ಸಾಮಾಜಿಕ ಸುವ್ಯವಸ್ಥೆಯ ಸಾಕಾರದಲ್ಲಿ ಗೃಹರಕ್ಷಕರ ಪಾತ್ರ ಗಣನೀಯ

ಸಾಮಾಜಿಕ ಸುವ್ಯವಸ್ಥೆಯ ಸಾಕಾರದಲ್ಲಿ ಗೃಹರಕ್ಷಕರ ಪಾತ್ರ ಗಣನೀಯ

ಗೃಹರಕ್ಷಕರ ಜಿಲ್ಲಾ ಕ್ರೀಡಾಕೂಟ ಸಮಾರೋಪದಲ್ಲಿ ಪತ್ರಕರ್ತ ಹೆಚ್.ಬಿ.ಮಂಜುನಾಥ

ದಾವಣಗೆರೆ, ಡಿ.15- ದೇಶದ ಗಡಿ ರಕ್ಷಣೆಯಲ್ಲಿ ಸೈನಿಕರ ಪ್ರಾಮುಖ್ಯತೆ, ದೇಶದೊಳಗೆ ಕಾನೂನು, ಶಿಸ್ತು, ಶಾಂತಿ ಪಾಲನೆಯಲ್ಲಿ ಪೊಲೀಸರ ಪಾತ್ರ ಹೇಗೋ ಹಾಗೆಯೇ ಸಾಮಾಜಿಕ ಸುವ್ಯವಸ್ಥೆಯ ಸಾಕಾರದಲ್ಲಿ ಗೃಹರಕ್ಷಕರ ಸೇವೆಯೂ ಪೂರಕವಾಗಿದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ.ಮಂಜುನಾಥ ಅಭಿಪ್ರಾಯಪಟ್ಟರು. 

ನಗರದ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಗೃಹ ರಕ್ಷಕರ ಜಿಲ್ಲಾ ಮಟ್ಟದ ಕ್ರೀಡಾಕೂಟದ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. 

ಕ್ರೀಡೆ, ಸಾಹಿತ್ಯ, ಕಲೆ, ಸಂಗೀತ ಇವುಗಳಿಗೆ ದೇಶ ದೇಶಗಳ ನಡುವಿನ  ವೈರತ್ವ ಮರೆಸಿ, ಬಾಂಧವ್ಯ ಬೆಸೆಯುವ ಸಾಮರ್ಥ್ಯವಿದೆ. ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ದೈಹಿಕ ಸಾಮರ್ಥ್ಯದ ಪ್ರಕಟಣೆಯೊಂದಿಗೆ ಮಾನಸಿಕ ಸ್ವಾಸ್ಥ್ಯವೂ ಲಭ್ಯವಾಗುತ್ತದೆ ಎಂದರಲ್ಲದೇ 1940 ರಲ್ಲಿ ಇಂಗ್ಲೆಂಡ್ ಮತ್ತು ಜರ್ಮನಿ ನಡುವೆ ಸಮರ ನಡೆಯುತ್ತಿದ್ದಾಗ ಬ್ರಿಟನ್ ಸೈನ್ಯದ ಸಹಕಾರಕ್ಕೆ ಸ್ವಯಂ ಪ್ರೇರಣೆಯಿಂದ ಸಾರ್ವಜನಿಕರು ಬರುವಂತೆ ಸೇನೆಯ ಕಾರ್ಯದರ್ಶಿ ಆಂಥೋನಿ ಈಡನ್ ಕರೆ ಕೊಟ್ಟಿದ್ದು, `ಲೋಕಲ್ ಡಿಫೆನ್ಸ್ ವಾಲೆಂಟಿಯರ್‌’ ಹುಟ್ಟಿಗೆ ಕಾರಣವಾಗಿದ್ದು, ಮುಂದೆ ಇದೇ `ಹೋಂ ಗಾರ್ಡ್’ ಎಂಬ ಹೆಸರನ್ನು ಪಡೆದದ್ದು, ನಮ್ಮ ದೇಶದಲ್ಲೂ ರೂಢಿಗೆ ಬಂದದ್ದು ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು 5,74,000 ಹೋಮ್‌ ಗಾರ್ಡ್‌ಗಳು ಕಾರ್ಯನಿರ್ವಹಿಸುತ್ತಿದ್ದು, 1962ರ ಹೋಮ್ ಗಾರ್ಡ್ ಕಾಯ್ದೆ 35ರಂತೆ ನಮ್ಮ ರಾಜ್ಯದಲ್ಲೂ ಸುಮಾರು 420 ಘಟಕಗಳಲ್ಲಿ ಗೃಹರಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. 

ಪ್ರಕೃತಿ ವಿಕೋಪ, ಸಾಂಕ್ರಾಮಿಕ ರೋಗ, ಬೃಹತ್ ಸಭೆ ಸಮಾವೇಶ, ಉತ್ಸವ ಜಾತ್ರೆಗಳು ಮುಂತಾದ ಸಂದರ್ಭಗಳಲ್ಲೆಲ್ಲಾ ಪೊಲೀಸರ ಜೊತೆಗೆ ಸಹಕಾರಿಯಾಗಿ ಕಾರ್ಯನಿರ್ವಹಿಸುವ ಗೃಹ ರಕ್ಷಕರು, ಅಭಿನಂದನಾರ್ಹರು ಎಂದು ಮಂಜುನಾಥ್ ಹೇಳಿದರು.  

ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಎಸ್.ಹೆಚ್.ಸುಜಿತ್ ಕುಮಾರ್, ಉತ್ಸವ, ಜಾತ್ರೆ ಹಬ್ಬಗಳಲ್ಲಿ ಸಾರ್ವಜನಿಕರು ಸಂಭ್ರಮಿಸುವಾಗಲೂ ಶಾಂತಿ ಸುವ್ಯವಸ್ಥೆಯ ಕಾಪಾಡುವಿಕೆಯಲ್ಲಿ ತೊಡಗಿಕೊಳ್ಳುವ ಗೃಹರಕ್ಷಕ ದಳದವರು, ತ್ಯಾಗ ಮತ್ತು ಸೇವಾ ಮನೋಭಾವದವರು ಎಂದರಲ್ಲದೇ ಜಿಲ್ಲೆಯ ಕ್ರೀಡಾಕೂಟದಲ್ಲಿ ವಿಜಯಿಗಳಾದವರು ರಾಜ್ಯಮಟ್ಟದಲ್ಲೂ  ಜಯಶೀಲರಾಗಲೆಂದು ಹಾರೈಸಿದರು.

ಕಾರ್ಯಕ್ರಮವನ್ನು ಅಂಬರೀಶ್ ನಿರೂಪಿಸಿದರು. ಆಶಾ ಪ್ರಾರ್ಥಿಸಿದರು. ಶೋಭಾ ಸ್ವಾಗತಿಸಿದರು. ಸರಸ್ವತಿ, ಮನ್ಸೂರ್ ಅಹಮದ್, ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರಿದ್ದರು. ವಿಜಯಲಕ್ಷ್ಮಿ ವಂದಿಸಿದರು.

error: Content is protected !!