ಚಿತ್ತ ಬುದ್ಧಿ ಮನಸ್ಸುಗಳ ಏಕಾಗ್ರತೆಯಿಂದ ಭಗವದಾನಂದ ಪ್ರಾಪ್ತಿ

ಚಿತ್ತ ಬುದ್ಧಿ ಮನಸ್ಸುಗಳ ಏಕಾಗ್ರತೆಯಿಂದ ಭಗವದಾನಂದ ಪ್ರಾಪ್ತಿ

ಶ್ರೀ ದತ್ತ ಜಯಂತಿ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ

ದಾವಣಗೆರೆ, ಡಿ.28- ಚಂಚಲಶೀಲ ಮನಸ್ಸನ್ನು ಬುದ್ಧಿಯಿಂದ ನಿಗ್ರಹಿಸುತ್ತಾ ಚಿತ್ತೈಕಾಗ್ರತೆಯಿಂದ ಅದನ್ನು ಆತ್ಮಾನುಭವದ ಕಡೆಗೆ ಹರಿಸಿದಾಗ ಭಗವದಾನಂದ ಪ್ರಾಪ್ತಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ ಅಭಿಪ್ರಾಯಪಟ್ಟರು.
ನಗರದ ಜಯದೇವ ವೃತ್ತದ ಶ್ರೀ ದತ್ತಾತ್ರೇಯ ಶಿವಾನಂದ ತೀರ್ಥ ಗುರು ಆಧ್ಯಾತ್ಮ ಮಂದಿರದಲ್ಲಿ ದತ್ತ ಜಯಂತಿ ಅಂಗವಾಗಿ ಮೊನ್ನೆ ಏರ್ಪಾಡಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬ್ರಹ್ಮ, ವಿಷ್ಣು, ಪರಮೇಶ್ವರರ ಸಂಯುಕ್ತ ರೂಪವಾದ ದತ್ತಾತ್ರೇಯರ ಸಂಕೇತವೆಂದರೆ ಜ್ನಾನಾರ್ಜನೆಯೂ ಬ್ರಹ್ಮವಾಗಿಯೂ, ಪಡೆದ ಜ್ಞಾನದ ಉಳಿಸಿಕೊಳ್ಳುವಿಕೆಯು ವಿಷ್ಣುವಾ ಗಿಯೂ, ಅಜ್ಞಾನ ನಾಶವು ಶಿವ ಸಂಕೇತವಾಗಿ ಶುಭವಾಗುತ್ತದೆ, ಹೀಗಾಗಿಯೇ ದತ್ತಾತ್ರೇ ಯರು ಪರಮ ಗುರು ಎನಿಸಿಕೊಳ್ಳುತ್ತಾರೆ. ನಿರ್ಗುಣ ನಿರಾಕಾರ ಸತ್ ಚಿತ್ ಆನಂದದಾಯಕ ಪರಬ್ರಹ್ಮ ವಸ್ತುವಿನ ಅನುಭವ ಬರಬೇಕೆಂದರೆ ಋತ ಸತ್ಯಗಳ ಅರಿವಾಗಬೇಕು, ಇದಕ್ಕಾಗಿ ಜ್ಞಾನ ಸೃಷ್ಟಿಯಾಗಬೇಕು, ಸೃಷ್ಟಿಯಾದ ಜ್ಞಾನ ಶಾಶ್ವತವಾಗಿ ಉಳಿಯಬೇಕು, ಅಂತರದಲ್ಲಿ ಬರುವ ಅಜ್ಞಾನವು ನಾಶವಾಗಲೇ ಬೇಕು, ದತ್ತಾತ್ರೇಯ ರೂಪವು ತ್ರಿಮೂರ್ತಿ ಏಕತ್ರದ ಪರಮ ಸತ್ಯ ಸಂಕೇತವಾಗಿದೆ, ಇದನ್ನು ಅರಿತು ಪಾಲಿಸುವುದೇ ನಿಜವಾದ ದತ್ತಾತ್ರೇಯ ಪೂಜೆ ಮತ್ತು ಆರಾಧನೆ ಎನಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಇಂದಿನ ಪುಷ್ಪಾಲಂ ಕಾರ ಸೇವಾಕರ್ತರಾದ ಡಾ. ಜಾಧವ್ ಅವರನ್ನು ಗೌರವಿಸಿ ಆಶೀರ್ವದಿಸಲಾಯಿತು. ರಾಜನಹಳ್ಳಿ ಹರಿಹರಪ್ಪ ಟ್ರಸ್ಟಿನ ಶ್ರೀಧರ ಶ್ರೇಷ್ಟಿ, ಶ್ರೀಮತಿ ಗೀತಾ ಶ್ರೀಧರ್, ಅಧ್ಯಾತ್ಮ ಮಂದಿರದ ಶ್ರೀಯುತ ಆರ್.ಜಿ.ದತ್ತರಾಜ್ ಮುಂತಾದವರು ಭಾಗವಹಿಸಿದ್ದರು. ವೇದ ಮೂರ್ತಿ ಶಿವರಾಮ ಶಾಸ್ತ್ರೀ ಮುಂತಾದವರು ಪೂಜಾದಿಗಳನ್ನು ನೆರವೇರಿಸಿದರು.
ದತ್ತ ಜಯಂತಿಯ ಸಿಹಿಪ್ರಸಾದ ಸೇವಾ ಕರ್ತರಾದ ದಾವಣಗೆರೆ ಅರ್ಬನ್ ಬ್ಯಾಂಕಿನ ಉಪ ಮಹಾ ಪ್ರಬಂಧಕ ಪ್ರಸನ್ನ ಅವರನ್ನು ಆಶೀರ್ವದಿಸಿ, ಫಲ ಪ್ರಸಾದ ನೀಡಲಾಯಿತು. ಅಧ್ಯಾತ್ಮ ಮಂದಿರದ ಉಪಾಧ್ಯಕ್ಷ ಆರ್‌.ಜಿ.ನಾಗೇಂದ್ರ ಪ್ರಕಾಶ್, ಕಾರ್ಯದರ್ಶಿ ಶ್ರೀಧರ್ ಶ್ರೇಷ್ಟಿ ಮುಂತಾದವರು ಅಲ್ಲಿದ್ದರು.

error: Content is protected !!