ರಾವಣ ಮನಸ್ಥಿತಿಯವರಿಂದ ರಾಮನ ವೇಶ

ರಾವಣ ಮನಸ್ಥಿತಿಯವರಿಂದ ರಾಮನ ವೇಶ

ಅಂದು ರಾಮ ಕಾಲ್ಪನಿಕ ಎಂದವರು ಇಂದು ನಾವು ಭಕ್ತರು ಎನ್ನುತ್ತಿದ್ದಾರೆ : ಸಿ.ಟಿ. ರವಿ

ದಾವಣಗೆರೆ, ಜ. 13 – ರಾಮ ಕಾಲ್ಪನಿಕ ವ್ಯಕ್ತಿ ಎಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣ ಪತ್ರ ಕೊಟ್ಟವರು, ಇಂದು ನಾವು ರಾಮನ ಭಕ್ತರು ಎಂದು ಹೇಳುತ್ತಿದ್ದಾರೆ. ರಾವಣ ಮನಸ್ಥಿತಿಯ ಜನರು ರಾಮನ ವೇಶ ಧರಿಸಿ ಮೋಸ ಮಾಡಲು ಬರುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಟೀಕಿಸಿದರು.

ಅಟಲ್ ಬಿಹಾರಿ ವಾಜಪೇಯಿ ಅಭಿಮಾನಿಗಳ ಬಳಗ ಮತ್ತು ಜಿಲ್ಲಾ ಬಿಜೆಪಿ ಹಿರಿಯ ನಿಷ್ಠಾವಂತ ಕಾರ್ಯಕರ್ತರ ವೇದಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ನಮ್ಮೊಳಗೆ ಒಡಕು ತರುವ ಯತ್ನ ಹಾಗೂ ದುರುದ್ಧೇಶದ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಪರೋಕ್ಷವಾಗಿ ಟೀಕಿಸಿದ ಅವರು, ರಾಮ ಮಂದಿರ ನಿರ್ಮಾಣವನ್ನೇ ಸಹಿಸಲು ಆಗದವರು ಇಂದು ನಾವು ರಾಮನ ಭಕ್ತರು ಎಂದು ಹೇಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.

ನೀವು ಕೊಟ್ಟ ಪ್ರತಿ ಮತ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾಯಿತು. ಮೈ ಮರೆತರೆ ರಾಷ್ಟ್ರ ಮಂದಿರದ ನಾಶವೂ ಆಗಬಹುದು. ಹಾಗೆ ಆಗಬಾರದು ಎಂದಿದ್ದರೆ ಮೈ ಮರೆಯದೇ ರಾಷ್ಟ್ರಭಕ್ತಿಯ ಜಾಗೃತಿಯ ಜೊತೆಗೆ, ರಾಮ ಭಕ್ತಿಯನ್ನು ಹೃದಯದಲ್ಲಿಟ್ಟುಕೊಂಡು ಮತ್ತೊಮ್ಮೆ ಮೋದಿ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು ಎಂದು ಕರೆ ನೀಡಿದರು.

ಪ್ರತಿಯೊಂದು ಮತವೂ ರಾಷ್ಟ್ರಭಕ್ತಿಗೆ ಮೀಸಲಾಗಬೇಕು. ಜಾತಿಗೆ, ಹಣಕ್ಕೆ, ಕೊಡುವ ಭಿಕ್ಷೆಗೆ ಮತ ಚಲಾಯಿಸಬಾರದು ಎಂದು ರವಿ ಹೇಳಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಅಟಲ್ ಬಿಹಾರಿ ವಾಜಪೇಯಿ ಬಿಜೆಪಿಯ ಮೊದಲ ಪ್ರಧಾನಿ. ಸರ್ವ ಶಿಕ್ಷಣ ಅಭಿಯಾನ, ಸುವರ್ಣ ಚತುಷ್ಪಥ ರಸ್ತೆ, ವಾಂಬೆ ವಸತಿ ಯೋಜನೆ, ಗ್ರಾಮ ಸಡಕ್ ಯೋಜನೆ ಮತ್ತಿತರೆ ಯೋಜನೆಗಳಿಂದ ದೇಶದ ಪ್ರಗತಿಗೆ ಕಾರಣರಾದರು ಎಂದರು.

ವಾಜಪೇಯಿ ಅವರ ಜನ್ಮದಿನವನ್ನು ಸರ್ಕಾರದ ವತಿಯಿಂದಲೇ ಆಚರಿಸುವಂತಾಗಬೇಕು. ಮುಂದಿನ ವರ್ಷ ವಾಜಪೇಯಿ ಅವರ 100ನೇ ಜನ್ಮದಿನ ಬರಲಿದೆ. ಆ ವೇಳೆಯ ಒಳಗೆ ಸರ್ಕಾರ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.

ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಮೂರ್ನಾಲ್ಕು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರಲಿದೆ. ಬಿಜೆಪಿಯ ಕಾರ್ಯಕರ್ತರು ಯಾವುದೇ ಭೇದವಿಲ್ಲದೇ ಒಗ್ಗಟ್ಟಿನಿಂದ ಗೆಲುವಿಗಾಗಿ ಶ್ರಮಿಸಬೇಕು. ಆಂತರಿಕವಾಗಿ ಏನೇ ಸಮಸ್ಯೆ ಇದ್ದರೂ, ಲೋಕಸಭಾ ಚುನಾವಣೆಯಲ್ಲಿ ನಮ್ಮ ಧರ್ಮ ಹಾಗೂ ಸಂಸ್ಕೃತಿಗಾಗಿ ಒಂದಾಗಬೇಕು ಎಂದು ಹೇಳಿದರು.

ಹಿರಿಯ ನಿಷ್ಠಾವಂತ ಬಿಜೆಪಿ ಬಳಗದ ಜಿಲ್ಲಾಧ್ಯಕ್ಷ ಎಂ.ಪಿ. ಕೃಷ್ಣಮೂರ್ತಿ ಪವಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದ ವೇದಿಕೆ ಮೇಲೆ ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಪಾಲಿಕೆ ಉಪಮೇಯರ್ ಯಶೋಧ ಹೆಗ್ಗಪ್ಪ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಮುಖಂಡರಾದ ಜಯಪ್ರಕಾಶ್ ಅಂಬರ್ಕರ್, ಯಶವಂತರಾವ್ ಜಾಧವ್, ಕೆ.ಬಿ. ಕೊಟ್ರೇಶ್, ಡಾ. ರವಿಕುಮಾರ್, ಜಿ.ಕೆ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!