ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ

ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ

ಜಗಳೂರಿನಲ್ಲಿ ಜರುಗಿದ ತರಬೇತಿ ಕಾರ್ಯಕ್ರಮದಲ್ಲಿ ಬಿ.ಓ ಮಲ್ಲಿಕಾರ್ಜುನ ಸಲಹೆ

ದಾವಣಗೆರೆ, ಮೇ 31- ಬರ ನಿರೋಧಕ ಹಾಗೂ ಮಧ್ಯಮ ಅವಧಿ ತೊಗರಿ ತಳಿಯಾದ ಟಿಎಸ್-3ಆರ್ ಅನ್ನು ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ಬೆಳೆಯಬೇಕು ಎಂದು ಬೇಸಾಯ  ತಜ್ಞರಾದ ಬಿ.ಓ. ಮಲ್ಲಿಕಾರ್ಜುನ್‌  ತಿಳಿಸಿದರು.    

ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಜಗಳೂರು ತಾಲ್ಲೂಕಿನ ಗುತ್ತಿದುರ್ಗ ಗ್ರಾಮದಲ್ಲಿ  ಹಮ್ಮಿಕೊಳ್ಳಲಾಗಿದ್ದ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ತೊಗರಿ ಬೆಳೆಯ ಮುಂಚೂಣಿ ಪ್ರಾತ್ಯಕ್ಷಿಕೆಯ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮೆಕ್ಕೆಜೋಳವನ್ನು ಏಕ ಬೆಳೆಯಾಗಿ ಬೆಳೆದಾಗ ನಷ್ಟವಾಗ ಬಹುದು, ಆ ಕಾರಣದಿಂದ ಮೆಕ್ಕೆಜೋಳದಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯವಾದ ತೊಗರಿಯನ್ನು ಬೆಳೆಯುವುದು ಸೂಕ್ತ.  ಪ್ರತಿ ಎಕರೆ ತೊಗರಿ ಬೀಜಕ್ಕೆ ಶಿಫಾರಸ್ಸು ಮಾಡಿದ ಜೈವಿಕ ಗೊಬ್ಬರಗಳಾದ ರೈಸೋಬಿಯಂ ಮತ್ತು ರಂಜಕ ಕರಗಿಸುವ ಗೊಬ್ಬರದಿಂದ ಬೀಜೋಪಚಾರ ಮಾಡಿ ಬಿತ್ತನೆ ಮಾಡುವುದರಿಂದ ಶೇಕಡ 25 ರಷ್ಟು ರಾಸಾಯನಿಕ ಗೊಬ್ಬರದಲ್ಲಿ ಕಡಿತಗೊಳಿಸ ಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಕೇಂದ್ರದ ಮುಖ್ಯಸ್ಥರಾದ ಡಾ. ದೇವರಾಜ ಟಿ.ಎನ್  ಮಾತನಾಡಿ, ರೈತರು ಆಧುನಿಕ ತಂತ್ರಜ್ಞಾನಗಳು ಹಾಗೂ ಅಧಿಕ ಇಳುವರಿ ಕೊಡುವ ತಳಿಗಳ ಬಳಕೆಯನ್ನು  ಮಾಡಬೇಕು ಎಂದು ತಿಳಿಸಿದರು. 

ಮಣ್ಣಿನ ಪರೀಕ್ಷೆಯ ಆಧಾರದ ಮೇಲೆ ರಸಗೊಬ್ಬರವನ್ನು ಬಳಸುವುದರಿಂದ ಮಣ್ಣಿನ ಫಲವತ್ತತೆ ಹಾಗೂ ಉತ್ಪಾದನಾ ವೆಚ್ಚವನ್ನು ತಗ್ಗಿಸಬಹುದು ಎಂದು  ಮಣ್ಣು ವಿಜ್ಞಾನಿ   ಹೆಚ್. ಎಂ. ಸಣ್ಣಗೌಡರು ತಿಳಿಸಿದರು.

error: Content is protected !!