ಬೆನಕನಗೊಂಡ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಉದ್ಘಾಟಿಸಿದ ನಾಗರಾಜ ಶೆಟ್ಟಿ
ರಾಣೇಬೆನ್ನೂರು, ನ.23- ಕೆರೆಕಟ್ಟೆಗಳು ಹಳ್ಳಿಗಳ ಜೀವನಾಡಿಯಾಗಿದ್ದು ಕೆರೆಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಹೇಳಿದರು.
ತಾಲ್ಲೂಕಿನ ಬೆನಕನಗೊಂಡ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗ್ರಾಮ ಪಂಚಾಯಿತಿ ಮತ್ತು ಬೆನಕನಹೊಂಡ ಕೆರೆ ಅಭಿವೃದ್ಧಿ ಸಮಿತಿ ಹಾಗೂ ಗ್ರಾಮಸ್ಥರ ಸಹಭಾಗಿತ್ವದಲ್ಲಿ `ನಮ್ಮ ಕೆರೆ’ ಕಾರ್ಯಕ್ರಮದ ಅಡಿಯಲ್ಲಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಈಗಾಗಲೇ ರಾಜ್ಯದಲ್ಲಿ 630 ಕೆರೆಗಳನ್ನು ಪುನಶ್ಚೇತನ ಗೊಳಿಸಲಾಗಿದೆ, ಇದು 631ನೇ ಕೆರೆಯಾಗಿ ತಾಲ್ಲೂಕಿನ ಬೆನಕನಕೊಂಡ ಕೆರೆ ಈ ಆರ್ಥಿಕ ವರ್ಷದಲ್ಲಿ ಪುನಶ್ಚೇತನಗೊಳ್ಳಲು ಆಯ್ಕೆಯಾಗಿದ್ದು, ಗ್ರಾಮಸ್ಥರು ಕೆರೆ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಕೆರೆ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಬಿದರಿ ಮಾತನಾಡಿ, ಧರ್ಮಸ್ಥಳ ಯೋಜನೆಯಿಂದ ನಮ್ಮ ಊರಿಗೆ ಹಲವಾರು ರೀತಿಯಲ್ಲಿ ಅನುಕೂಲವಾಗಿದೆ ಎಂದರು.
ಯೋಜನಾಧಿಕಾರಿ ಮಂಜುನಾಥ ಗೌಡ, ಕೃಷಿ ಅಧಿಕಾರಿ ರಮೇಶ ಪೂಜಾರ, ಕೆರೆ ಅಭಿ ಯಂತರ ನಿಂಗರಾಜ, ವಲಯದ ಪ್ರತಿನಿಧಿ ರವಿ, ಸೇವಾ ಪ್ರತಿನಿಧಿ ಬಸಮ್ಮ, ಕೆರೆ ಸಮಿತಿ ಉಪಾಧ್ಯಕ್ಷ ಲಿಂಗನಗೌಡ ಸಂಗನಗೌಡ್ರ, ಮುಖಂಡ ಕರೇಗೌಡ ಸಂಗನಗೌಡ್ರು ಹಾಗೂ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.