ರಾಣೇಬೆನ್ನೂರು, ಡಿ. 15 – ಬೆಂಗಳೂರು ಜಿಲ್ಲೆಯಲ್ಲಿ ಏಳು ಸಾವಿರ ಬೃಹತ್ ಕೈಗಾರಿಕೆಗಳಿವೆ. ಹಾವೇರಿ ಜಿಲ್ಲೆಯಲ್ಲಿ ಏಳು ಕೈಗಾರಿಕೆಗಳಿವೆ. ಈ ತಾರತಮ್ಯ ಹೋಗಲಾಡಿಸಬೇಕು. ಉತ್ತರ ಕರ್ನಾಟಕದ ಪ್ರತ್ಯೇಕ ಕೂಗು ಅಡಗಿಸಲು ಈ ಭಾಗದ ಎಲ್ಲಾ ಜಿಲ್ಲೆಗಳ ಅಭಿವೃದ್ಧಿಗೆ ಸರ್ಕಾರ ತೀವ್ರ ಗಮನಹರಿಸಬೇಕು ಎಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಇಂದು ರಾಣೇಬೆನ್ನೂರು ಶಾಸಕ ಪ್ರಕಾಶ ಕೋಳಿವಾಡ ಸರ್ಕಾರಕ್ಕೆ ತೀವ್ರ ಒತ್ತಡ ಹೇರಿದರು.
ಕೈಗಾರಿಕೆ ಸ್ಥಾಪಿಸಲು ಅಗತ್ಯ ಸೌಕರ್ಯಗಳು ರಾಣೇಬೆನ್ನೂರಿನಲ್ಲಿವೆ. ಆ ದಿಶೆಯಲ್ಲಿ ಬಹಳಷ್ಟು ಕೈಗಾರಿಕೋದ್ಯಮಿಗಳನ್ನು ಸಂಪರ್ಕಿಸಿದ್ದೇನೆ. ನನ್ನ ಈ ಪ್ರಯತ್ನಕ್ಕೆ ಸರ್ಕಾರ ಸಾತ್ ನೀಡಬೇಕು. ಇಲ್ಲಿನ ಕೃಷ್ಣಮೃಗ ಅಭಯಾರಣ್ಯವನ್ನು ಅಭಿವೃದ್ಧಿ ಪಡಿಸಿ ಪ್ರವಾಸೋದ್ಯಮ ಬೆಳವಣಿಗೆಗಳು ಪ್ರೋತ್ಸಾಹ ನೀಡುವಂತೆ ಪ್ರಕಾಶ ಕೋಳಿವಾಡ ಸಭಾಪತಿಗಳ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದರು.