ದಾವಣಗೆರೆ,ಫೆ.29- ಇಂದು ನಿಧನರಾದ ಹಿರಿಯ ನಿವೃತ್ತ ಐಎಎಸ್ ಅಧಿಕಾರಿ ಕೆ.ಶಿವರಾಮ್ ಅವರು 2000ನೇ ಇಸವಿಯಲ್ಲಿ ದಾವಣಗೆರೆ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಗಮನ ಸೆಳೆಯುವಂತಹ ಹಲವಾರು ಜನೋಪಯೋಗಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದರ ಮೂಲಕ ರಾಜ್ಯವೇ ದಾವಣಗೆರೆ ಜಿಲ್ಲೆಯತ್ತ ನೋಡುವಂತೆ ಮಾಡಿದ್ದರು. ಇಂದು ಸಚಿವರಾಗಿರುವ ಶಾಮನೂರು ಮಲ್ಲಿಕಾರ್ಜುನ್ ಅವರು ಅಂದು ಯುವಜನ ಮತ್ತು ಕ್ರೀಡೆ ಖಾತೆ ಸಚಿವರಾಗಿದ್ದರು. ಎಸ್ಸೆಸ್ಸೆಂ ಅವರ ನೇತೃತ್ವದಲ್ಲಿ ಶಿವರಾಮ್ ಅವರು ಬಡ ಜನರಿಗಾಗಿ ಎಸ್.ಎಂ. ಕೃಷ್ಣ ಬಡಾವಣೆ ಮತ್ತು ಶ್ರೀರಾಮ ನಗರಗಳಲ್ಲಿ ನಿರ್ಮಿಸಿದ್ದ ಸಾವಿರಾರು ಸಂಖ್ಯೆಯ ಆಶ್ರಯ ಮನೆಗಳು ಇಂದು ಅವರ ಹೆಸರು ಹೇಳುವಂತಿವೆ. `ನಮ್ಮ ನಾಡು’ ಹೆಸರಿನಲ್ಲಿ ಗ್ರಾಮೀಣ ಪ್ರದೇಶಗಳಿಗೆ ಜಿಲ್ಲಾಡಳಿತವನ್ನೇ ಕೊಂಡೊಯ್ದು ಗ್ರಾಮ ವಾಸ್ತವ್ಯ ಮಾಡುವುದರ ಮೂಲಕ ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸುತ್ತಿದ್ದರು. ಇದೇ ರೀತಿ ಬಡ ಜನರಿಗಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು. ಇಂತಹ ಅನೇಕ ಕಾರ್ಯಕ್ರಮಗಳಲ್ಲಿ ಶಿವರಾಮ್ ಪಾಲ್ಗೊಂಡಿದ್ದ ಮತ್ತು ಕೈಗೊಂಡಿದ್ದ ಕಾರ್ಯಕ್ರಮಗಳ ಚಿತ್ರಗಳನ್ನು ಸೆರೆ ಹಿಡಿದಿದ್ದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿವೇಕ್ ಎಲ್. ಬದ್ದಿ ಅವರ ಸಂಗ್ರಹದಿಂದ ಇಲ್ಲಿ ಪ್ರಕಟಿಸಲಾಗಿದೆ.
ಸಾಮಾನ್ಯ ವ್ಯಕ್ತಿಯಂತಿದ್ದ ಐಎಎಸ್ ಅಧಿಕಾರಿ ಕೆ. ಶಿವರಾಂ ಸಾಹೇಬ್ರು
ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಐಎಎಸ್ ಪಾಸ್ ಮಾಡಿ ದಾವಣಗೆರೆಗೆ ದಕ್ಷ ಜಿಲ್ಲಾಧಿಕಾರಿ ಯಾಗಿ ಸೇವೆ ಸಲ್ಲಿಸಿದ್ದ ಶಿವರಾಂ ಸಾಹೇಬ್ರು ಜಾತಿಯನ್ನು ಹೊರಗಿಟ್ಟು, ಬಡವರ ಪರವಾದಂತಹ ಆಡಳಿತ ಕೊಟ್ಟಂತಹ ಮಹನೀಯರು.
ನೆನಪಿರುವಂತೆ 2000-2001 ರಲ್ಲಿ ದಾವಣಗೆರೆ ಯಲ್ಲಿ ನಡೆಯುತ್ತಿದ್ದಂತಹ ಟ್ಯೂಷನ್ ಹಾವಳಿಗೆ ಕಡಿ ವಾಣ ಹಾಕಿ, ಜಿಲ್ಲಾಡಳಿತದ ವತಿಯಿಂದ ಉಚಿತವಾಗಿ ಎಲ್ಲ ವಿದ್ಯಾರ್ಥಿಗಳಿಗೂ ಟ್ಯೂಷನ್ ವ್ಯವಸ್ಥೆ ಅದರಲ್ಲೂ ಟಾಪ್ ಒನ್ ಇದ್ದಂತಹ ವಿದ್ಯಾವಂತ ಶಿಕ್ಷಕರಿಂದಲೇ ಉಚಿತ ವಾಗಿ ಮೋತಿ ವೀರಪ್ಪ ಶಾಲೆ ಹಾಗೂ ಮತ್ತಿತರೆ ಕಡೆಗಳಲ್ಲಿ ಮನೆ ಪಾಠ ಮಾಡಿಸಿದ್ದರು. ಅದರ ಉಪಯೋಗವನ್ನು ನಾನು ಕೂಡ ಪಡೆದಿದ್ದೇನೆ. ಹಾಗೆಯೇ ದಾವಣಗೆರೆಯಲ್ಲಿ ಆಶ್ರಯ ಮನೆ ನಿರ್ಮಾಣ ಕಾರ್ಯದಲ್ಲೂ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರ ಜೊತೆ ಸಹಕರಿಸಿದಂತವರು.
ಜೊತೆಗೆ ಉಚಿತವಾಗಿ ತಮ್ಮ ಹೆಸರಿನಲ್ಲಿಯೇ ಕೆ.ಶಿವರಾಂ ಕಂಪ್ಯೂಟರ್ ತರಬೇತಿ ಕೇಂದ್ರವನ್ನು ಸ್ಥಾಪಿಸಿದ್ದರು. ಬಡ ವಿದ್ಯಾರ್ಥಿಗಳು ಇಂದಿಗೂ ಅಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಾನೂ ಸಹ ಅದರ ಫಲಾನುಭವಿ ಎಂದು ಹೇಳಿಕೊಳ್ಳಲು ಹೆಮ್ಮೆ ಅನಿಸುತ್ತದೆ.
ನಾನಿನ್ನೂ ಪಿಯುಸಿ ಓದುತ್ತಿದ್ದ ಕಾಲವದು. ಆಗ ನಮಗೆ ಜಿಲ್ಲಾಧಿಕಾರಿ ಕಛೇರಿಯೇ ಗೊತ್ತಿರದ ಸಮಯದಲ್ಲಿ ಸಾರ್ವಜ ನಿಕರ ಕುಂದು-ಕೊರತೆಗೆ ಎಲ್ಲ ವಯೋಮಾನ ದವರಿಗೂ ಅವಕಾಶ ಕಲ್ಪಿಸಿದ್ದಂತವರು. ಅವರ ಅಧಿಕಾರವಧಿಯಲ್ಲಿ ನಾನೂ ಕೂಡ ಕಾರ್ಯ ನಿಮಿತ್ತ ಅವರ ಕಛೇರಿಯ ಒಳಗೆ ಧೈರ್ಯವಾಗಿ ಹೋಗಿ ಅವರೆದುರು ಕಷ್ಟ ಹೇಳಿಕೊಳ್ಳುವ ಅವಕಾಶ ಕಲ್ಪಿಸಿದಂತವರು. ಹಾಗೆಯೇ ಕಷ್ಟಕ್ಕೆ ಪರಿಹಾರವನ್ನೂ ಕ್ಷಣಾರ್ಧದಲ್ಲಿಯೇ ಸಲಹೆ ಕೊಟ್ಟಂತಹ ಮೇರು ವ್ಯಕ್ತಿತ್ವದ ಅಧಿಕಾರಿ. ನನ್ನ ಹೆಮ್ಮೆಯ ಶಿವರಾಂ ಸಾಹೇಬ್ರು. ಅವರ ಅಕಾಲಿಕ ಮರಣ ವಯಕ್ತಿಕವಾಗಿ ನೋವನ್ನುಂಟು ಮಾಡಿದೆ.
– ಅಣಬೇರು ತಾರೇಶ್ ಕೆ.ಪಿ., ದಾವಣಗೆರೆ
ನಮ್ಮ ಗ್ರಾಮಕ್ಕೆ ಸರ್ಕಾರಿ ಬಸ್ ಸೌಲಭ್ಯ ಕಲ್ಪಿಸಿದ್ದ ಶಿವರಾಂ
ನಮ್ಮೂರಿಗೆ ಒಂದು ಎತ್ತಿನಗಾಡಿ ಸಹ ಓಡಾಡಲು, ಹೋಗಲಿ ಕಾಲು ನಡಿಗೆಯಲ್ಲಿ ನಡೆಯಲು ಕಷ್ಟವಾಗಿದ್ದ ಕಾಲ. ಗುಡ್ಡಗಾಡು ಪ್ರದೇಶದ ಹಳ್ಳಿ. ಈ ಹಳ್ಳಿಯ ಡಾಂಬರು ರಸ್ತೆಗೆ ನಾನು ಹೋರಾಟ ಮಾಡಿದ್ದು. ಆದರೆ ನಾನು ಮಾಡಿದ್ದು ಸಾಧನೆ ಅಲ್ಲ. ಇಂತಹ ಕುಗ್ರಾಮಕ್ಕೆ. ಆಸುಪಾಸು ನನಗೆ ನೆನಪು ಇಲ್ಲ 2005 ಇರಬಹುದು ನಮ್ಮ ಪುಟ್ಟ ಹಳ್ಳಿಗೆ ಸರ್ಕಾರಿ ಬಸ್ ಸೌಲಭ್ಯ ನೀಡಿದವರು ಆಗಿನ ದಾವಣಗೆರೆಯ ಜಿಲ್ಲಾಧಿಕಾರಿ ಕೆ. ಶಿವರಾಮು ಸರ್ ಅವರು.
ನಮ್ಮೂರಿಗೆ ಬಸ್ ಸರಾಸರಿ ರಾತ್ರಿ 9 ಅಥವಾ 10 ಗಂಟೆಗೆ ನಮ್ಮ ಊರಿಗೆ ಬಂದು ನಿಲ್ಲುತ್ತಿತ್ತು. ಬೆಳಿಗ್ಗೆ 6 ಗಂಟೆಗೆ ಹೋಗುತ್ತಿತ್ತು. 50 ಮನೆಗಳ ಈ ಹಳ್ಳಿಗೆ ಬಸ್ ಹತ್ತಿದ್ದು ಕೇವಲ ಮೂರೂ ನಾಲ್ಕು ಮಂದಿ ಮಾತ್ರ. ಆದರೆ ಕೆ. ಶಿವರಾಮು ಅವರು ಯಾವುದೇ ಕಾರಣಕ್ಕೂ ಈ ಹಳ್ಳಿಗೆ ಸರ್ಕಾರಿ ಬಸ್ ನಿಲ್ಲಬಾರದು. ಎಂತಹ ಮಳೆ ಇದ್ದರೂ ಊರಿಗೆ ಹೋಗಿ ನಿಲ್ಲಬೇಕು ಎಂಬ ಆರ್ಡರ್ ಪಾಸ್ ಮಾಡಿದ್ದರು. ಅಷ್ಟೇ ಪ್ರಾಮಾಣಿಕವಾಗಿ ಡ್ರೈವರ್ ಮತ್ತು ಕಂಡಕ್ಟರ್ ಕೊಟ್ಟಿದ್ದರು ಸತತವಾಗಿ 2022 ರವರೆಗೂ ಈ ಬಸ್ ಬಂತು ಅನಂತರ ಕುಂಟು ನೆಪ ಹೇಳಿ ನಿಲ್ಲಿಸಿದರು. ಆದರೆ ಇಂತಹ ಹಳ್ಳಿಗೆ ಸರ್ಕಾರಿ ಬಸ್ ನೀಡಿದ್ದು ಒಬ್ಬ ಅಧಿಕಾರಿಯಾಗಿ ಮಾಡಿದ ಅದ್ಬುತವಾದ ಕೆಲಸ.
ಈ ಬಸ್ ಸೌಲಭ್ಯ ಪಡೆದವಳು ಊರಿನಲ್ಲಿ ನಾನೊಬ್ಬಳು. ಕೆ. ಶಿವರಾಮು ಸರ್ ಇನ್ನು ರೇಷನ್ನನ್ನು ಸಹ ಬಸಾಪುರಕ್ಕೆ ವರ್ಗಾವಣೆ ಮಾಡಿದರು. ಸರ್ಕಾರಿ ಶಾಲೆಗೆ ಕಟ್ಟಡವನ್ನು ಸಹ ಮಂಜೂರು ಮಾಡಿದರು. ಜೊತೆಗೆ ಡಾಂಬರು ರಸ್ತೆಗೆ ಪ್ರಯತ್ನ ಪಟ್ಟರು ಆಗಲಿಲ್ಲ.
ಕೆ. ಶಿವರಾಮು ಅವರು, ನಮ್ಮೂರಿಗೆ ಆಗಮಿಸಿದ್ದ ಸಂದರ್ಭದಲ್ಲಿ ನಮ್ಮ ತಾಯಿಗೆ ನಿಮ್ಮ ಮಕ್ಕಳನ್ನು ಮದುವೆ, ಸಂಸಾರ ಅಂತ ಎಲ್ಲರ ರೀತಿ ಮಾಡಬೇಡಿ. ಚೆನ್ನಾಗಿ ಓದಿಸಿ, ನಿಮ್ಮ ಊರಿಗೆ ಡಾಂಬರು ರಸ್ತೆಗೆ ಪ್ರಯತ್ನ ಮಾಡಿ. ಹೆಣ್ಣು ಮಕ್ಕಳೆಂದು ಕೀಳರಿಮೆ ಬೇಡ ಎಂದು ಹೇಳಿದ ಮಾತು ಇನ್ನೂ ನನ್ನ ನೆನಪಿನಲ್ಲಿದೆ. ಇಂದು ಅವರ ಆಶೀರ್ವಾದದಿಂದ ನಮ್ಮೂರಿಗೆ ಡಾಂಬರ್ ರಸ್ತೆ ಆಗಿದೆ ಮತ್ತು ನಿಂತಿದ್ದ ಸರ್ಕಾರಿ ಬಸ್ ಸಹ ಬರುತ್ತಿದೆ.
ಒಬ್ಬ ಐಎಎಸ್ ಅಧಿಕಾರಿ ಜನರಿಗೆ ರಾಜಕಾರಣಿಗಳಷ್ಟೇ ಮನಸು ಮುಟ್ಟಿಸುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ. ನಾನಂತೂ ಇವರನ್ನು ಎಂದೂ ಮರೆಯುವುದಿಲ್ಲ. ಸದಾ ಗೌರವ ನೀಡುತ್ತೇನೆ. ಇವರಂತೆ ಇತರೆ ಜಿಲ್ಲಾಧಿಕಾರಿಗಳು ಇಂದು ಪ್ರಸ್ತುತ ಸೇವೆ ಸಲ್ಲಿಸಿ, ಜನರ ಮನಸ್ಸಿನಲ್ಲಿ ಶಾಶ್ವತ ಜನಸೇವಕರು ಆದರೆ ಹುದ್ದೆಗೆ, ವ್ಯಕ್ತಿಯ ಜೀವನಕ್ಕೆ ಸಾರ್ಥಕತೆ ಬರುತ್ತದೆ.
– ಕು. ಬಿಂದು ಆರ್. ಡಿ. ರಾಂಪುರ, ಉಪನ್ಯಾಸಕರು, ಶ್ರೀ ಬಾಪೂಜಿ ಇಂಡಿಪೆಂಡೆಂಟ್ ಪಿಯು ಕಾಲೇಜು, ಹುಕ್ಕೇರಿ, ಬೆಳಗಾವಿ.
ಶಿವರಾಮ್ ಅವರನ್ನು ಸನ್ಮಾನಿಸಿದ್ದ ಕೃಷ್ಣ
ಐಎಎಸ್ ಅಧಿಕಾರಿ ಹಾಗೂ ಚಿತ್ರನಟ ಕೆ.ಶಿವರಾಮ್ ಅವರು ದಾವಣಗೆರೆ ಜಿಲ್ಲಾಧಿಕಾರಿ ಯಾಗಿದ್ದಾಗ ಟೆನ್ನಿಸ್ ಕ್ರೀಡಾಂಗಣ ಉದ್ಘಾಟನಾ ಸಮಾರಂಭದಲ್ಲಿ ಆಗಿನ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಕೆ. ಶಿವರಾಮ್ ಅವರನ್ನು ಸನ್ಮಾನಿಸಿದ ನೆನಪಿನ ಚಿತ್ರ. ಅಂದು ಸಚಿವರಾಗಿದ್ದ ಶಾಮನೂರು ಮಲ್ಲಿಕಾರ್ಜುನ್ ಸಹ ಜೊತೆಗಿದ್ದರು. ಈ ಅಪರೂಪದ ಚಿತ್ರ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹೆಚ್.ಬಿ.ಮಂಜುನಾಥ್ ಅವರ ಸಂಗ್ರಹದಿಂದ.
ಶಿವರಾಂ ನಿಧನಕ್ಕೆ ಸೋಮಲಾಪುರ ಹನುಮಂತಪ್ಪ ಶೋಕ
ದಾವಣಗೆರೆ, ಫೆ.29- ಭಾರತದಲ್ಲಿಯೇ ಪ್ರಥಮ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಜಿಲ್ಲಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದ ಕೆ. ಶಿವರಾಂ ನಿಧನಕ್ಕೆ ಗಾಂಧೀಜಿ ಹರಿಜನ ಯುವಕ ಸಂಘದ ಪ್ರಧಾನ ಕಾರ್ಯದರ್ಶಿ ಸೋಮಲಾಪುರದ ಹನುಮಂತಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಶಿವರಾಂ ಅವರು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು. ದಲಿತ ಕೇರಿಗಳನ್ನು ಸ್ವಚ್ಛಗೊಳಿಸುವ ಮತ್ತು ದಲಿತರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೇರವಾಗಿ ತಲುಪಿಸುವ ಕೆಲಸ ಮಾಡಿದ್ದರು. ಜಿಲ್ಲಾಡಳಿತವನ್ನೇ ಜನ ಸಾಮಾನ್ಯರ ಬಳಿ ಕೊಂಡೊಯ್ದ ಹೆಗ್ಗಳಿಕೆಗೆ ಪಾತ್ರರಾಗಿದ್ದರು ಎಂದು ಶಿವರಾಂ ಅವರ ಸಮಾಜ ಮುಖಿ ಕಾರ್ಯಗಳನ್ನು ಹನುಮಂತಪ್ಪ ಅವರು ಸ್ಮರಿಸಿದ್ದಾರೆ.
ನಗರದಲ್ಲಿ ಇಂದು ಶ್ರದ್ಧಾಂಜಲಿ ಸಭೆ
ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ನಿವೃತ್ತ ಜಿಲ್ಲಾಧಿಕಾರಿಗಳೂ, ಚಿತ್ರ ನಟರೂ ಆಗಿದ್ದ ಕೆ. ಶಿವರಾಂ ಅವರ ಶ್ರದ್ಧಾಂಜಲಿ ಸಭೆಯನ್ನು ಇಂದು ಬೆಳಿಗ್ಗೆ 11 ಗಂಟೆಗೆ ಎಸ್. ನಿಜಲಿಂಗಪ್ಪ ಬಡಾವಣೆಯ ಛಲವಾದಿ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ರುದ್ರಮುನಿ ತಿಳಿಸಿದ್ದಾರೆ.
ಸಚಿವರನ್ನು ಅಭಿನಂದಿಸಿದ್ದ ಶಿವರಾಮ್
ಶಾಮನೂರು ಮಲ್ಲಿಕಾರ್ಜುನ್ ಅವರು ಈಚೆಗೆ ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡಿದ್ದ ಕೆ. ಶಿವರಾಮ್ ಅಭಿನಂದಿಸಿ, ತಮ್ಮಿಬ್ಬರ ನಡುವಿನ ಹಳೆಯ ದಿನಗಳನ್ನು ಮೆಲಕು ಹಾಕಿದ್ದರು.