ವಿದ್ಯಾಭ್ಯಾಸವೇ ವಿದ್ಯಾರ್ಥಿಗಳ ಸಾಧನೆಯಾಗಬೇಕು

ವಿದ್ಯಾಭ್ಯಾಸವೇ ವಿದ್ಯಾರ್ಥಿಗಳ ಸಾಧನೆಯಾಗಬೇಕು

ಆನಗೋಡಿನ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ

ದಾವಣಗೆರೆ, ಆ. 25 – ಭಾರತ ಜನ ಸಂಖ್ಯೆ, ಯುವ ಸಂಪತ್ತು, ಅರ್ಥೈಸುವಿಕೆಯಲ್ಲಿ ಜಗತ್ತಿಗೆ ಮೊದಲ ಸ್ಥಾನದಲ್ಲಿದೆ. ಇದನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಯುವ ಸಂಪತ್ತು ಸದ್ಬಳಕೆಯಾಗಬೇಕು, ಇದಕ್ಕಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರ ಉಳಿದು ಕಲಿಯುವ ಶಿಕ್ಷಣ ಜೀವನಕ್ಕೆ ಮಾರ್ಗಸೂಚಿ ಮತ್ತು ಸದುಪಯೋಗವಾಗಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣ ವರ ತಿಳಿಸಿದರು.

 ದಾವಣಗೆರೆ ತಾಲ್ಲೂಕಿನ ಆನಗೋಡು ಜಿ. ಚನ್ನಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮಾತೃಶ್ರೀ ನಗರ ಮತ್ತು ಗ್ರಾಮೀಣಾಭಿವೃದ್ದಿ ಸಂಸ್ಥೆ, (ದಾವಣಗೆರೆ) ಇವರ ಸಂಯುಕ್ತಾಶ್ರಯದಲ್ಲಿ ನಿನ್ನೆ ಏರ್ಪಡಿಸಲಾದ ಕಲಿಕಾಸಕ್ತಿ ಮತ್ತು ದುಶ್ಚಟಗಳಿಂದ ದೂರ ಉಳಿಯುವ ಕುರಿತು ಏರ್ಪಡಿಸಲಾದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು  ಮಾತನಾಡಿದರು.

ವಿದ್ಯಾರ್ಥಿಗಳಿಗೆ ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಶಿಕ್ಷಣದ ಹಂತಗಳಲ್ಲಿ
ಕಲಿಕಾಸಕ್ತಿ ಮೂಡಿಸುವುದು ಬಹಳ ಅಗತ್ಯವಾಗಿರುತ್ತದೆ. 

ಇದರಿಂದ ಮಕ್ಕಳಲ್ಲಿನ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ಹೆಚ್ಚಿನ ಸಹಕಾರಿಯಾಗಲಿದೆ. ವಿವಿಧ ಹಂತದ ತರಗತಿಗಳ ಪಠ್ಯಕ್ರಮಗಳು ಸಾಮಾಜಿಕ, ಆರ್ಥಿಕ, ವ್ಶೆಜ್ಞಾನಿಕ ಬದಲಾವಣೆ ಆದಂತೆ ಪರಿಷ್ಕರಣೆಗೆ ಒಳಗಾಗಲಿದ್ದು ಇದು ನಿರಂತರ ಪ್ರಕ್ರಿಯೆಯಾಗಿರುತ್ತದೆ. ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗಷ್ಟೆ ಸೀಮಿತವಾಗಿ ವ್ಯಾಸಂಗ ಮಾಡದೆ, ವಿಷಯ ಅರ್ಥೈಸಿ ಕೊಂಡು ಜೀವನಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಓದಬೇಕು ಎಂದರು.

ವಿದ್ಯಾರ್ಥಿಗಳಿಗೆ ಹಿಂದೆ ಗುರು, ಮುಂದೆ ಗುರಿ ಇರಬೇಕೆಂಬಂತೆ ವಿದ್ಯಾರ್ಥಿ ಜೀವನವಿರಬೇಕು, ಇದರಿಂದ ಯಾವುದೇ ದುಶ್ಚಟಗಳಿಗೆ ಬಲಿಯಾಗುವುದಿಲ್ಲ. ಮದ್ಯ, ಧೂಮಪಾನ, ಮಾದಕ ವಸ್ತುಗಳ ಸೇವನೆಯಷ್ಟೇ ದುಶ್ಚಟವಲ್ಲ, ಅನಾವಶ್ಯಕ ಮೊಬೈಲ್ ಬಳಕೆ, ಸುಳ್ಳು ಹೇಳುವುದು, ಪೋಷಕರಿಗೆ ನಿಲುಕಲಾರದ ದುಬಾರಿ ವಸ್ತುಗಳು ಬೇಕೆಂದು ಒತ್ತಾಯ ಮಾಡುವುದು, ಇವೆಲ್ಲವೂ ಮಕ್ಕಳಿಂದ ದೂರವಾಗಿ ಪೋಷಕರ ಅಪೇಕ್ಷೆಗನುಗುಣವಾಗಿ ನಡೆದುಕೊಂಡು ಚನ್ನಾಗಿ ಓದುವ ಮೂಲಕ ತಂದೆ, ತಾಯಿಯ ಋಣ ತೀರಿಸಬೇಕೆಂದು ಶಪಥ ಮಾಡಬೇಕೆಂದು ವಿದ್ಯಾರ್ಥಿಗಳ ಕುರಿತು ಮಾತನಾಡಿದರು.

 ಕಾಲೇಜಿನ ಪ್ರಾಂಶುಪಾಲ ಕಾವೇರಿ ಗೌಡರ್ ಅಧ್ಯಕ್ಷತೆ ವಹಿಸಿದ್ದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಬಿ. ಧನಂಜಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಇತಿಹಾಸ ಉಪನ್ಯಾಸಕರ ಹೆಚ್.ಪಿ. ಯಶವಂತ್ ಕುಮಾರ್, ಮಾತೃಶ್ರೀ ಸಂಸ್ಥೆ ಅಧ್ಯಕ್ಷ ಕಿರಣ್ ಎ.ಎಲ್. ಕಲಿಕಾಸಕ್ತಿ ಕುರಿತಂತೆ ಮಾತನಾಡಿದರು. ವಿದ್ಯಾರ್ಥಿ ನವೀತಾ ಸ್ವಾಗತಿಸಿದರು, ಮಾತೃಶ್ರೀ ಸಂಸ್ಥೆ ಲಕ್ಷ್ಮಿ.ಪಿ ನಿರೂಪಿಸಿದರು. ಉಪನ್ಯಾಸಕ ಡಾ. ಅಜ್ಜಯ್ಯ ವಂದಿಸಿದರು.

error: Content is protected !!