ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್‌ಗೆ ಭಾರೀ ಬೆಂಬಲ : ಕುರಿ ನೀಡಿ ಸಂಭ್ರಮಿಸಿದ ಗ್ರಾಮಸ್ಥರು

ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್‌ಗೆ ಭಾರೀ ಬೆಂಬಲ : ಕುರಿ ನೀಡಿ ಸಂಭ್ರಮಿಸಿದ ಗ್ರಾಮಸ್ಥರು

ಜಗಳೂರು, ಏ. 28 – ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್ ಕುಮಾರ್ ಅವರು ತಾಲ್ಲೂಕಿನ ಸೊಕ್ಕೆ ಗ್ರಾಮದಲ್ಲಿ ಮತಯಾಚನೆ ನಡೆಸಿದರು. 

ಸೊಕ್ಕೆ ಗ್ರಾಮಕ್ಕೆ ವಿನಯ್ ಕುಮಾರ್ ಅವರು ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಅದ್ಧೂರಿಯಾಗಿ ಬರಮಾಡಿಕೊಂಡರು. ವಿನಯ್ ಕುಮಾರ್ ಅಭಿಮಾನಿಗಳು, ಹಿತೈಷಿಗಳು, ಬೆಂಬಲಿಗರು, ಗ್ರಾಮಸ್ಥರು ಆತ್ಮೀಯವಾಗಿ ಸ್ವಾಗತ ಕೋರಿದರು. 

ಕಹಳೆ ಊದುತ್ತಾ, ಡೋಲು, ತಮಟೆ ಬಾರಿಸುತ್ತಾ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. 

ಕೆಲವರು ವಿನಯ್ ಕುಮಾರ್ ಅವರ ಜೊತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದರು. ಜೊತೆಗೆ ಕುರಿ ನೀಡಿದರು. ಈ ವೇಳೆ ವಿನಯ್ ಕುಮಾರ್ ಅವರು ಕುರಿಯನ್ನು ಹೆಗಲ ಮೇಲಿಟ್ಟುಕೊಂಡಿದ್ದು ಗಮನ ಸೆಳೆಯಿತು. ಜೈಕಾರಗಳು ಮುಗಿಲು ಮುಟ್ಟಿದವು. 

ಈ ವೇಳೆ ಮಾತನಾಡಿದ ವಿನಯ್ ಕುಮಾರ್ ಅವರು ಜಗಳೂರು ಬರಪೀಡಿತ ತಾಲ್ಲೂಕು ಎಂಬ ಹಣೆಪಟ್ಟಿ ಹೊತ್ತಿದೆ. ಈ ತಾಲ್ಲೂಕನ್ನು ಹಸಿರು ನಾಡಾಗಿಸಲು, ನೀರಾವರಿ ಯೋಜನೆಗಳು ಇದುವರೆಗೆ ಕಾರ್ಯಗತ ಗೊಂಡಿಲ್ಲ. ಇಷ್ಟು ವರ್ಷ ಅಧಿಕಾರ ನಡೆಸಿದವರು ಜನರಿಗೆ ಭರವಸೆ ನೀಡಿ ವಂಚಿಸುತ್ತಲೇ ಬಂದಿದ್ದಾರೆ. ಕೆರೆಗಳಿಗೆ ನೀರುಣಿಸುವ ಯೋಜನೆಯು ಸಮರ್ಪಕವಾಗಿ ನಡೆದಿಲ್ಲ, ಈ ಕಾಮಗಾರಿಯು ಮಂದಗತಿಯಲ್ಲಿ ಸಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಇದು ನನ್ನ ಗಮನಕ್ಕೆ ಬಂದಿದೆ. ಜಗಳೂರು ತಾಲ್ಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಲು ಎಲ್ಲಾ ರೀತಿಯಲ್ಲಿಯೂ ಶ್ರಮಿಸುತ್ತೇನೆ. ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು. 

ಜಗಳೂರು ತಾಲ್ಲೂಕಿನಲ್ಲಿ ಹೆಚ್ಚಾಗಿ ಹಿಂದುಳಿದವರೇ ಇದ್ದಾರೆ. ಮಕ್ಕಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ದೊರೆತಿಲ್ಲ, ಹೈಟೆಕ್ ಶಾಲೆಗಳಿಲ್ಲ, ಎಲ್ಲಾ ಸೌಲಭ್ಯಗಳು ಇರುವಂಥ ಕಾಲೇಜುಗಳಿಲ್ಲ, ಹಾಗಾಗಿ, ಜಗಳೂರು ತಾಲ್ಲೂಕಿನ ವಿವಿಧ ಗ್ರಾಮ ಗಳಿಂದ ವಿದ್ಯಾರ್ಥಿಗಳು ದಾವಣಗೆರೆಗೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ. ಜಗಳೂರು ತಾಲ್ಲೂಕಿನ ಎಷ್ಟೋ ಹಳ್ಳಿಗಳಿಗೆ ಇದುವರೆಗೂ ಸರ್ಕಾರಿ ಬಸ್ ಸೌಲಭ್ಯ ಇಲ್ಲ. ಇದರಿಂದ ವಿದ್ಯಾರ್ಥಿನಿ ಯರು ಓದು ನಿಲ್ಲಿಸಿರುವ ವಿಚಾರವೂ ಗಮನಕ್ಕೆ ಬಂದಿದೆ ಎಂದು ತಿಳಿಸಿದರು. 

ಮೆಕ್ಕೆಜೋಳ ಕೋಲ್ಡ್ ಸ್ಟೋರೇಜ್ ಸಹ ಇಲ್ಲಿ ಅತ್ಯವಶ್ಯಕವಾಗಿ ಬೇಕು. ರೈತಾಪಿ ವರ್ಗವೂ ತುಂಬಾನೇ ಕಷ್ಟದಲ್ಲಿದೆ. ಈ ವರ್ಷ ಬರಗಾಲ ತಲೆದೋರಿರುವುದರಿಂದ ರೈತರ ಸಮಸ್ಯೆ ಅರ್ಥವಾಗುತ್ತದೆ. ಇಷ್ಟೊಂದು ವರ್ಷಗಳ ಕಾಲ ಅಧಿಕಾರ ದಲ್ಲಿದ್ದವರು ಯಾಕೆ ಈ ಸಮಸ್ಯೆಗಳ ಪರಿ ಹಾರಕ್ಕೆ ಯತ್ನಿಸಿಲ್ಲ ಎಂಬುದು ಸಾಮಾನ್ಯ ವಾಗಿ ಕಾಡುವ ಪ್ರಶ್ನೆ. ರಾಜಕೀಯ ಇಚ್ಚಾ ಶಕ್ತಿ ಕೊರತೆಯಿಂದಾಗಿ ಆಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ ಎಂದು ವಿನಯ್ ಕುಮಾರ್ ತಿಳಿಸಿದರು. 

ಈ ವೇಳೆ ಸೊಕ್ಕೆ ಗ್ರಾಮದ ಮುಖಂಡರಾದ ಲೋಕರಾಜ್ ನಾಯ್ಕ್, ಹನುಮಂತ, ಹಾಲಪ್ಪ, ಶಿವಣ್ಣ, ಮರೇಗೌಡ್ರು, ಅಂಜಿನಪ್ಪ, ಎಳಿವು ಕೊಟ್ರೇಶ್ ಸೇರಿದಂತೆ ನೂರಾರು ಮಂದಿ ಹಾಜರಿದ್ದರು. 

error: Content is protected !!