ಶುಕ್ರವಾರ ನಿಧನರಾದ ಹಿರಿಯ ಚಿತ್ರ ನಟಿ ಲೀಲಾವತಿ ಅವರು `ತುಂಬಿದ ಕೊಡ’ ಚಲನಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ದಾವಣಗೆರೆಗೆ ಆಗಮಿಸಿದ್ದರು. ದಾವಣಗೆರೆ ನಗರಸಭೆಯ ಎದುರು, ರಾಜನಹಳ್ಳಿ ಹನುಮಂತಪ್ಪನವರ ಛತ್ರದ ಎದುರು, ಪಿ.ಜೆ. ಬಡಾವಣೆಯ ಖಮಿತ್ಕರ್ ಈಶ್ವರಪ್ಪ ರಾಮ ದೇವಸ್ಥಾನದ ಎದುರು, ಹಳೇ ನಗರದ ಸರ್ಕಾರಿ ಆಸ್ಪತ್ರೆ ಎದುರು ಲೀಲಾವತಿ ಅವರು ನಡೆದು ಬರುವ ದೃಶ್ಯ ಹಾಗೂ ಅಲ್ಲೇ ಸಮೀಪದ ಚಾಮರಾಜ ವೃತ್ತದಲ್ಲಿ ಜಯಂತಿಯವರು ಚಲಾಯಿಸುತ್ತಿದ್ದ ಕಾರಿಗೆ ಲೀಲಾವತಿ ಅವರು ಎದುರಾಗಿ ಬೀಳುವ ದೃಶ್ಯ ಎಲ್ಲವೂ ಚಿತ್ರೀಕರಣವಾಗಿತ್ತು.
ನಾನು ಆಗ ಇದನ್ನೆಲ್ಲ ನೋಡಿದ್ದೆ. ಈ ಚಿತ್ರಕ್ಕಾಗಿ ಜನಪ್ರಿಯ ಹಾಡು `ಅಂತಿಂಥ ಹೆಣ್ಣು ನೀನಲ್ಲ, ನಿನ್ನಂತ ಹೆಣ್ಣು ಇನ್ನಿಲ್ಲ….’ ಎನ್ನುವುದನ್ನು ಪಿ.ಕಾಳಿಂಗರಾಯರು ಹಾಡಿರುವುದು. ಈ ಚಲನಚಿತ್ರದಲ್ಲಿ ಲೀಲಾವತಿ ಜೊತೆ ರಾಜಕುಮಾರ್, ಜಯಂತಿ ಹಾಗೂ ದಾವಣಗೆರೆಯ ಹಿರಿಯ ರಂಗಭೂಮಿ ಕಲಾವಿದೆ ಚಿಂದೋಡಿ ಲೀಲಾ ಮುಂತಾದವರು ಪ್ರಧಾನ ಭೂಮಿಕೆಯಲ್ಲಿ ನಟಿಸಿದ್ದರು.
ಬಿಹಾರ ಕ್ಷಾಮ ನಿವಾರಣಾ ನಿಧಿ ಸಂಗ್ರಹಕ್ಕೆ ಕನ್ನಡ ಚಲನಚಿತ್ರ ಕಲಾವಿದರು ದಾವಣಗೆರೆಗೆ ಬಂದಾಗಲೂ ಲೀಲಾವತಿ ಅವರೂ ಬಂದಿದ್ದರು. ರಾಜಕುಮಾರ್, ಜಯಂತಿ, ನರಸಿಂಹರಾಜು, ಬಾಲಕೃಷ್ಣ, ಪಂಡರಿಬಾಯಿ ಮುಂತಾದವರೆಲ್ಲಾ ಬಂದಿದ್ದರು.
– ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ, ದಾವಣಗೆರೆ.