ಅಂಬೇಡ್ಕರ್‌ ತತ್ವಾದರ್ಶಗಳನ್ನು ನಾವೆಲ್ಲರೂ ಅಳಡಿಸಿಕೊಳ್ಳಬೇಕು

ಅಂಬೇಡ್ಕರ್‌ ತತ್ವಾದರ್ಶಗಳನ್ನು ನಾವೆಲ್ಲರೂ ಅಳಡಿಸಿಕೊಳ್ಳಬೇಕು

ಜಗಳೂರಿನ ಕಾರ್ಯಕ್ರಮದಲ್ಲಿ ಶಾಸಕ ದೇವೇಂದ್ರಪ್ಪ

ಜಗಳೂರು, ಏ.19- ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದಲೇ ಸರ್ವರಿಗೂ ಸಮಪಾಲು, ಸಮಬಾಳು ತತ್ವದಡಿ ಸೌಲಭ್ಯಗಳು ದೊರೆಯುವಂತಾಗಿದೆ. ಅಂಬೇಡ್ಕರ್‌ರವರ ತತ್ವಾದರ್ಶಗಳನ್ನು ನಾವೆಲ್ಲರೂ ಸಹ ಅಳಡಿಸಿಕೊಳ್ಳಬೇಕಾಗಿದೆ ಎಂದು ಶಾಸಕ ಬಿ.ದೇವೇಂದ್ರಪ್ಪ ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಜಾತ್ಯತೀತ ರಾಷ್ಟ್ರವಾದ ಭಾರತಕ್ಕೆ ವಿಶ್ವಕ್ಕೇ ಮಾದರಿಯಾಗುವಂತಹ ಸಂವಿಧಾನ ವನ್ನು ರಚಿಸಿದ ಕೀರ್ತಿ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಜಗಳೂರು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ಪುತ್ಥಳಿಗೆ ಶಾಸಕರು ಹಾಗೂ ದಲಿತ ಸಂಘಟನೆ ಮುಖಂಡರು ಪುಷ್ಪ ನಮನ ಸಲ್ಲಿಸುವ ಮೂಲಕ, ಗೌರವ ಸಮರ್ಪಣೆ ಸಲ್ಲಿಸಿದರು.

ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿ, ಭಾರತದಲ್ಲಿ ಅಸ್ಪೃಶ್ಯತೆ ನಿವಾರಣೆಯಾಗಬೇಕು. ಜನಸಾಮಾನ್ಯರಿಗೆ ಮೂಲಭೂತ ಕರ್ತವ್ಯ, ಸಮಾನತೆ ಶಿಕ್ಷಣ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಪ್ರತಿ ವರ್ಷವೂ ಅಂಬೇಡ್ಕರ್ ಜಯಂತಿಯನ್ನು ಶಾಲಾ – ಕಾಲೇಜುಗಳು, ಸರ್ಕಾರಿ, ಖಾಸಗಿ ಕಚೇರಿಗಳಲ್ಲಿ ಆಚರಣೆ ಮಾಡಲಾಗುತ್ತದೆ ಎಂದರು.

ದಲಿತ ಮುಖಂಡ ಶಂಭುಲಿಂಗಪ್ಪ ಮಾತನಾಡಿ, ಅಂಬೇಡ್ಕರ್ ಅಂದಿನ ಪರಿಸ್ಥಿತಿಯಲ್ಲಿ ಅವರು ಪಟ್ಟ ನೋವು, ಕಷ್ಟ, ವೇದನೆ ಯಾರೂ ಕೂಡ ಅನುಭವಿಸಿಲ್ಲ. ಆದ್ದರಿಂದ ಅವರ ಶ್ರಮದ ಅರಿವು ಎಲ್ಲರಿಗೂ ಕೂಡ ತಿಳುವಳಿಕೆಯಾಗಬೇಕಾಗಿದೆ. ಜೀವನದ ಆರಂಭದಿಂದ ಮರಣದವರೆಗೂ ಅವಮಾನ ಅನುಭವಿಸಿ, ಜನರಿಗೆ ಸುಖ, ಶಾಂತಿ ಕೊಟ್ಟ ಮಹಾನ್ ತ್ಯಾಗಿಯಾಗಿದ್ದಾರೆ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಸಮಾಜ ಕಲ್ಯಾಣ ಅಧಿಕಾರಿ ಬಿ. ಮಹೇಶ್ವರಪ್ಪ, ಸಿ.ತಿಪ್ಪೇಸ್ವಾಮಿ, ಗ್ಯಾಸ್ ಓಬಣ್ಣ, ಮಾಯಣ್ಣ, ಹಟ್ಟಿ ತಿಪ್ಪೇಸ್ವಾಮಿ, ಚಿತ್ತಪ್ಪ, ಇಕ್ಬಾಲ್ ಅಹಮದ್, ಪಾಪಣ್ಣ, ಕುರಿ ಜಯಣ್ಣ, ತಾನಾಜಿ ಗೋಸಾಯಿ, ಪಲ್ಲಾಗಟ್ಟೆ ಶೇಖರಪ್ಪ, ಶಿವಣ್ಣ, ವಿಜಯ್, ಮಾರುತಿ, ಮಹಮ್ಮದ್ ಗೌಸ್, ಹರೀಶ್ ರೆಡ್ಡಿ, ಹಾಲೇಶ್, ಪರಸಪ್ಪ, ಹನುಮಂತಪ್ಪ, ಕಾಟಪ್ಪ ಸೇರಿದಂತೆ, ದಲಿತ ಮುಖಂಡರು, ಸಾರ್ವಜನಿಕರು ಇದ್ದರು.

error: Content is protected !!