ಹರಪನಹಳ್ಳಿ, ಡಿ.28- ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಹಾಗೂ ವಿವಿಧ ಬಾಲಕಿಯರ ವಸತಿ ನಿಲಯಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ನೇತೃತ್ವದ ತಂಡ ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೋಸಂಬೆ ಅವರು ಸ್ಥಳೀಯ ಕ್ಷೇತ್ರ ಸಮನ್ವಯಾಧಿಕಾರಿ ಕಚೇರಿ ಎದುರು ಇರುವ ಆರ್ಎಂಎಸ್ಎ-4 ಬಾಲಕಿಯರ ವಸತಿ ಶಾಲೆಯಲ್ಲಿ ಮೆನು ಪ್ರಕಾರ ಊಟ, ಉಪಹಾರ ಕೊಡುತ್ತಿಲ್ಲ.ಹೆಚ್ಚಿನ ಮಟ್ಟದಲ್ಲಿ ಉಪ್ಪಿಟ್ಟನ್ನು ಕೊಡುತ್ತಾರೆ ಎಂದು ದೂರಿದ ಅವರು, ಒಟ್ಟಿನಲ್ಲಿ ಮಕ್ಕಳಿಗೆ ಹೊಟ್ಟೆ ತುಂಬಾ ಊಟ ಕೊಡುತ್ತಿಲ್ಲ ಎಂದು ಮೇಲ್ವಿಚಾರಕಿಯ ಮೇಲೆ ಗರಂ ಆದರು. ಅಲ್ಲದೇ ನಿಲಯದಲ್ಲಿ ಬಿಸಿ ನೀರು ಇಲ್ಲದಿದ್ದರೂ ಬಿಸಿ ನೀರು ಇದೆ ಎಂದು ಆಯೋಗಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.
ಕೆಕೆಜಿಬಿವಿ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ತೋಡಿಕೊಳ್ಳಲು ದೂರು ಪೆಟ್ಟಿಗೆ ಇಲ್ಲದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಆಯೋಗದ ಸದಸ್ಯರು, ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಶುಚಿತ್ವ, ಬೆಡ್, ದಾಸ್ತಾನು ಪರಿಶೀಲಿಸಿದರು. ತಾಲ್ಲೂಕಿನಲ್ಲಿ 696 ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಇಂತಹ ಮಕ್ಕಳನ್ನು ದಾಖಲಿಸಿ ಕೊಳ್ಳದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಆಸ್ಪತ್ರೆಯಲ್ಲಿನ ಅಪೌಷ್ಟಿಕತೆ ಪುನಶ್ಚೇತನ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಿ, ಅಪೌಷ್ಟಿಕತೆ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡಲು ವೈದ್ಯರಿಗೆ ಸೂಚಿಸಿದರು.
ನಂತರ ಅನಂತನಹಳ್ಳಿ ಬಳಿ ಇರುವ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸುಭದ್ರದೇವಿ, ಹೊಸಪೇಟೆ ಸಿಡಿಪಿಒ ಸಿಂಧು, ಹರಪನಹಳ್ಳಿ ಸಿಡಿಪಿಒ ಹರೀಶ್, ಬಿಇಒ ಬಸವರಾಜಪ್ಪ, ವೈದ್ಯಾಧಿಕಾರಿ ಡಾ.ಶಂಕರನಾಯ್ಕ್, ಮಕ್ಕಳ ತಜ್ಞ ದತ್ತಾತ್ರೆಯ ಪಿಸೆ, ಶಿಕ್ಷಣ ಸಂಯೋಜಕ ಗಿರಜ್ಜಿ ಮಂಜು ನಾಥ್, ಬಿಆರ್ಪಿ ಚನ್ನಪ್ಪ ಕಂಬಳಿ ಸೇರಿದಂತೆ ಇತರರು ಇದ್ದರು.
ಆಸ್ಪತ್ರೆ, ಬಾಲಕಿಯರ ವಸತಿ ನಿಲಯಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ
![22 mbr news 29.12.2023 ಆಸ್ಪತ್ರೆ, ಬಾಲಕಿಯರ ವಸತಿ ನಿಲಯಗಳಿಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಭೇಟಿ](https://janathavani.com/wp-content/uploads/2023/12/22-mbr-news-29.12.2023-860x510.jpg)