ಮೌಲ್ಯಗಳಿಲ್ಲದ ಬದುಕು ದೇವರಿಲ್ಲದ ಗುಡಿಯಂತೆ

ಮೌಲ್ಯಗಳಿಲ್ಲದ ಬದುಕು ದೇವರಿಲ್ಲದ ಗುಡಿಯಂತೆ

ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸುಮತಿ ಜಯಪ್ಪ

ದಾವಣಗೆರೆ, ಮಾ. 24 – ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯ ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಂಯುಕ್ತಾಶ್ರಯದಲ್ಲಿ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿತ್ಯೋತ್ಸವದ ಅಂಗವಾಗಿ ದತ್ತಿ ಉಪನ್ಯಾಸ ಕಾರ್ಯಕ್ರಮ ಎಸ್.ಎಸ್.ಎಮ್.ಬಿ. ಕಾಲೇಜಿನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉಪಸ್ಥಿತರಿದ್ದ ಗಣ್ಯರಿಂದ  ಉದ್ಘಾಟಿಸಲಾಯಿತು. ಎಸ್.ಎಸ್.ಎಮ್.ಬಿ. ಶಿಕ್ಷಣ ವಿದ್ಯಾಲಯದ ಪ್ರಾಚಾರ್ಯ ಡಾ. ಪ್ರೇಮ ಪಿ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. 

ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಿ, ಕನ್ನಡ ನಾಡು-ನುಡಿ-ಸಂಸ್ಕೃತಿ ಕಲೆ, ಸಾಹಿತ್ಯಗಳ ಪರಿಚಯ ಮಾಡುವಂತಹ ಕೆಲಸವನ್ನು ಸಾಹಿತ್ಯ ಪರಿಷತ್ ಮಾಡುತ್ತದೆ. ಈ ಸಂದರ್ಭದಲ್ಲಿ ದತ್ತಿ ದಾನಿಗಳನ್ನು ಸ್ಮರಿಸಲಾಯಿತು. 

ದತ್ತಿ ಉಪನ್ಯಾಸದಲ್ಲಿ `ಬದುಕು ಮತ್ತು ಸಾಮಾಜಿಕ ಮೌಲ್ಯಗಳ’ ಕುರಿತು ತಾಲ್ಲೂಕು ಕಸಾಪ ಅಧ್ಯಕ್ಷರಾದ ಸುಮತಿ ಜಯಪ್ಪ ಮಾತನಾಡಿ, ಸುಂದರ ಬದುಕಿಗೆ ಸಾಮಾಜಿಕ ಮೌಲ್ಯಗಳು ಭದ್ರಬುನಾದಿ ಇದ್ದ ಹಾಗೆ. ಮೌಲ್ಯಗಳಿಲ್ಲದ ಬದುಕು ದೇವರಿಲ್ಲದ ಗುಡಿಯಂತೆ. ಉತ್ತಮ ವ್ಯಕ್ತಿತ್ವ ನಿರ್ಮಾಣಗೊಳ್ಳಲು ಸಾಮಾಜಿಕ ಮೌಲ್ಯಗಳ ಅಗತ್ಯವಿದೆ. ನಮ್ಮ ಕನ್ನಡದ ಹಳೆಗನ್ನಡ ಸಾಹಿತ್ಯ ನಡುಗನ್ನಡ ಸಾಹಿತ್ಯ ಹೊಸಗನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ, ವಚನ ಸಾಹಿತ್ಯ, ಜನಪದ ಸಾಹಿತ್ಯದಲ್ಲಿ ಬೇಕಾದಷ್ಟು ಮೌಲ್ಯಗಳು ತುಂಬಿವೆ. ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸುಂದರ ವ್ಯಕ್ತಿತ್ವ ರೂಪಿಸಿಕೊಳ್ಳಬೇಕೆಂದು ಹಲವಾರು ನಿದರ್ಶನಗಳ ಮೂಲಕ ಕರೆ ನೀಡಿದರು. 

ವಿದ್ಯಾರ್ಥಿಗಳಲ್ಲಿ ಮೌಲ್ಯಗಳನ್ನು ಬಿತ್ತುವಲ್ಲಿ ಶಿಕ್ಷಕರ ಪಾತ್ರ ಅಮೂಲ್ಯವಾದದ್ದು,  ಮೌಲ್ಯಗಳು ಕಣ್ಣಿಗೆ ಕಾಣುವಂಥವು ಗಳಲ್ಲ ಆಚರಣೆಯಲ್ಲಿ, ನಡವಳಿಕೆಯಲ್ಲಿ ತೋರ್ಪಡಿಸುವಂಥವುಗಳಾಗಿವೆ. ಮೌಲ್ಯಗಳ ಬೋಧನೆಯ ವಸ್ತುಗಳನ್ನು ನಮ್ಮ ನಡೆ ನುಡಿಯಲ್ಲಿ ಅಳವಡಿಸಿಕೊಳ್ಳುವಂಥವಾಗಿವೆ. ನಾವೆಲ್ಲ ಸಾಮಾಜಿಕ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾಸ್ಥ ಸಮಾಜವನ್ನು ಕಟ್ಟುವಲ್ಲಿ ನಮ್ಮದೇ ಆದ ಪ್ರಮುಖ ಪಾತ್ರ ವಹಿಸಬೇಕೆಂದು ಸುಮತಿ ಜಯಪ್ಪ ತಿಳಿಸಿದರು.

ವೇದಿಕೆಯಲ್ಲಿ ತಾಲ್ಲೂಕು ಕಸಾಪ ನಿರ್ದೇಶಕರಾದ ಶ್ರೀಮತಿ ರೇಖಾ ಓಂಕಾರಪ್ಪ, ಶ್ರೀಮತಿ ಮಮತಾ ರುದ್ರಮನಿ ಹಾಗೂ ಎಸ್.ಎಸ್.ಎಂ.ಬಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಚಂದ್ರಿಕಾ ಮತ್ತು ಅಕ್ಷತಾ ಪ್ರಾರ್ಥಿಸಿದರು. ಯಶಸ್ವಿನಿ ಸ್ವಾಗತಿಸಿದರು. ರಹೀಲಾ ವಂದಿಸಿದರು. ಮೋಕ್ಷ ನಿರೂಪಿಸಿದರು.

error: Content is protected !!