ಆಂತರಿಕ ಸಮೀಕ್ಷೆಯಿಂದ ಪ್ರಭಾ ಗೆಲುವು ಖಚಿತ

ಆಂತರಿಕ ಸಮೀಕ್ಷೆಯಿಂದ ಪ್ರಭಾ ಗೆಲುವು ಖಚಿತ

14ನೇ ವಾರ್ಡಿನ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಲೀಂ ಅಹ್ಮದ್ ವಿಶ್ವಾಸ

ದಾವಣಗೆರೆ, ಏ.16- ಪಕ್ಷದ ಆಂತರಿಕ ಸಮೀಕ್ಷೆಯನ್ನು ಗಮನಿಸಿದರೆ ಡಾ. ಪ್ರಭಾ ಮಲ್ಲಿಕಾರ್ಜುನ್  ಗೆಲ್ಲುವುದು ಶತಸಿದ್ಧ ಎಂದು ವಿಧಾನ ಪರಿಷತ್‌ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹಮದ್‌ ಹೇಳಿದರು.

ನಗರದ ಕಲ್ಲೇಶ್ವರ ರೈಸ್ ಮಿಲ್‌ನಲ್ಲಿ ಸೋಮವಾರ ನಡೆದ 14ನೇ ವಾರ್ಡಿನ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಡಾ. ಪ್ರಭಾ ಅವರು ಮಾಡಿದ ನಿಸ್ವಾರ್ಥ ಸೇವೆ ಮತ್ತು ಜನರ ಪ್ರೀತಿಯಿಂದ ಅವರ  ಗೆಲುವು ಖಚಿತವಾಗಿದೆ ಎಂದು ಹೇಳಿದರು. 

ರಾಜ್ಯಕ್ಕೆ ಸೂಕ್ತ ಪರಿಹಾರ ನೀಡದ ಕೇಂದ್ರ ಸರ್ಕಾರ ಮತ ಕೇಳುವ ಹಕ್ಕನ್ನು ಕಳೆದುಕೊಂಡಿದೆ ಮತ್ತು ಬರ ಪರಿಹಾರ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ತಾರತಮ್ಯ ಧೋರಣೆ ತೋರುತ್ತಿದೆ ದೂರಿದರು.

ರಾಜ್ಯಕ್ಕೆ ಹಣ ನೀಡಲು ಕೇಂದ್ರ ಸರ್ಕಾರ ರಾಜಕೀಯ ಮಾಡುತ್ತಿದೆ. ಕೇಂದ್ರ ಸಚಿವರುಗಳಾದ ಅಮಿತ್ ಷಾ, ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಾ ರಾಜ್ಯಕ್ಕೆ ತಾರತಮ್ಯ ಧೋರಣೆ ತೋರುತ್ತಿದ್ದಾರೆ. ಇಂತಹ 10 ವರ್ಷದ ಮೋದಿ ಆಡಳಿತಕ್ಕೆ ಬೇಸತ್ತ ಜನರು ಸರ್ಕಾರ ಬದಲಿಸಲಿದ್ದಾರೆ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮತ್ತು ಎಸ್.ಎಸ್.ಮಲ್ಲಿಕಾರ್ಜುನ್ ಮಾಡಿದ ಅಭಿವೃದ್ಧಿ ಕಾರ್ಯಗಳು ಪ್ರಭಾ ಅವರ ಗೆಲುವಿಗೆ ಸಹಾಯಕವಾಗಲಿವೆ ಎಂದು ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಮಾತನಾಡಿ, ನಮ್ಮ ಸರ್ಕಾರ ನುಡಿದಂತೆ ನಡೆದು ಐದು ಗ್ಯಾರಂಟಿಗಳನ್ನು ಬಡವರಿಗೆ ತಲುಪಿಸಿದೆ. ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಒದಗಿಸಿದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್‌  ಗೆಲ್ಲಲಿದ್ದಾರೆ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಮುಸ್ಲಿಂ ಸಮಾಜದ ಅಧ್ಯಕ್ಷ ದಾದು ಸೇಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯೂಬ್ ಪೈಲ್ವಾನ್, ಪಾಲಿಕೆ ಸದಸ್ಯರಾದ ಕೆ. ಚಮನ್‌ಸಾಬ್, ಎ.ಬಿ. ರಹೀಂ, ಜಾಕೀರ್ ಅಲಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಮುಸ್ಲಿಂ ಧರ್ಮ ಗುರು ಇಬ್ರಾಹಿಂ ಸಖಾಫಿ, ಜಯಪ್ರಕಾಶ್ ಮತ್ತು  ಇತರರು ಇದ್ದರು.

error: Content is protected !!