ಕಾಲಮಿತಿಯಲ್ಲಿ ಅನುದಾನ ವೆಚ್ಚಕ್ಕೆ ಸೂಚನೆ

ಕಾಲಮಿತಿಯಲ್ಲಿ ಅನುದಾನ ವೆಚ್ಚಕ್ಕೆ ಸೂಚನೆ

ಎಸ್.ಸಿ.ಪಿ, ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ  ಡಾ. ವೆಂಕಟೇಶ್

ದಾವಣಗೆರೆ, ನ. 16- ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ರೂಪಿಸುವ ಯೋಜನೆಗೆ ಬಿಡುಗಡೆಯಾಗುವ ಅನುದಾನವನ್ನು ಕಾಲಮಿತಿ ಯಲ್ಲಿ ವೆಚ್ಚ ಮಾಡಬೇಕೆಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ ಸೂಚನೆ ನೀಡಿದರು. 

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಇಂದು ನಡೆದ ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಮಾರ್ಚ್ ಮಾಫಿಯಾಗೆ ಆಕ್ಷೇಪ. ಕೆಲವು ಇಲಾಖೆಯವರು ವರ್ಷವಿಡಿ ಅನುದಾನ ಖರ್ಚು ಮಾಡದಿದ್ದರೂ, ಮಾರ್ಚ್‌ನಲ್ಲಿ ಶೇ. 100 ರಷ್ಟು ಸಾಧನೆ ಮಾಡುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದೆ, ಕೊನೆಯಲ್ಲಿ ಖರ್ಚು ಮಾಡುವ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ನೈಜ ಕಾರಣಗಳಿಲ್ಲದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದರು. 

ಸಕಾಲದಲ್ಲಿ ವೆಚ್ಚ ಮಾಡಿ, ಈಗಾಗಲೇ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆ ಅನುಮೋದನೆಯಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ವರ್ಷಾಂತ್ಯದಲ್ಲಿ ಚುನಾವಣೆ ಬರುವುದರಿಂದ ಟೆಂಡರ್ ಕರೆದು ಅನುಷ್ಟಾನ ಮಾಡಬೇಕು.

ಬೆಸ್ಕಾಂ ಶೂನ್ಯ ಪ್ರಗತಿ, ಆರೋಗ್ಯ ಇಲಾಖೆ ಶೇ. 87, ಆಯುಷ್‌ ಶೇ. 35, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶೇ. 64, ಜಲಸಂಪನ್ಮೂಲ ಇಲಾಖೆ ಶೇ. 46 ಸಾಧಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ರೂ.6 ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ನೀಡಿದ್ದು, ಅನುದಾನ ಬರಬೇಕಿದೆ ಎಂದಾಗ ನೀರಾವರಿ ಸೌಲಭ್ಯದ ಜೊತೆಗೆ ಅವರ ಜಮೀನುಗಳಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ಕೆರೆ, ಚೆಕ್ ಡ್ಯಾಂ ನಿರ್ಮಾಣವನ್ನು ಜಲಸಂಪನ್ಮೂಲ ಇಲಾಖೆಯವರು ಮುಂದಾಗಬೇಕೆಂದರು.ನೀರಾವರಿ ಕೊನೆ ಭಾಗದ ಅನೇಕ ರೈತರು ನೀರು ತಲುಪುತ್ತಿಲ್ಲ ಎಂದು ಮನವಿ ಮಾಡಿದ್ದಾರೆ. 

ಖಾತರಿಯಡಿ ಕಾಲುವೆ ಸ್ವಚ್ಛತೆ, ಜಿಲ್ಲೆಯಲ್ಲಿ ಉದ್ಯೋಗ ಖಾತರಿಯಡಿ ವಾರ್ಷಿಕ 35 ಲಕ್ಷ ಮಾನವ ದಿನಗಳ ಗುರಿ ಇದ್ದು ಇದನ್ನು ಇನ್ನೂ ಹೆಚ್ಚಿಸುವ ಮೂಲಕ ಕಾಲುವೆ ಸ್ವಚ್ಛ ಮಾಡಲು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾಯೋಜನೆ ಪರಿಷ್ಕರಿಸಿ, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಜಿ.ಪಂ. ಯೋಜನಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಇಲಾಖೆ ಎಸ್.ಸಿ.ಪಿ.ಯಿಂದ ಶೇ. 72 ಮತ್ತು ಟಿ.ಎಸ್.ಪಿ.ಯಲ್ಲಿ ಶೇ. 77 ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಶೇ. 74.50 ರಷ್ಟು ಪ್ರಗತಿ ದಾಖಲಾಗಿದೆ. ಇದನ್ನು ಬರುವ ಡಿಸೆಂಬರ್ ವೇಳೆಗೆ ಶೇ. 80 ಕ್ಕಿಂತಲೂ ಹೆಚ್ಚು ಸಾಧನೆ ಆಗಿರಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜ ನಾಧಿಕಾರಿ ಮಲ್ಲನಾಯಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ. ನಾಗರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!