ದವನ-ನೂತನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಬಿ.ವಾಮದೇವಪ್ಪ ಆಶಯ
ದಾವಣಗೆರೆ, ನ. 28 – ಸುದೀರ್ಘ ಇತಿಹಾಸ ಸಾಹಿತ್ಯ ಸಂಪತ್ತು, ನೈಸರ್ಗಿಕ ಶ್ರೀಮಂತಿಕೆ ಇರುವ ಕನ್ನಡ ಭಾಷೆ ನಮ್ಮೆಲ್ಲರ ಬದುಕಿಗೆ ಉಸಿರಾಗಲಿ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಬಿ. ವಾಮದೇವಪ್ಪ ಆಶಯ ವ್ಯಕ್ತಪಡಿಸಿದರು.
ಅವರು ದವನ-ನೂತನ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಯಾವುದೇ ಪ್ರಾದೇಶಿಕ ಭಾಷೆಗೆ ಇಷ್ಟೊಂದು ಶ್ರೀಮಂತಿಕೆ ಕನ್ನಡ ಭಾಷೆ ಹೊರತುಪಡಿಸಿ ಕಾಣುವುದಿಲ್ಲ, ದುರ್ದೈವೆಂದರೆ ಮಾತೃಭಾಷೆ ಮಾತನಾಡಲು ಕನ್ನಡಿಗರೇ ಹಿಂದೇಟು ಹಾಕುತ್ತಿದ್ದಾರೆ. ಕನ್ನಡ ಭಾಷೆ ಊಟದ ಭಾಷೆಯಾಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೂತನ ವಿದ್ಯಾಸಂಸ್ಥೆಯ ಅಧ್ಯಕ್ಷ ಎನ್. ಪರಶುರಾಮನಗೌಡ ಮಾತೃಭಾಷೆ ಜೀವಂತವಾಗಿ ಹೀಗೇ ಉಳಿಯಲು ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳಲು ಮುಂದಾಗಬೇಕಿದೆ ಎಂದರು.
ದವನ್ -ನೂತನ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಉಚ್ಚರಿಸು ಕನ್ನಡ ಸ್ಪರ್ಧೆ ಮಾಡಲಾಯಿತು. ಸ್ಪರ್ಧೆಯಲ್ಲಿ ಅಕ್ಷರಮಾಲೆ ಸುತ್ತು, ಗಾದೆ ಮಾತು ಸುತ್ತು, ಕನ್ನಡ ಸಂಖ್ಯೆಯ ಸುತ್ತು, ಕಾಗುಣಿತದ ಸುತ್ತು, ಕವಿಯ ಹೆಸರು ಪೂರ್ಣ ಮಾಡುವ ಸುತ್ತು ಹೀಗೆ 5 ಸುತ್ತಿನ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಚೈತ್ರ, ದ್ವಿತೀಯ ಬಹುಮಾನ ಗೌರಿ ತೃತೀಯ ಬಹುಮಾನ ಮಂಜುನಾಥ ಪಡೆದರು.
ಕಾರ್ಯಕ್ರಮದಲ್ಲಿ ದವನ-ನೂತನ ಪದವಿ ಪೂರ್ವ ಕಾಲೇಜು ಉಪ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ಎನ್, ಕನ್ನಡ ಉಪನ್ಯಾಸಕರಾದ ಕೊಟ್ರಪ್ಪ ಕೆ, ಲಲಿತಾ ಎಸ್.ಕೆ ಉಪಸ್ಥಿತರಿದ್ದರು.