ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಾರ್ಥಿಸಿ ದೀಡು ನಮಸ್ಕಾರ

ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಪ್ರಾರ್ಥಿಸಿ ದೀಡು ನಮಸ್ಕಾರ

ದಾವಣಗೆರೆ, ಏ. 30 – ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ, ಕಾಂಗ್ರೆಸ್ ಮುಖಂಡ ವೀರಭದ್ರಸ್ವಾಮಿ ಮಟ್ಟಿಕಲ್ ಅವರು ಇಂದು ದೀಡು ನಮಸ್ಕಾರ ಸೇವೆ ಸಲ್ಲಿಸಿದರು. 

ಬೆಳಿಗ್ಗೆ ಹಳೇಪೇಟೆಯ ಶ್ರೀ ಕೊಟ್ಟೂರೇಶ್ವರ ದೇವಸ್ಥಾನದಿಂದ ಹೊರಟು ಶ್ರೀ ವೀರಭದ್ರೇಶ್ವರ ದೇವಸ್ಥಾನದವರೆಗೆ ಗುಗ್ಗಳದೊಂದಿಗೆ ಉರುಳು ಸೇವೆಯನ್ನು ವೀರಭದ್ರಸ್ವಾಮಿ ನೆರವೇರಿಸಿದರು. ಬಳಿಕ ಬಾಯಿಗೆ ಶಸ್ತ್ರ, ನಾಲಿಗೆಗೆ ಶಿವದಾರ ಧರಿಸಿದರು. ಬಳಿಕ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. 

ವೀರಭದ್ರಸ್ವಾಮಿ ಮಟ್ಟಿಕಲ್ ಅವರು ಮಾತನಾಡಿ, ದಾವಣಗೆರೆಯಲ್ಲಿ   ಶಾಮನೂರು ಶಿವಶಂಕರಪ್ಪ ಮತ್ತು ಎಸ್. ಎಸ್. ಮಲ್ಲಿಕಾರ್ಜುನ್ ಅವರು ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದಾರೆ. ಮತ್ತಷ್ಟು ಅಭಿವೃದ್ಧಿಗೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾರ್ಥಿಸಿ ಈ ಸೇವೆ ನೆರವೇರಿಸಿದ್ದೇನೆ.   ಅವರ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ವೇಳೆ ಕಾಂಗ್ರೆಸ್ ಮುಖಂಡರಾದ ಶಶಿ ಶೇಖರ್, ಅಣಜಿ ಬಸವರಾಜ್ ಮತ್ತಿತರರು ಹಾಜರಿದ್ದರು.

error: Content is protected !!