಿಗೆ ವಕ್ಫ್ ಅಥವಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಪ್ರೋತ್ಸಾಹ ಧನ ನೀಡುವ ಯೋಜನೆಯನ್ನು ಸರ್ಕಾರ ಜಾರಿ ಮಾಡಬೇಕೆಂದರು.

ಅಂಜುಮನ್ ಸಂಸ್ಥೆ ಕಾರ್ಯದರ್ಶಿ ಆಸಿಫ್ ಜುನೈದಿ, ನಗರಸಭಾ ಸದಸ್ಯರಾದ ಎಂ.ಎಸ್. ಬಾಬುಲಾಲ್, ಸೈಯದ್ ಅಲೀಂ, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಯೂಸುಫ್, ಕಾರ್ಯದರ್ಶಿ ಜಕಾಉಲ್ಲಾ, ಪದಾಧಿಕಾರಿಗಳಾದ ಜಪಾನ್ ರಫೀಕ್, ಮೊಹ್ಮದ್ ರಫೀಕ್, ಫಯಾಜ್ ಅಹ್ಮದ್, ಸೈಯದ್ ಅಬೂಜರ್, ಕರೀಂ ಸಾಬ್, ಸೈಯದ್ ಇಸ್ಮಾಯಿಲ್, ಮಹಬೂಬ್ ಸಾಬ್, ಬಿಸ್ಮಿಲ್ಲಾ ರಫೀಕ್, ಅಸ್ಲಂ, ಮೊಹ್ಮದ್ ರಫೀಕ್, ಶಶಿನಾಯ್ಕ್, ದೋಸ್ತಾನಾ ಖಲೀಲ್ ಸಾಬ್, ಹಾಜಿ ಅಲಿ,  ಸೈಯದ್ ಸನಾಉಲ್ಲಾ, ಗುತ್ತೂರು ನಾಸಿರ್ ಪೈಲ್ವಾನ್, ಕೆ. ರಿಯಾಜ್ ಅಹ್ಮದ್, ಸೈಯದ್ ಜಬಿಉಲ್ಲಾ, ಗೌಸ್‍ಪೀರ್, ಸೈಯದ್ ಮುಜಾಮ್ಮಿಲ್, ಆಸಿಫ್ ಅಖ್ತರ್, ರಹಮಾನ್ ಸಾಬ್, ಅಬು ಸೈಯದ್, ಅಬು ಸ್ವಾಲೇಹಾ, ದಾದಾಪೀರ್ ಭಾನುವಳ್ಳಿ ಇದ್ದರು.

error: Content is protected !!