ವಿವಿಧ ಸಾಧನೆಗಳನ್ನು ಮಾಡಲು ಯುವಕರಿಗೆ ಇದು ಅಮೃತ ಘಳಿಗೆ

ವಿವಿಧ ಸಾಧನೆಗಳನ್ನು ಮಾಡಲು ಯುವಕರಿಗೆ ಇದು ಅಮೃತ ಘಳಿಗೆ

ಯುವ ಜನೋತ್ಸವದಲ್ಲಿ ದಾವಣಗೆರೆ ವಿ.ವಿ.ಕುಲಪತಿ ಪ್ರೊ. ಬಿ.ಡಿ. ಕುಂಬಾರ

ದಾವಣಗೆರೆ, ಫೆ.4- ಭಾರತವು ವಿಶ್ವದ ಅತೀ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಯುವ ಸಮುದಾಯಕ್ಕೆ ಇದು ಅಮೃತ ಘಳಿಗೆಯಾಗಿದೆ ಎಂದು ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು. 

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾದ ಅಂತರ್ ವಲಯ ಯುವಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ಭಾರತವು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನಮ್ಮ ದೇಶದ ಯುವ ಶಕ್ತಿ. ನಮ್ಮಲ್ಲಿ ಯುವಕರ ಅತೀ ದೊಡ್ಡ ಪಡೆ ಇದೆ.ಇದು ನಾವು ಜಾಗತಿಕವಾಗಿ ದೊಡ್ಡ ಶಕ್ತಿಯಾಗಿ ಬೆಳೆಯಲು ಕಾರಣವಾಗಿದೆ. ಭಾರತ ವಿಶ್ವದ 5ನೇ ದೊಡ್ಡ ಆರ್ಥಿಕ ಶಕ್ತಿಯಾಗಿದೆ. ಇದರಿಂದ ಯುವಕರಿಗೆ ಸಾಕಷ್ಟು ಅವಕಾಶಗಳನ್ನು ತಂದುಕೊಡಲಿದೆ ಎಂದರು.

ಕಲೆ, ಸಾಹಿತ್ಯಾಭಿರುಚಿಯು ವಿದ್ಯಾರ್ಥಿಗಳ ಜ್ಞಾನವಿಕಾಸಕ್ಕೆ ಸಹಕಾರಿ ಯಾಗುವುದು. ಓದಿನ ಜೊತೆಗೆ ಇತರೆ ಕಲೆಗಳನ್ನು ಅಳವಡಿಸಿಕೊಂಡರೆ ಉತ್ತಮ ಅವಕಾಶಗಳು ಮನೆ ಬಾಗಿಲಿಗೆ ಬಂದು ನಿಲ್ಲುತ್ತವೆ. ಅವಕಾಶಗಳನ್ನು ಬಳಸಿಕೊಂಡು ಎತ್ತರೆತ್ತರಕ್ಕೆ ಬೆಳೆಯಲು ಮುಂದಾಗಬೇಕು. ಲಭ್ಯವಿರುವ ಎಲ್ಲ ವೇದಿಕೆಗಳನ್ನು ವಿದ್ಯಾರ್ಥಿಗಳು ಬಳಸಿಕೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದಾಗ ಮಾತ್ರ ಆ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ಕುಲಸಚಿವೆ (ಆಡಳಿತ) ಶ್ರೀಮತಿ ಸರೋಜ ಬಿ.ಬಿ. ಮಾತನಾಡಿ, ಈ ಜಗತ್ತು ಯುವಕರಿಗೆ ಸೇರಿರೋದು ಎಂಬ ಮಾತಿದೆ, ಕಾರಣ ಯುವಕ, ಯುವತಿಯರು ನಿಮ್ಮ ಆಸಕ್ತಿದಾಯಕ ಕ್ಷೇತ್ರದಲ್ಲಿ ತೊಡಗಿಕೊಂಡು ಸಾಧನೆಗೈಯ್ಯಬೇಕು. ಮಾದಕ ವಸ್ತುಗಳಿಗೆ ಬಲಿಯಾಗದೆ, ಪ್ರೀತಿ, ಪ್ರೇಮದಲ್ಲಿ ಸಿಲುಕದೆ ನಿಮ್ಮನ್ನು ನಂಬದವರಿಗೆ ವಿಶೇಷ ಕೊಡುಗೆಯನ್ನು ನೀಡಬೇಕು. ಉತ್ತಮ ಸಮಾಜ ನಿರ್ಮಾಣದ ರೂವಾರಿಗಳು ನೀವಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ದಾವಣಗೆರೆ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಪ್ರೊ. ಶಶಿಧರ್ ಆರ್., ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಅಧ್ಯಕ್ಷ ರವಿಕುಮಾರ್ ಪಾಟೀಲ್ ಹೆಚ್.ಎಸ್., ಐ.ಕ್ಯೂಎಸ್.ಸಿ ಘಟಕದ ನಿರ್ದೇಶಕ ಪ್ರೊ.ಗೋವಿಂದಪ್ಪ, ಕ್ರೀಡಾ ಘಟಕದ ಉಪಾಧ್ಯಕ್ಷ ಡಾ. ಜೋಗಿನಕಟ್ಟೆ ಮಂಜುನಾಥ್, ಸಾಂಸ್ಕೃತಿಕ ಘಟಕದ ಉಪಾಧ್ಯಕ್ಷೆ ಡಾ. ಶಶಿಕಲಾ ಯಾಳಗಿ, ಪ್ರಧಾನ ಕಾರ್ಯದರ್ಶಿ ಪವಿತ್ರಾ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿ ಕೂಟದ ಎಲ್ಲಾ ಪ್ರತಿನಿಧಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

error: Content is protected !!