ದಿನನಿತ್ಯದ ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ

ದಿನನಿತ್ಯದ ಬದುಕಿನಲ್ಲಿ ಸಕಾರಾತ್ಮಕ ಚಿಂತನೆಗಳಿರಲಿ

ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಕಾರ್ಯ ಒತ್ತಡ ನಿರ್ವಹಣೆ ಕಾರ್ಯಾಗಾರದಲ್ಲಿ ಮನಃಶಾಸ್ತ್ರಜ್ಞ ಡಾ. ಸುಭಾಷ್ ಚಂದ್ರನ್

ದಾವಣಗೆರೆ, ಜೂ.12- ಪ್ರತಿಯೊಬ್ಬ ರಲ್ಲೂ  ದಿನಕ್ಕೆ 40 ರಿಂದ 80 ಸಾವಿರದವರೆಗೆ ಆಲೋಚನೆಗಳು ಮನಸ್ಸಿನಲ್ಲಿ ಮೂಡಲಿದ್ದು, ಇದರಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಆಯ್ದುಕೊಂಡಾಗ ಮಾತ್ರ ದಿನದ ಬದುಕಿನಲ್ಲಿ ಒತ್ತಡ ಮುಕ್ತರಾಗಿ ಲವಲವಿಕೆಯಿಂದ ಇರಬಹುದೆಂದು ಮನಃಶಾಸ್ತ್ರಜ್ಞ ಡಾ. ಸುಭಾಷ್ ಚಂದ್ರನ್ ತಿಳಿಸಿದರು. 

ಅವರು ಬುಧವಾರ ನಗರದ ಜಿಲ್ಲಾ ಪೊಲೀಸ್ ಕಚೇರಿ ಸಭಾಂಗಣದಲ್ಲಿ  ಜಿಲ್ಲೆಯ ಪೊಲೀಸ್ ಅಧಿಕಾರಿ ಮತ್ತು  ಸಿಬ್ಬಂದಿಗಳಿಗೆ  ಕಾರ್ಯ ಒತ್ತಡ ನಿರ್ವಹಣೆ ಬಗ್ಗೆ ಒಂದು ದಿನದ ಕಾರ್ಯಾಗಾರದಲ್ಲಿ ಪೊಲೀಸ್ ಕರ್ತವ್ಯದ ಸಮಯದಲ್ಲಿ ಹಾಗೂ ವೈಯುಕ್ತಿಕ ಜೀವನದಲ್ಲಿ ಹೇಗೆ ಕಾರ್ಯ ಒತ್ತಡ ನಿರ್ವ ಹಣೆ ಮಾಡುವ ಬಗ್ಗೆ ಉಪನ್ಯಾಸ ನೀಡಿದರು. 

ಮನುಷ್ಯನಿಗೆ ಮಲಗಿ, ಎದ್ದಾಗಿನಿಂದ ಮತ್ತೆ ರಾತ್ರಿ ಮಲಗುವವರೆಗೂ ಅನೇಕ ಚಿಂತ ನೆಗಳು ಬರಲಿವೆ. ಇದರಲ್ಲಿ ಕರ್ತವ್ಯದ ಸ್ಥಳ ಇರಬಹುದು, ಕುಟುಂಬದ ಮತ್ತು ನೆರೆಹೊರೆ ಯವರ ಹಾಗೂ ಸಂಬಂಧಿಕರ ಬಗ್ಗೆ ಆಲೋಚಗಳು ಮೂಡುತ್ತವೆ. ಇವುಗಳಲ್ಲಿ ಕೆಲವು ಭಾವನಾತ್ಮಕ, ಕೆಲವು ಸಂತೋಷ, ದುಃಖ, ಕರುಣೆ, ಪ್ರೀತಿ, ಭಕ್ತಿ ಸೇರಿದಂತೆ ಅನೇಕ ಭಾವವಿಕಾರಗಳು ಮೂಡಲಿವೆ. ಆದರೆ, ಇವುಗಳಲ್ಲಿ ಯಾವು ಸಕಾರಾತ್ಮಕವೋ ಅಂತಹ ಆಲೋಚನೆಗಳನ್ನು ಮಾತ್ರ ಪರಿಗಣಿಸಿ, ನಕಾರಾತ್ಮಕ ಚಿಂತನೆಗಳನ್ನು ಕೈಬಿಡಬೇಕು. ಕೆಲವು ಸಂದರ್ಭಗಳಲ್ಲಿ ಮಕ್ಕಳ ಬಗ್ಗೆ ಚಿಂತನೆ ಮಾಡಿ ಇತರೆಯವರಿಗೆ ಹೋಲಿಕೆ ಮಾಡುವುದುಂಟು. ಆದರೆ, ಸಾಮರ್ಥ್ಯವನ್ನು ಹೆಚ್ಚಿಸಲು ಪ್ರಯತ್ನಪಡುವ ನಿಟ್ಟಿನಲ್ಲಿ ಏನು ಮಾಡಬೇಕೆಂಬ ಆಲೋಚನೆ ಬಹಳ ಮುಖ್ಯವಾಗಿರುತ್ತದೆ ಎಂದರು. 

ಒತ್ತಡಗಳಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ಒತ್ತಡಗಳನ್ನು ತಲೆಬಾರವಾಗಿ ತೆಗೆದುಕೊಳ್ಳದೇ ಎಲ್ಲಾ ಕೆಲಸಗಳನ್ನು ಸೂಕ್ಷ್ಮವಾಗಿ ಗಮನಿಸಿ, ಸೂಕ್ಷ್ಮತೆಯಿಂದ ನಿರ್ವಹಣೆ ಮಾಡಿದಾಗ ಒತ್ತಡದ ಕೆಲಸಗಳನ್ನು ನಿರ್ವಹಿಸಲು ಸಾಧ್ಯ ವಾಗಲಿದೆ. ಒಟ್ಟಾರೆ ಸಕಾರಾತ್ಮಕ ಚಿಂತನೆಗಳು ಒತ್ತಡದ ಬದುಕಿನಿಂದ ಹೊರಬರಲು ಸಹಕಾರಿಯಾಗಲಿದೆ ಎಂದರು. 

ಕಾರ್ಯಗಾರದಲ್ಲಿ ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯ ಪ್ರಯುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ್ ಸಂತೋಷ  ಮಾತನಾಡಿ, ಪೊಲೀಸ್ ಕರ್ತವ್ಯದ ಸಮಯದಲ್ಲಿ ಹಲ ವಾರು ಒತ್ತಡಗಳಲ್ಲಿ ಅಂದರೆ ದೈಹಿಕವಾಗಿ, ಮಾನಸಿಕವಾಗಿ ಹಲವಾರು ಒತ್ತಡಗಳಲ್ಲಿ ಕಾರ್ಯರ್ವಹಿಸಬೇಕಾಗಿರುತ್ತದೆ. ಜೊತೆಗೆ ವೈಯುಕ್ತಿಕ ಜೀವನವೂ ಕೂಡ ಬಹು ಮುಖ್ಯವಾಗಿರುತ್ತದೆ. ಇಂತಹ  ಸಮಯದಲ್ಲಿ ಜೀವನ ಸಮತೋಲನವಾಗಿರಿಸಿಕೊಳ್ಳಲು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯ ಕೂಡ ತುಂಬಾ ಮುಖ್ಯವಾಗಿ ರುತ್ತದೆ. ಆದ್ದರಿಂದ ಜಿಲ್ಲೆಯ ಪೊಲೀಸ್ ಅಧಿಕಾರಿ ಸಿಬ್ಬಂದಿಗಳಿಗೆ ಅನುಕೂಲವಾಗ ಲೆಂದು ಈ ಕಾರ್ಯಾಗಾರವನ್ನು ಏರ್ಪಡಿ ಸಿದ್ದು, ಕಾರ್ಯಾಗಾರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ಮಂಜುನಾಥ್, ನಗರ ಉಪ ವಿಭಾಗದ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಪ್ರಶಾಂತ್ ಸಿದ್ದನಗೌಡರ್, ಉಜ್ಜನಿಕೊಪ್ಪ, ಬೆರಳು ಮುದ್ರೆ ಘಟಕದ ರುದ್ರೇಶ್ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯಕ ಆಡಳಿತಾಧಿಕಾರಿ ಮೆಹಬೂಬ್ ಹಾಗೂ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.

error: Content is protected !!