ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕಿಗೆ 8.92 ಕೋಟಿ ಲಾಭ

ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕಿಗೆ 8.92 ಕೋಟಿ ಲಾಭ

ಬ್ಯಾಂಕಿನ ಅಧ್ಯಕ್ಷ ಎನ್.ಎ. ಮುರುಗೇಶ್‌ ಸಂತಸ

ದಾವಣಗೆರೆ, ಏ. 1 – ಜಿಲ್ಲೆಯ ಪ್ರತಿಷ್ಠಿತ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್  2024 ಮಾರ್ಚ್ ಅಂತ್ಯಕ್ಕೆ ರೂ. 8.92 ಕೋಟಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರಾದ ಎನ್.ಎ. ಮುರುಗೇಶ್ ತಿಳಿಸಿದ್ದಾರೆ.

ಆದಾಯ ತೆರಿಗೆ ರೂ.2.02 ಕೋಟಿ ಮತ್ತು ಇತರೆ ಅವಕಾಶಗಳನ್ನು ಕಲ್ಪಿಸಿದ ನಂತರ ನಿವ್ವಳ ಲಾಭ, ರೂ.5.86 ಕೋಟಿ ಗಳಿಸಿದೆ. ಬ್ಯಾಂಕು ಕಳೆದ ಸಾಲಿಗೆ ಹೋಲಿಸಿದಲ್ಲಿ ಗಣನೀಯವಾಗಿ ಅಭಿವೃದ್ಧಿ ಪಥದಲ್ಲಿ ಮುಂದುವರೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ವರ್ಷ 2023-2024ನೇ ಸಾಲು ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ತಮ್ಮ ಬ್ಯಾಂಕಿನ ಪ್ರಗತಿ ಕುರಿತಂತೆ ಬ್ಯಾಂಕಿನ ಸಭಾಂಗಣದಲ್ಲಿ ಇಂದು ಏರ್ಪಡಾಗಿದ್ದ ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾಲ ಪಡೆದು ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡುತ್ತಿರುವ ಉತ್ತಮ ಸಾಲಗಾರರಿಗೂ ಹಾಗೂ ಬ್ಯಾಂಕಿನ ಮೇಲೆ ಮತ್ತು ಆಡಳಿತ ಮಂಡಲಿಯ ಮೇಲೆ ವಿಶ್ವಾಸವಿಟ್ಟು ಠೇವಣಿ ಮಾಡಿದಂತಹ ಠೇವಣಿದಾರರಿಗೂ, ಕಾಲಕಾಲಕ್ಕೆ ಸಲಹೆ, ಮಾರ್ಗದರ್ಶನ, ಸಹಕಾರ, ನೀಡುತ್ತಾ ಬರುತ್ತಿರುವ ಸಹಕಾರ ಇಲಾಖೆಯ ಎಲ್ಲಾ ವರ್ಗದ ಅಧಿಕಾರಿಗಳಿಗೆ, ಭಾರತೀಯ ರಿಜರ್ವ್ ಬ್ಯಾಂಕಿನ ಅಧಿಕಾರಿಗಳಿಗೆ ಹಾಗೂ ಬ್ಯಾಂಕಿನ ಲೆಕ್ಕ ಪರಿಶೋಧಕರುಗಳಿಗೆ ಮತ್ತು ಕಾಮಧೇನು ಠೇವಣಿ ಸಂಗ್ರಹಕಾರರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.

ಬ್ಯಾಂಕಿನ ಷೇರು ಬಂಡವಾಳ ರೂ.6.15 ಕೋಟಿ, ಕಾಯ್ದಿಟ್ಟ ಮತ್ತು ಇತರೆ ನಿಧಿಗಳು ರೂ.60.25 ಕೋಟಿ, ಒಟ್ಟು ಠೇವಣಿ ರೂ.352.03 ಕೋಟಿ ಸಂಗ್ರಹಿಸಿದ್ದು, ಸಾಲ ಮತ್ತು ಮುಂಗಡಗಳು ರೂ.287.61 ಕೋಟಿ ನೀಡಲಾಗಿದೆ. ಬ್ಯಾಂಕಿನ ಈ ಸಾಧನೆಗೆ ಗ್ರಾಹಕರ, ಸದಸ್ಯರ ಮತ್ತು ಕಾರ್ಯಕಾರಿ ಮಂಡಲಿ ಸದಸ್ಯರ ಸಲಹೆ, ಸಹಕಾರ ಹಾಗೂ ಸಿಬ್ಬಂದಿ ವರ್ಗದವರ ಹೆಚ್ಚಿನ ಪರಿಶ್ರಮ ಕಾರಣ ಎಂದು ಹರ್ಷ ವ್ಯಕ್ತಪಡಿಸಿದರು.

ಬ್ಯಾಂಕಿನ ಸದಸ್ಯರು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಟಿಯಿಂದ ಬ್ಯಾಂಕಿಂಗ್ ವ್ಯವಹಾರವನ್ನು ಡಿಜಿಟಲೈಸ್ ಮಾಡುವ ಉದ್ದೇಶ ಹೊಂದಿ, ಮೊಬೈಲ್ ಬ್ಯಾಂಕಿಂಗ್, ಎನ್ಎಸಿಹೆಚ್, ಐಎಂಪಿಎಸ್, ಯುಪಿಐ  ಸೇವೆಗಳನ್ನು ಜಾರಿಗೆ ತರಲಾಗಿದೆ. ಈ ಸೇವೆಯನ್ನು ಜಾರಿಗೆ ತಂದ ಜಿಲ್ಲೆಯ ಪ್ರಪ್ರಥಮ ಅರ್ಬನ್ ಸಹಕಾರ ಬ್ಯಾಂಕ್ ಎಂಬ ಹೆಗ್ಗಳಿಕೆ ನಮ್ಮದು. ಬ್ಯಾಂಕಿನ ಎಲ್ಲಾ ಶಾಖೆಗಳ ಮುಂಭಾಗದಲ್ಲಿ ಎ.ಟಿ.ಎಂ. ಯಂತ್ರಗಳನ್ನು ಅಳವಡಿಸಿ, ಚಾಲನೆಗೊಳಿಸಲಾಗಿದೆ.

ಬ್ಯಾಂಕಿನ ಸದಸ್ಯರುಗಳಿಗೆ `ಆರಾಧ್ಯ ಆಯುಷ್ಮಾನ್ ನಿಧಿ’ ಸ್ಥಾಪಿಸಿದ್ದು, ಈ ನಿಧಿಯಿಂದ ಸದಸ್ಯರಿಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತಿದ್ದು, ಸದರಿ ಸಾಲಿನಲ್ಲಿ 112 ಸದಸ್ಯ ಫಲಾನುಭವಿಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ವೆಚ್ಚ ಒಟ್ಟು ರೂ.11,80,747/- ಗಳನ್ನು ಸಂಬಂಧಪಟ್ಟ ಆಸ್ಪತ್ರೆಗಳಿಗೆ ನೇರವಾಗಿ ಪಾವತಿಸಲಾಗಿದೆ. 

ಮೃತಪಟ್ಟ 102 ಸದಸ್ಯರ ವಾರಸುದಾರರಿಗೆ ಮರಣೋತ್ತರ ನಿಧಿ ರೂ.10,11,700/- ಪಾವತಿಸಲಾಗಿದೆ. ಬ್ಯಾಂಕಿನ ಸಿಬ್ಬಂದಿ ಮತ್ತು ಅವರ ಕುಟುಂಬ ವರ್ಗದವರಿಗೆ ಗ್ರೂಪ್ ಹೆಲ್ತ್ ಇನ್ಸೂರೆನ್ಸ್ ಮಾಡಿಸಲಾಗಿದೆ. ಕಳೆದ ಸಾಲಿನಲ್ಲಿ ರೂ.7,50,000/- ಕ್ಲೈಮ್ ಬಂದಿರುತ್ತದೆ. 

ಪ್ರಸಕ್ತ ವರ್ಷ ವಿದ್ಯಾನಗರ ಮತ್ತು ಸರಸ್ವತಿ ಬಡಾವಣೆ ಎರಡು ಹೊಸ ಶಾಖೆಗಳನ್ನು ತೆರೆಯಲಾಗಿದ್ದು, ಅತ್ಯಂತ ಯಶಸ್ವಿಯಾಗಿ ಶಾಖೆಗಳು ಮುನ್ನಡೆಯುತ್ತಿವೆ. ಶಾಮನೂರು ರಸ್ತೆ ಶಾಖೆಯನ್ನು ಶೀಘ್ರದಲ್ಲಿಯೇ ಪ್ರಾರಂಭಿಸಲಾಗುವುದು. ಆಡಳಿತ ಕಛೇರಿ, ಸಿ.ಓ.ಎಂ. ಶಾಖೆ, ಎಂ.ಸಿ.ಸಿ. ‘ಬಿ’ ಬ್ಲಾಕ್ ಮತ್ತು ಹರಿಹರ ಶಾಖೆಗಳ ಒಳಾಂಗಣವನ್ನು ಇತ್ತೀಚಿನ ಆಧುನಿಕತೆಗೆ ತಕ್ಕಂತೆ ನವೀಕರಿಸಲಾಗಿದೆ. 

ಬ್ಯಾಂಕಿನ ಆಡಳಿತ ಕಛೇರಿಯ ಮೇಲ್ಭಾಗದಲ್ಲಿ ಸೌರ ವಿದ್ಯುತ್ ಘಟಕ ಸ್ಥಾಪಿಸಲಾಗಿದ್ದು, ಇದರಿಂದ ಬ್ಯಾಂಕು ತನ್ನದೇ ಆದ ವಿದ್ಯುತ್ ಉತ್ಪಾದನಾ ಘಟಕದಿಂದಾಗಿ ವಿದ್ಯುತ್‌ಚ್ಛಕ್ತಿ ವೆಚ್ಚವನ್ನು ಕಡಿತಗೊಳಿಸಿದಂತಾಗಿದೆ. ಇದೇ ರೀತಿಯಲ್ಲಿ ನಮ್ಮ ಹರಿಹರ ಶಾಖೆಯ ಕಟ್ಟಡದ ಮೇಲ್ಬಾಗದಲ್ಲಿಯೂ ಸಹ ಸೌರ ವಿದ್ಯುತ್ ಉತ್ಪಾದನಾ ಘಟಕದ ಸ್ಥಾಪನೆಯ ಕೆಲಸ ಪ್ರಗತಿಯಲ್ಲಿದೆ ಎಂದು ತಿಳಿಸಿದರು. 

ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀಮತಿ ಜಯಮ್ಮ ಪರಶುರಾಮಪ್ಪ, ವ್ಯವಸ್ಥಾಪನಾ ಮಂಡಲಿಯ ಅಧ್ಯಕ್ಷರು ಮತ್ತು ಹಾಲಿ ನಿರ್ದೇಶಕ ಎ.ಹೆಚ್. ಕುಬೇರಪ್ಪ, ನಿರ್ದೇಶಕರುಗಳಾದ  ಕಿರುವಾಡಿ ವಿ. ಸೋಮಶೇಖರ್‌,  ಶಂಕರ್ ಖಟಾವ್‌ಕರ್, ಎಸ್.ಕೆ. ಪ್ರಭು ಪ್ರಸಾದ್,  ಕೆ.ಎಂ. ಜ್ಯೋತಿ ಪ್ರಕಾಶ್, ಪಿ.ಹೆಚ್. ವೆಂಕಪ್ಪ, ಬಿ. ನಾಗೇಂದ್ರಚಾರಿ, ಬಿ. ಚಿದಾನಂದಪ್ಪ, ಎ. ಕೊಟ್ರೇಶ್, ಶ್ರೀಮತಿ ಉಮಾ ವಾಗೀಶ್,  ವಿಶಾಲ್‌ ಕುಮಾರ್ ಆರ್. ಸಂಘವಿ, ಶ್ರೀಮತಿ ಅನಿತಾ ಕೋಗುಂಡಿ ಪ್ರಕಾಶ್, ಶ್ರೀಮತಿ ಅನೂಪ ಡಾ|| ವೀರೇಂದ್ರಸ್ವಾಮಿ, ವೃತ್ತಿಪರ ನಿರ್ದೇಶಕರಾದ  ಆರ್.ವಿ. ಶಿರಸಾಲಿಮಠ,  ಕಿರಣ್ ಶೆಟ್ಟಿ ಮತ್ತು ವ್ಯವಸ್ಥಾಪನಾ ಮಂಡಲಿಯ ಸದಸ್ಯರಾದ ಕೆ.ಎಂ. ಬಸವರಾಜ್, ಶ್ರೀಮತಿ ಜಿ.ಸಿ. ವಸುಂಧರ, ಮತ್ತು ಶ್ರೀಮತಿ ಶೈಲಾ ಹಾಲಸ್ವಾಮಿ ಕಂಬಳಿ ಹಾಗೂ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ ಎನ್. ತುಳಸಿನಾಥ್, ಉಪ ಪ್ರಧಾನ ವ್ಯವಸ್ಥಾಪಕರಾದ  ಕೆ.ಎಂ. ರುದ್ರಮುನಿ ಮತ್ತು ಕೆ.ಎಂ. ನಟರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

error: Content is protected !!