ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ದಿಢೀರ್ ಭೇಟಿ : ಮೂಲ ಸೌಲಭ್ಯಗಳ ಕೊರತೆಗೆ ಬೇಸರ

ಅಂಗನವಾಡಿ ಕೇಂದ್ರಗಳಿಗೆ ನ್ಯಾಯಾಧೀಶರ ದಿಢೀರ್ ಭೇಟಿ : ಮೂಲ ಸೌಲಭ್ಯಗಳ ಕೊರತೆಗೆ ಬೇಸರ

ದಾವಣಗೆರೆ, ಜು.22-ಸ್ಥಳೀಯ ಆಜಾದ್ ನಗರದಲ್ಲಿನ ಮುದ್ದಾಬೋವಿ ಕಾಲೋನಿಯಲ್ಲಿನ ಅಂಗನವಾಡಿ ಕೇಂದ್ರಗಳಿಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಹಾವೀರ ಮ.ಕರೆಣ್ಣವರ ಅವರು ಇಂದು ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದಾಗ ಅಲ್ಲಿನ ಮೂಲಭೂತ ಸೌಕರ್ಯಗಳ ಕೊರತೆ ಕಂಡು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.  

ನ್ಯಾಯಾಲಯದ ಸಿಬ್ಬಂದಿಯವರು ಹಾಗೂ ಅಂಗನವಾಡಿ ಮೇಲ್ವಿಚಾರಕರೊಂದಿಗೆ ಕೇಂದ್ರಕ್ಕೆ ಭೇಟಿ ನೀಡಲಾಯಿತು. ಅಂಗನವಾಡಿ ಕೇಂದ್ರಗಳ ಕಟ್ಟಡದಲ್ಲಿ ಸರಿಯಾದ ಗಾಳಿ ಮತ್ತು ಬೆಳಕಿನ ವ್ಯವಸ್ಥೆ ಇರಲಿಲ್ಲ, ಇಲ್ಲಿ ಶೌಚಾಲಯ ಕೂಡ ಇಲ್ಲ. ಅಂಗನವಾಡಿ ಕಾರ್ಯಕರ್ತೆಯರು ಅಂಗನವಾಡಿಗೆ ಬರುವ ಮಕ್ಕಳ ದೈನಂದಿನ ಹಾಜರಿಯನ್ನು ಭರ್ತಿ ಮಾಡಿರುವುದಿಲ್ಲ. ವೆಂಕ ಭೋವಿ ಕಾಲೋನಿಯಲ್ಲಿನ ಅಂಗನವಾಡಿ ಕೇಂದ್ರದಲ್ಲಿ ಕಳೆದ ಒಂದು ವಾರದಿಂದ ಹಾಜರತಿ ಪುಸ್ತಕದಲ್ಲಿ ನಮೂದು ಮಾಡಿಲ್ಲ. ಇಲಾಖೆಯಿಂದ ಮಕ್ಕಳಿಗೆ ಆಟಿಕೆ ಸಾಮಾನುಗಳನ್ನು ಪೂರೈಸಿದ್ದರೂ ಕೂಡ ಅವುಗಳನ್ನು ಗಂಟು ಮೂಟೆ ಕಟ್ಟಿ ಮಕ್ಕಳ ಕೈಗೆ ಸಿಗದ ಹಾಗೆ ಇರಿಸಲಾಗಿತ್ತು. ಊಟವನ್ನು ಪರಿಶೀಲಿಸಿ ನೋಡಿದಾಗ ಇಲಾಖೆಯ ನಿರ್ದೇಶನದಂತೆ ಊಟವನ್ನು ತಯಾರಿಸಿರಲಿಲ್ಲ. ಮಾಡಲಾಗಿದ್ದ ಅನ್ನ ಮತ್ತು ಉಪ್ಪಿಟ್ಟಿನಲ್ಲಿ ಪೋಷಕಾಂಶಗಳು ಕೊರತೆ ಕಂಡು ಬಂದಿತು.

ಅವ್ಯವಸ್ಥೆಯನ್ನು ಕಂಡ ನ್ಯಾಯಾಧೀಶರು ಅಂಗನವಾಡಿ ಕಾರ್ಯಕರ್ತೆಯರಿಗೆ, ಅಂಗನವಾಡಿ ಸಹಾಯಕರಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ಸರ್ಕಾರದ ಆಶಯ ಮತ್ತು ಉದ್ದೇಶಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಇಲ್ಲಿನ ಕೊರತೆಗಳ ಬಗ್ಗೆ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ತಿಳಿಸಿದರು.

error: Content is protected !!