ಪದವಿ ಪೂರ್ವ ಶಿಕ್ಷಣಾವಧಿಯು ಭವಿಷ್ಯ ನಿರ್ಧಾರದ ಪರ್ವಕಾಲ : ಮುತಾಲಿಕ್

ಪದವಿ ಪೂರ್ವ ಶಿಕ್ಷಣಾವಧಿಯು ಭವಿಷ್ಯ ನಿರ್ಧಾರದ ಪರ್ವಕಾಲ : ಮುತಾಲಿಕ್

`ಮನಸ್ಥಿತಿ ಸರಿ ಇದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ’ – ಚಿಂತಕ ಅಂಕಣಕಾರ ಜಗನ್ನಾಥ ನಾಡಿಗೇರ್

ದಾವಣಗೆರೆ, ಜ.7- ಪದವಿ ಪೂರ್ವ ಶಿಕ್ಷಣ ಅವಧಿಯು ಗೊಂದಲದ ಗೂಡೆಂದು ಭಾವಿಸಬಾರದು, ಇದು ಭವಿಷ್ಯದ ನಿರ್ಧಾರ ಕೈಗೊಳ್ಳುವ ಪರ್ವಕಾಲ, ಇದಕ್ಕಾಗಿ ಕಠಿಣ ಪರಿಶ್ರಮವು ಬೇಕು ಎಂದು ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ.ಸಂಪನ್ನ ಮುತಾಲಿಕ್ ದೇಸಾಯಿ ಅಭಿಪ್ರಾಯ ಪಟ್ಟರು. 

ನಗರ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ನಿನ್ನೆ ಏರ್ಪಾಡಾಗಿದ್ದ ಕಾಲೇಜಿನ ವಿದ್ಯಾರ್ಥಿ ವೇದಿಕೆ ಹಾಗೂ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. 

ಸಾಮಾನ್ಯವಾಗಿ ಎಲ್ಲರೂ ಇಂಜಿನಿಯರಿಂಗ್, ಮೆಡಿಕಲ್ ಕೋರ್ಸ್‌ಗಳ ಬಗ್ಗೆಯೇ ಆಕರ್ಷಿತರಾಗುತ್ತಾರೆ. ಆದರೆ, ಹೆಚ್ಚು ಉದ್ಯೋಗಾವಕಾಶಗಳಿರುವ ಅನೇಕ ಬೇರೆ ಪದವಿಗಳೂ ಇದ್ದು, ಅವುಗಳ ಪೈಕಿ ಸಕ್ಕರೆ ಉದ್ಯಮಕ್ಕೆ ಸಂಬಂಧಪಟ್ಟ ಪದವಿಯೂ ಒಂದಾಗಿದೆ. ಎಥೆನಾಲ್ ಸಂಯುಕ್ತ ಇಂಧನದ ಬಳಕೆ ರೂಢಿಗೆ ಬರುತ್ತಿದ್ದು, ಸಕ್ಕರೆ ಕೈಗಾರಿಕೋದ್ಯಮವು ಎಥೆನಾಲ್ ಉತ್ಪಾದನೆಗೂ ಸಂಬಂಧಿಸಿದ್ದು, ನಮ್ಮ ರಾಜ್ಯದಲ್ಲೇ ಸುಮಾರು 75ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ದು, ಈ ಕೋರ್ಸ್ ಮಾಡಿದವರಿಗೆ ಉದ್ಯೋಗ ಅವಕಾಶಗಳು ಹೇರಳವಾಗಿವೆ ಎಂದರು.

ಯಾವುದೇ ಸೋಲಿನ ಬಗ್ಗೆ ಮನೋ ಕ್ಷೋಭೆಗೆ ಒಳಗಾಗದೇ ಗೆಲುವಿನ ಚಿಂತನೆಗೆ ಇದು ಕಾರಣ ಎಂದು ಭಾವಿಸಿದಲ್ಲಿ ಯಶಸ್ಸು ಸಾಧ್ಯ ಎಂದರಲ್ಲದೇ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ತರಬೇತಿಯನ್ನು ಈ ಕಾಲೇಜಿನಲ್ಲಿ ಒದಗಿಸುವ ಬಗ್ಗೆ ಆಡಳಿತ ಮಂಡಳಿಯಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು. 

ಮುಖ್ಯ ಅತಿಥಿಯಾಗಿ ಮಾತನಾಡಿದ ಅಂಕಣಕಾರ,  ಜಗನ್ನಾಥ ನಾಡಿಗೇರ್  ಮಾತನಾಡಿ, ಮನಸ್ಥಿತಿ ಚೆನ್ನಾಗಿದ್ದರೆ ಪರಿಸ್ಥಿತಿ ಚೆನ್ನಾಗಿರುತ್ತದೆ, ಭಯಪಟ್ಟರೆ ಮನಸ್ಥಿತಿ ಕುಗ್ಗುತ್ತದೆ. ಸ್ವತಂತ್ರವಾದ ಆಲೋಚನೆಯೊಂದಿಗೆ ಅಭ್ಯಾಸ ಮತ್ತು ಹವ್ಯಾಸಗಳು ಉತ್ತಮವಾಗಿರಬೇಕು. ಪರೀಕ್ಷೆಯ ಬಗ್ಗೆ ಹೆದರದೇ ಸಮಯ, ಶಕ್ತಿ ಹಾಗೂ ಆಸಕ್ತಿಗಳನ್ನು ಅದಕ್ಕೆ ಕೊಟ್ಟಾಗ ಅದು ಉತ್ತಮ ಫಲಿತಾಂಶವನ್ನು ಕೊಡುತ್ತದೆ. ಸಾಧನೆ ಎಂಬುದಕ್ಕೆ ಅಂತ್ಯವಿಲ್ಲ, ಅಭಿವೃದ್ಧಿಯ ದಾಪುಗಾಲು ಇಡುತ್ತಿರುವ ಭಾರತಕ್ಕೆ ಈಗ ಸಾಧಕರು ಬೇಕಾಗಿದ್ದಾರೆ. ಇಂತಹ ಸಾಧಕರು ನೀವಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸ್ವಾರಸ್ಯಕರ ಉದಾಹರಣೆಗಳ ಸಹಿತ ತಿಳಿ ಹೇಳಿದರು.

ಕಾಲೇಜಿನ ಹಳೆಯ ವಿದ್ಯಾರ್ಥಿಗಳಾದ ತಂತ್ರಾಂಶ ಇಂಜಿನಿಯರ್ ಹೆಚ್.ಬಿ.ಅಭಿಲಾಶ್ ಹಾಗೂ ಹರಿಹರ ವಿಭಾಗದ ಅರಣ್ಯಾಧಿಕಾರಿ ಮೊಹಮ್ಮದ್ ಖಾಲಿದ್ ಮುಸ್ತಾಬ್ ಅವರನ್ನು ಸನ್ಮಾನಿಸಲಾಯಿತು. ಇಬ್ಬರೂ ವಿದ್ಯಾರ್ಥಿ ದೆಸೆಯಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡು ಸಾಧನೆಯ ಮಾರ್ಗಗಳನ್ನು ಹೇಳಿದರು.

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜನ ಪ್ರಾಚಾರ್ಯ ಪ್ರೊ. ಎಂ.ಪಿ.ರುದ್ರಪ್ಪ ಮಾತನಾಡಿ, ಸಾಧಕರ ಅನುಭವಗಳ ಆಲಿಸುವಿಕೆ ಹಾಗೂ ಪಾಲಿಸುವಿಕೆ ಯಶಸ್ಸಿಗೆ ಸೋಪಾನ  ಎಂದರು.

ವಿದ್ಯಾರ್ಥಿಗಳಾದ ಸಹನಾ ಮತ್ತು ರುಕ್ಮಿಣಿ ನಿರೂಪಿಸಿದರು. ಸುಪ್ರೀತಾ ಪ್ರಾರ್ಥಿಸಿದರು. ಅಭಿಲಾಷ ಸ್ವಾಗತಿಸಿದರು. ಅತಿಥಿಗಳ ಪರಿಚಯವನ್ನು ಸುವಿಧ, ಮೆಹರ್ ಮುಂತಾದವರು ಮಾಡಿದರೆ, ವಾರ್ಷಿಕ ವರದಿ ವಾಚನವನ್ನು ಭೌತಶಾಸ್ತ್ರ ಉಪನ್ಯಾಸಕ ಉಮೇಶ್ ನೆರವೇರಿಸಿದರು. ಬಹುಮಾನ ವಿತರಣಾ ಪ್ರಸ್ತುತಿಯನ್ನು ಇಂಗ್ಲಿಷ್ ಭಾಷಾ ಉಪನ್ಯಾಸಕ ಕೆ.ಸಿ. ವಿಜಯಕುಮಾರ್, ಜೀವಶಾಸ್ತ್ರ ಉಪನ್ಯಾಸಕಿ ಎಲ್.ಎಸ್.ಶರ್ಮಿಳಾ ನೆರವೇರಿ ಸಿದರೆ ವಂದನೆಗಳನ್ನು ಮೇಘನಾ ಸಮರ್ಪಿಸಿದರು. 

ಬೋಧಕ ವರ್ಗದ ಕೆ.ಸಿ.ಶಿವಶಂಕರ್, ಹೆಚ್.ಜಿ.ಚೇತನ್, ಕೆ.ಸಿ.ಶ್ರುತಿ, ಟಿ.ಎಂ.ಗಗನ್, ಎನ್.ಕೆ.ರವಿ, ಬಿ.ಎಂ.ಶಿವಕುಮಾರ್ ಮುಂತಾದವರು ಭಾಗವಹಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಸಹನಾ ರಾಯ್ಕರ್, ಲಕ್ಷ್ಮೀ  ಮಾಡಿದರು.

error: Content is protected !!