ದಾವಣಗೆರೆ, ಆ.25- ಇಲ್ಲಿನ ಕೇಂದ್ರ ಗ್ರಂಥಾಲಯದಿಂದ ನಗರದ ಸಿಲ್ವರ್ ಜ್ಯೂಬಿಲಿ ಶಾಖಾ ಗ್ರಂಥಾಲಯದಲ್ಲಿ ಐ.ಎ.ಎಸ್ ಪರೀಕ್ಷೆಯಲ್ಲಿ 101ನೇ ರಾಂಕ್ ಪಡೆದಿರುವ ಸೌಭಾಗ್ಯ ಬೀಳಗಿ ಮಠ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸೌಭಾಗ್ಯ ಬೀಳಗಿ ಮಠ ಅವರು, ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳು ಸಮಯ ಪರಿಪಾಲನೆ, ಶಿಸ್ತಿನ ಓದು, ವಿಷಯ ಗ್ರಹಿಕೆ ಮತ್ತು ಓದಿದ ವಿಚಾರ ಪುನರಾವರ್ತನೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ದಿನ ನಿತ್ಯ ಓದಿನ ಸಮಯವನ್ನು ಪೂರ್ವ ನಿಯೋಜಿತವಾಗಿ ಸಜ್ಜುಗೊಳಿಸಿಕೊಳ್ಳಬೇಕು ಎಂದು ಗ್ರಂಥಾಲಯದಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ತಿಳಿಸಿದರು.
ಈ ವೇಳೆ ಗ್ರಂಥಾಲಯದ ಉಪ ನಿರ್ದೇಶಕ ಪಿ.ಆರ್. ತಿಪ್ಪೇಸ್ವಾಮಿ, ಶರಣಯ್ಯ ಬೀಳಗಿ ಮಠ, ಪತ್ರಕರ್ತ ಎಚ್.ಬಿ. ಮಂಜುನಾಥ, ಗ್ರಂಥಾಲಯ ಸಿಬ್ಬಂದಿಗಳಾದ ಬಿ.ಇ. ಮಹಾಸ್ವಾಮಿ, ಕೆ. ಗೋಪಾಲ, ಸಂಗಣ್ಣ ಬೆಳಗಲ್ಲ, ಮಂಜುನಾಥ ಎಸ್.ಬಗರಿ, ಎಂ.ಆರ್. ಪರಶುರಾಮಪ್ಪ ಇತರರಿದ್ದರು.