ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ

ಬೀದಿ ಬದಿ ವ್ಯಾಪಾರಸ್ಥರಿಗೆ ಸರ್ಕಾರದ ಸೌಲಭ್ಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ

ಶಾಸಕ ಡಿ.ಜಿ. ಶಾಂತನಗೌಡ

ಹೊನ್ನಾಳಿ, ಜ.5- ಬೀದಿ ಬದಿ ವ್ಯಾಪಾರಸ್ಥರಿಗೆ ನಿವೇಶನ ಸೇರಿದಂತೆ, ಸರ್ಕಾರದಿಂದ ಸಿಗುವ ಸೌಲಭ್ಯಗಳು ಸಿಗುವಂತೆ ಪ್ರಮಾಣಿಕವಾಗಿ ಕೆಲಸ ಮಾಡುತ್ತೇನೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.

ಪಟ್ಟಣದ ಕನಕ ರಂಗಮಂದಿರದಲ್ಲಿ `ಸುವರ್ಣ ಕರ್ನಾಟಕ ವರ್ಷಾಚರಣೆ’ ಪ್ರಯುಕ್ತ ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕುಗಳ ಬೀದಿ ಬದಿ ವ್ಯಾಪಾರಸ್ಥರ ಸಂಘದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು,

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲ್ಲೂಕು ಕಛೇರಿವರೆಗೆ ರಸ್ತೆ ಇಕ್ಕಟ್ಟಾಗಿರುವುದರಿಂದ ಮತ್ತು ಜನಸಂಖ್ಯೆ ಹೆಚ್ಚಾಗಿ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗಿ, ರಸ್ತೆಬದಿಯಲ್ಲಿ ನಿಲ್ಲುತ್ತಿರುವುದರಿಂದ ಟ್ರಾಫಿಕ್ ಹೆಚ್ಚಾಗುತ್ತಿರು ವುದರಿಂದ ನಾನು ಬರುವಾಗಲೇ ಟ್ರಾಫಿಕ್ ಜಾಮ್ ಆಗುತ್ತದೆ. ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ನಿತ್ಯ ಕಿರಿಕಿರಿಯಾಗುತ್ತದೆ. ಪಟ್ಟಣದ ಅಗಳ ಮೈದಾನದಲ್ಲಿ ಎಲ್ಲಾ ದ್ವಿಚಕ್ರ ವಾಹನಗಳಿಗೆ ನಿಲುಗಡೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದರೆ, ಬೀದಿ ಬದಿ ವ್ಯಾಪಾರಸ್ಥರು ಸುಗಮವಾಗಿ ವ್ಯಾಪಾರ ಮಾಡಬಹುದು ಎಂದರು. 

ಪುರಸಭೆಯಲ್ಲಿ ಆಡಳಿತ ಮಂಡಳಿ ಸಮಿತಿ ರಚನೆಯಾದ ನಂತರ ಸಭೆ ನಡೆಸಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿ, ಸರ್ಕಾರದ ಜಾಗವನ್ನು ಗುರುತಿಸಿ ಯೋಧರಿಗೆ, ಪತ್ರಕರ್ತರಿಗೆ, ಬೀದಿ ಬದಿ ವ್ಯಾಪಾರಸ್ಥರಿಗೆ ನಿವೇಶನ ಕೊಡುವುದಾಗಿ ಭರವಸೆ ನೀಡಿದರು. 

ಪಿಎಂ ಯೋಜನೆಯಿಂದ ಬೀದಿ ಬದಿ ವ್ಯಾಪಾರಸ್ಥರು ಮತ್ತು ಪ್ರತಿಯೊಬ್ಬ ಸಾರ್ವಜನಿಕರು ವರ್ಷಕ್ಕೆ 20 ರೂ.ಗಳನ್ನು ಕಟ್ಟಿ ಇನ್ಸೂರೆನ್ಸ್ ಮಾಡಿಸಿದರೆ ಆಕಸ್ಮಿಕ ಮತ್ತು ಆಕ್ಸಿಡೆಂಟ್‍ನಲ್ಲಿ ಮರಣ ಹೊಂದಿದರೆ 2 ಲಕ್ಷ ರೂ. ಇನ್ಸೂರೆನ್ಸ್ ಬರುತ್ತದೆ.  ಕುಟಂಬಸ್ಥರಿಗೆ ಅನುಕೂಲವಾಗುತ್ತದೆ. ಪ್ರತಿನಿತ್ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಕ್ಸಿಡೆಂಟ್‍ನಿಂದ 4 ರಿಂದ 5 ಜನರು ಸಾವನ್ನಪ್ಪುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಆಕ್ಸಿಡೆಂಟ್ ಕೇಸುಗಳೇ ಹೆಚ್ಚಾಗಿರುತ್ತವೆ ಎಂದರು.

ಸಿಐಟಿಯು ಜಿಲ್ಲಾ ಸಂಚಾಲಕ ಆನಂದರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ಕೊರೊನಾದಿಂದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅವರ ನೆಮ್ಮದಿ ಬದುಕಿಗಾಗಿ ಸ್ಥಳೀಯ ಆಡಳಿತದಿಂದ ಕಿರಿಕಿರಿ ತಪ್ಪಿಸಬೇಕು ಮತ್ತು ಪ್ರತಿಯೊಬ್ಬರಿಗೂ ನಿವೇಶನ ನೀಡಬೇಕು, ಐಡಿ ಕಾರ್ಡ್ ನೀಡಬೇಕು. ಬ್ಯಾಂಕ್‌ನಲ್ಲಿ ಸುಲಭವಾಗಿ ಸಾಲ ಸೌಲಭ್ಯ ಸಿಗುವಂತೆ ಶಾಸಕರು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ದಾವಣಗೆರೆ ಎಸ್‍ಬಿಐ ಲೀಡ್ ಬ್ಯಾಂಕ್‌ ಮ್ಯಾನೇಜರ್‌ ಶಿವಪ್ಪ ಮಾತನಾಡಿ, ಪ್ರತಿ ಬೀದಿ ಬದಿ ವ್ಯಾಪಾರಸ್ಥರು ಸಾಲ ಸೌಲಭ್ಯ ಪಡೆದು ಮರುಪಾವತಿಸಿದರೆ, ಹೆಚ್ಚು ಸಾಲ ಸೌಲಭ್ಯ ಕೊಡಲಾಗುವುದು. ಜಿಲ್ಲೆಯಲ್ಲಿ 436 ಬೀದಿ ಬದಿ ವ್ಯಾಪಾರಸ್ಥರು ನ್ಯಾಚುರಲ್ ಮರಣ ಹೊಂದಿದವರಿಗೆ 2 ಲಕ್ಷ ರೂ ಇನ್ಸೂರೆನ್ಸ್ ಸೌಲಭ್ಯ ದೊರಕಿದೆ ಎಂದು ಮಾಹಿತಿ ನೀಡಿದರು.

ಪ್ರಜಾಪರಿವರ್ತನೆ ವೇದಿಕೆ ರಾಜ್ಯ ಪ್ರಧಾನ ಕಾರ್ಯದರ್ಶಿ ಎ.ಡಿ.ಈಶ್ವರಪ್ಪ ಮಾತನಾಡಿ, ಬೀದಿ ಬದಿ ವ್ಯಾಪಾರಸ್ಥರು ನಿತ್ಯ ದುಡಿಯುವ ವರ್ಗವಾಗಿದ್ದು, ಅವರು ಕಿರಿಕಿರಿ ಮತ್ತು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ಸುಗಮವಾಗಿ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಿಕೊಡುವ ವ್ಯವಸ್ಥೆಯಾಗಬೇಕು ಎಂದರು.

ವಕೀಲ ಮಡಿವಾಳ ಚಂದ್ರಪ್ಪ ಮಾತನಾಡಿ, ನ್ಯಾಯಾಲದಿಂದ ಉಚಿತ ಕಾನೂನು ಪಡೆಯಲು ಮಾಹಿತಿ ನೀಡಿದರು.

ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ  ಬೀದಿ ಬದಿ ವ್ಯಾಪಾರಸ್ಥರಿಗೆ ಐಡಿ ಕಾರ್ಡ್ ವಿತರಿಸಲಾಯಿತು. ಮಹಿಳೆ ಮತ್ತು ಪುರುಷ ಪೌರ ಕಾರ್ಮಿಕರಿಗೆ  ಬೀದಿ ಬದಿ ವ್ಯಾಪಾರಸ್ಥರ ಸಂಘದ ವತಿಯಿಂದ ಉಚಿತವಾಗಿ ಬಟ್ಟೆಯನ್ನು ಶಾಸಕರಿಂದ ವಿತರಿಸಲಾಯಿತು.

error: Content is protected !!