ತೋಟಗಳಿಗೆ ನೀರು ತಲುಪಿಸದಿದ್ದರೆ ಎಂಪಿ ಚುನಾವಣೆ ಬಹಿಷ್ಕಾರ : ರೈತರ ಎಚ್ಚರಿಕೆ

ತೋಟಗಳಿಗೆ ನೀರು ತಲುಪಿಸದಿದ್ದರೆ ಎಂಪಿ ಚುನಾವಣೆ ಬಹಿಷ್ಕಾರ : ರೈತರ ಎಚ್ಚರಿಕೆ

ಮಲೇಬೆನ್ನೂರಿಗೆ ಡಿಸಿ, ಎಸ್ಪಿ ಭೇಟಿ ನೀಡುವಂತೆ ಆಗ್ರಹ

ಮಲೇಬೆನ್ನೂರು, ಮಾ.29- ಭದ್ರಾ ಅಚ್ಚು ಕಟ್ಟಿನ ಕೊನೆ ಭಾಗದ ತೋಟಗಳಿಗೆ ನೀರು ತಲು ಪಿಸದಿದ್ದರೆ ಲೋಕಸಭಾ ಚುನಾವಣೆಯನ್ನು ಬಹಿ ಷ್ಕರಿಸುವುದಾಗಿ ಕುಂಬಳೂರು, ಜಿಗಳಿ, ವಿನಾಯಕ ನಗರ ಕ್ಯಾಂಪ್ ಮತ್ತು ನಿಟ್ಟೂರು ಗ್ರಾಮಗಳ ರೈತರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಭದ್ರಾ ನಾಲಾ ನಂ -3 ಉಪವಿಭಾಗ ವ್ಯಾಪ್ತಿಯ 9ಬಿ ಉಪಕಾಲುವೆಗೆ ಮತ್ತು 11ಎ ಉಪಕಾಲುವೆಗೆ ಇದುವರೆಗೂ ಕನಿಷ್ಠ ನೀರು ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ರೈತರು ಶುಕ್ರವಾರ ಮಲೇಬೆನ್ನೂರಿನ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಅಧಿಕಾರಿಗಳು ಚುನಾವಣೆ ನೆಪ ಹೇಳಿಕೊಂಡು ಭದ್ರಾ ನಾಲೆಯ ನೀರನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿಲ್ಲ. ನೀರಿನ ವಿಚಾರವಾಗಿ ಮಲೇಬೆನ್ನೂರು ಭಾಗಕ್ಕೆ ಇದುವರೆಗೂ ಡಿಸಿ, ಎಸ್ಪಿ ಭೇಟಿ ನೀಡಿಲ್ಲ. ಅವರು ದಾವಣಗೆರೆ ಸುತ್ತಮುತ್ತ ಭೇಟಿ ನೀಡಿ, ಅಲ್ಲಿಯೇ ಇದ್ದಾರೆ ಎಂದು ರೈತರು ದೂರಿದರು.

ಇಂಜಿನಿಯರ್‌ಗಳು ಹಾಗೂ ನೀರಗಂಟಿಗಳು ಪೊಲೀಸ್ ಭದ್ರತೆಯಲ್ಲಿ ನೀರಿನ ನಿರ್ವಹಣೆ ಮಾಡಬೇಕೆಂದು ರೈತರು ಹೇಳಿದರು.

ನಾಲೆಯಲ್ಲಿ ನೀರು ಬಂದ್ ಆಗುವ ಮೊದಲು ತೋಟಗಳಿಗೆ ನೀರು ತಲುಪಿಸಲು ಡಿಸಿ, ಎಸ್ಪಿ ಕ್ರಮ ವಹಿಸಬೇಕು. ಇಲ್ಲದಿದ್ದರೆ ಲೋಕಸಭಾ ಚುನಾವಣೆ ಯನ್ನು ಬಹಿಷ್ಕರಿಸುವುದು ನಿಶ್ಚಿತ ಎಂದು ಹೇಳಿದ ರೈತರು, ನಂತರ ದಾವಣಗೆರೆ ಡಿಸಿ ಕಚೇರಿಗೆ ತೆರಳಿ ಮನವಿ ಪತ್ರವನ್ನೂ ನೀಡಿ ಬಂದಿದ್ದಾರೆ. 

ಜಿಗಳಿಯ ಬಿಳಸನೂರು ಚಂದ್ರಪ್ಪ, ಕುಂಬ ಳೂರಿನ ಕೆ.ತೀರ್ಥಪ್ಪ, ಜಿ.ಶಂಕರಗೌಡ, ಕೆ.ಲಿಂಗ ರಾಜ್, ಎ.ಎನ್.ಆಂಜನೇಯ, ಎ.ಹನುಮೇಶ್, ಎಂ.ಕೆ.ಸ್ವಾಮಿ, ಮಾಗಾನಹಳ್ಳಿ ರಮೇಶ್, ಎಸ್.ರಾಜು, ಎ.ಶಂಭಪ್ಪ, ದೇವರಾಜ್, ಬಿ.ಎಸ್.ಸಾಗರ್, ಶಿವು, ಕೆ.ಆಂಜನೇಯ, ಎ.ಬಿ.ಶಂಭು ಲಿಂಗ, ನಿಟ್ಟೂರು ಶಿವಕುಮಾರ್, ವಿನಾಯಕ ನಗರ ಕ್ಯಾಂಪಿನ ಸಿ.ಹೆಚ್.ಪ್ರಸಾದ್, ಎಂ.ಧರ್ಮ ರಾಜ್, ನಾಗೇಶ್ವರಾವ್, ಹರಿಶೇಷಾದ್ರಿ, ನಾನಿ ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿದ್ದರು.

error: Content is protected !!