ಚುನಾವಣೆ : ಮತದಾರರ ಜಾಗೃತಿಗೆ ಬೈಕ್ ರ‍್ಯಾಲಿ

ಚುನಾವಣೆ : ಮತದಾರರ ಜಾಗೃತಿಗೆ ಬೈಕ್ ರ‍್ಯಾಲಿ

ದಾವಣಗೆರೆ, ಮಾ. 29 – ಲೋಕಸಭಾ ಚುನಾವಣೆ ನಡೆಯುತ್ತಿದ್ದು ಮೇ 7 ರಂದು ನಡೆಯುವ ಮತದಾನದಲ್ಲಿ ಎಲ್ಲ ವಿಶೇಷ ಚೇತನರು ಶೇ. 100 ರಷ್ಟು ಮತದಾನ ಮಾಡಬೇಕೆಂದು ರಾಜ್ಯ ಸ್ವೀಪ್ ನೋಡಲ್ ಅಧಿಕಾರಿ ಪಿ.ಎಸ್.ವಸ್ತ್ರದ್ ಕರೆ ನೀಡಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ದಾವಣಗೆರೆ ಇವರ ಸಹಯೋಗದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆ ಅಂಗವಾಗಿ ಸ್ವೀಪ್ ಸಮಿತಿಯಿಂದ, ಜಿಲ್ಲಾ ಪಂಚಾಯತ್‍ನಿಂದ, ಜಿಲ್ಲಾಧಿಕಾರಿಗಳ ಕಚೇರಿವರೆಗೆ ಏರ್ಪಡಿಸಲಾಗಿದ್ದ ವಿಶೇಷ ಚೇತನರ ಬೈಕ್ ರ‍್ಯಾಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ವಿಶೇಷ ಚೇತನರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶೇ. 97 ರಷ್ಟು ಮನತದಾನ ಮಾಡಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಶೇ. 100 ರಷ್ಟು ಮತದಾನ ಮಾಡುವ ವಿಶ್ವಾಸವಿದೆ. ಚುನಾವಣೆ ಎಂಬುದು ಪ್ರಜಾ ಪ್ರಭುತ್ವದ ಹಬ್ಬ, ಈ ಹಬ್ಬವನ್ನು ಎಲ್ಲರೂ ಸೇರಿ ಮತದಾನ ಮಾಡುವ ಮೂಲಕ ಅತ್ಯುತ್ತಮ ಪ್ರಜಾಪ್ರಭುತ್ವದ ಪ್ರತಿನಿಧಿಯನ್ನು ಆಯ್ಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ರ‍್ಯಾಲಿಯು ಜಿಲ್ಲಾ ಪಂಚಾಯತ್ ಆವರಣ ದಿಂದ ಹದಡಿ ರಸ್ತೆ, ಜಯದೇವ ಸರ್ಕಲ್, ಪಿ.ಬಿ ರೋಡ್, ಮಹಾನಗರ ಪಾಲಿಕೆ, ಅಂತಿಮವಾಗಿ ಜಿಲ್ಲಾಧಿಕಾರಿಗಳ ಕಚೇರಿ ತಲುಪಿತು.  

ರ‍್ಯಾಲಿಯ ಸಮಾರೋಪದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ವಿ. ವೆಂಕಟೇಶ್ ಭಾಗವಹಿಸಿ ಮಾತನಾಡಿ, ಎಲ್ಲರ ಪಾಲ್ಗೊಳ್ಳುವಿಕೆಯೇ ಪ್ರಜಾಪ್ರಭುತ್ವ, ಪ್ರಜಾಪ್ರಭುತ್ವದಲ್ಲಿ ಮತದಾನ ಪ್ರಜೆಗಳ ಅಧಿಕಾರ, ಈ ಅಧಿಕಾರವನ್ನು ಮೇ 7 ರಂದು ಮತ ಚಲಾಯಿಸುವ ಮೂಲಕ ನಮ್ಮ ಜವಾಬ್ದಾರಿ ಯನ್ನು ನಿರ್ವಹಿಸಬೇಕಾಗಿದೆ ಎಂದರು. 

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಬಿ. ಸುರೇಶ ಇಟ್ನಾಳ್, ಪಾಲಿಕೆ ಆಯುಕ್ತ ರೇಣುಕಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕರಾದ ವಾಸಂತಿ ಉಪ್ಪಾರ್, ವಿಕಲ ಚೇತನರ ಕಲ್ಯಾಣಾಧಿಕಾರಿ ಕೆ.ಕೆ. ಪ್ರಕಾಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!