ಪರಿಸರ ಪೂರಕ ಕಾರ್ಯಕ್ರಮಗಳಿಗೆ ಉಚಿತ ಸಲಹೆ

ಪರಿಸರ ಪೂರಕ ಕಾರ್ಯಕ್ರಮಗಳಿಗೆ ಉಚಿತ ಸಲಹೆ

ದಾವಣಗೆರೆ, ಮಾ. 18- ಈ ಜಿಲ್ಲೆಯ ಋಣ ನನ್ನ ಮೇಲಿದೆ, ಪರಿಸರ ಪೂರಕ ಕಾರ್ಯಕ್ರಮಗಳನ್ನು ರೂಪಿಸಿದರೆ ಉಚಿತ ಸಲಹೆ ಮತ್ತು ಸೇವೆ ಮಾಡಲು ಸಿದ್ಧವೆಂದು ನಿವೃತ್ತ ಜಿಲ್ಲಾಧಿಕಾರಿಯೂ ಆದ ಪರಿಸರ ಪ್ರೇಮಿ ಕೆ. ಅಮರನಾರಾಯಣ ಕರೆ ನೀಡಿದರು.

ಇಲ್ಲಿನ ಬಂಟರ ಭವನದಲ್ಲಿ ಲಯನ್ಸ್ ಕ್ಲಬ್   ಏರ್ಪಡಿಸಿದ್ದ 317  ಸಿ ಯ ಪ್ರಾದೇಶಿಕ ವಲಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಡು ಅವರು ಮಾತನಾಡಿದರು.

ನಾನು ಜಿಲ್ಲಾಧಿಕಾರಿಯಾಗಿದ್ದಾಗ ನೆಟ್ಟಿದ್ದ ಮರಗಳು ಇಂದು ನೆರಳು ನೀಡುತ್ತಿವೆ. ಅಲ್ಲದೆ ಕೆಲ ಗಿಡಗಳು ಹಣ್ಣು ಗಳನ್ನು ನೀಡುತ್ತಿವೆ. ನನ್ನ ಜೀವನ ಸಾರ್ಥಕವಾಗಿದೆ ಎಂದರು.

ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾಧಿಕಾರಿಗಳಾಗಿದ್ದಾಗ ಬೀಜದುಂಡೆಗಳನ್ನು ಮಾಡಿ ಬಾತಿವನದಲ್ಲಿ ಹಾಕಿದ್ದೇವೆ. ಇದನ್ನು ನೋಡಿ ಆಂಧ್ರದ ತೆಲಂಗಾಣ ಸರ್ಕಾರದವರು ನನ್ನನ್ನು ಕರೆಸಿ ಸುಮಾರು 40 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಿ ಬೀಜದುಂಡೆಗಳನ್ನು ತಯಾರಿಸಿದರು. ಇದು ನನ್ನ ಸೌಭಾಗ್ಯ ಎಂದರು.

ಮರಳು ಭೂಮಿಗೆ, ಮರುಜೀವ ಎಂಬಂತೆ ಬಂಜರು ಭೂಮಿ ಮತ್ತು ಬೆಟ್ಟಗಳಲ್ಲಿ ನಮ್ಮ  ಗೋ ಗ್ರೀನ್ ಎಂಬ ಸಂಸ್ಥೆ ಬೀಜದುಂಡೆಗಳನ್ನು ಹಾಕಿ ಗಿಡ ಬೆಳೆಸುವ ಹೊಸ ಯೋಜನೆಯನ್ನು ರೂಪಿಸಿವೆ. ಇದಕ್ಕೆ ಲಯನ್ಸ್ ಕ್ಲಬ್ ಗಳಂತಹ ಸೇವಾ ಸಂಸ್ಥೆಗಳು ಬೆಟ್ಟಗುಡ್ಡಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಲು ಮುಂದೆ ಬಂದರೆ, ನಾನೂ ಸಹ ಬರುತ್ತೇನೆ ಎಂದರು.

ಮುಂಬರುವ ದಿನಗಳಲ್ಲಿ ವಿದ್ಯುತ್ ಮತ್ತು ಹನಿ ನೀರಿಗೂ  ಪರದಾಡಬೇಕಾಗುತ್ತದೆ. ಈಗಿನಿಂದಲೇ ಮಿತವಾಗಿ ಬಳಸುವಂತೆ ಕರೆ ನೀಡಿ, ಅಡಿಕೆ ಮತ್ತು ಕಬ್ಬು ಬೆಳೆಯುವುದನ್ನು ಕಡಿಮೆ ಮಾಡದಿದ್ದರೆ ಆಹಾರಕ್ಕೂ ಪರದಾಡಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ರಾಜಕಾರಣಿಗಳು ಮಾಡುವ ದಾನ ಮತ್ತು ಇತರೆ ಸೇವೆಗಳಲ್ಲಿ ಸ್ವಾರ್ಥ ಇರುತ್ತದೆ. ಆದರೆ, ಲಯನ್ಸ್ ಕ್ಲಬ್ ನವರು ಮಾಡುವ ಕಾರ್ಯಗಳು ನಿಸ್ವಾರ್ಥತೆಯಿಂದ ಕೂಡಿರುತ್ತವೆ ಎಂದು ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮುಕ್ತ ಕಂಠದಿಂದ ಪ್ರಶಂಸಿಸಿದರು.

ಶ್ರೀಮತಿ ಲೀಲಾ ಓಂಕಾರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರಾಂತೀಯ ಅಧ್ಯಕ್ಷ ಎಸ್. ಓಂಕಾರಪ್ಪ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ನೀಲಿ, ಚಲನಚಿತ್ರ, ಕಿರುತೆರೆ ನಟ ಸುಜಯ್ ಹೊಳಲು, ಮೊಹಮ್ಮದ್ ಹನೀಫ್, ಶ್ರೀಮತಿ ಸಪ್ನಾ ಸುರೇಶ್, ಆರ್.ಜಿ.ಶ್ರೀನಿವಾಸ ಮೂರ್ತಿ, ಎನ್.ಸಿ. ಬಸವರಾಜ್, ರವಿಶಂಕರ್ ವಾಲಿ, ಕೆ.ಟಿ. ಮಹಾಲಿಂಗೇಶ್, ಎಂ. ಎಂ. ಭೀಮಾನಂದ ಶೆಟ್ಟಿ,   ಹೆಚ್.ವಿ. ಮಂಜುನಾಥ ಸ್ವಾಮಿ, ಎನ್.ಆರ್.ನಾಗಭೂಷಣರಾವ್, ಸೋಗಿ ಮುರುಗೇಶ್ ಮತ್ತಿತರರು ಉಪಸ್ಥಿತರಿದ್ದರು.

ಶಿಕ್ಷಕ ಸಿ. ಅಜಯನಾರಾಯಣ ಪ್ರಾರ್ಥಿಸಿದರು. ಬೆಳ್ಳೂಡಿ ಶಿವಕುಮಾರ್ ಸ್ವಾಗತಿಸಿದರು. ಮಾಜಿ  ರಾಜ್ಯಪಾಲ ಡಾ. ಬಿ.ಎಸ್. ನಾಗಪ್ರಕಾಶ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಾಸದೇವ ರಾಯ್ಕರ್ ಕಾರ್ಯಕ್ರಮ ನಿರೂಪಿಸಿದರು. 

ಇದೇ ಸಂದರ್ಭದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ಮಹಿಳೆಯರಿಗೆ ಹೊಲಿಗೆ ಯಂತ್ರ, ವಿದ್ಯಾರ್ಥಿಗಳಿಗೆ ಸೈಕಲ್ ಹಾಗೂ ಶ್ರೀ ಅನ್ನದಾನೇಶ್ವರ ಮಠದ ಕಟ್ಟಡಕ್ಕೆ ಚೆಕ್ ವಿತರಿಸಿದರು.

error: Content is protected !!