ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ; ಪಕ್ಷದ ಕಾರ್ಯಕರ್ತರಿಗೆ ಆನೆ ಬಲ

ವಿಜಯೇಂದ್ರಗೆ ಅಧ್ಯಕ್ಷ ಸ್ಥಾನ; ಪಕ್ಷದ ಕಾರ್ಯಕರ್ತರಿಗೆ ಆನೆ ಬಲ

ಹರಿಹರ : ಸಂಭ್ರಮಾಚರಣೆಯಲ್ಲಿ ಶಾಸಕ ಬಿ.ಪಿ.ಹರೀಶ್ 

ಹರಿಹರ, ನ.15- ಬಿಜೆಪಿ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ವೈ.ವಿಜಯೇಂದ್ರ  ಅವರಿಂದ ಪಕ್ಷದ ಕಾರ್ಯಕರ್ತರಲ್ಲಿ ಆನೆಯ ಬಲ ಮತ್ತು ಹೊಸ ಚೈತನ್ಯ ತುಂಬಿದೆ. ಅವರ ಸಾರಥ್ಯದಲ್ಲಿ ಪಕ್ಷದ ಸಂಘಟನಾ ಶಕ್ತಿ ಇಮ್ಮಡಿಗೊಳ್ಳಲಿದೆ ಎಂಬ ವಿಶ್ವಾಸವನ್ನು ಶಾಸಕ ಬಿ.ಪಿ. ಹರೀಶ್ ವ್ಯಕ್ತಪಡಿಸಿದರು.

ನಗರದ ಬಿಜೆಪಿ ಕಛೇರಿ ಮುಂಭಾಗದಲ್ಲಿ ಗ್ರಾಮಾಂತರ ಮಂಡಲ ಮತ್ತು ನಗರ ಘಟಕದಿಂದ ಹಮ್ಮಿಕೊಳ್ಳಲಾಗಿದ್ದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ,  ಪಕ್ಷವನ್ನು ಸಮರ್ಥವಾಗಿ ಮುನ್ನಡೆಸುವ, ಸಂಘಟಿಸುವ ಶಕ್ತಿ ಅವರಲ್ಲಿದ್ದು, ಅದನ್ನು ಅವರೀಗಾಗಲೇ ಸಾಬೀತುಪಡಿಸಿದ್ದಾರೆ. ಅದನ್ನು ಮನಗಂಡ ಪಕ್ಷದ ಹೈಕಮಾಂಡ್ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದು ನಾಡಿನ ಎಲ್ಲ ವರ್ಗದವರಲ್ಲೂ ಹರ್ಷ ಮೂಡಿಸಿದೆ ಎಂದರು.

ಮುಂಬರುವ ಲೋಕಸಭೆ, ತಾಪಂ, ಜಿಪಂ ಚುನಾವಣೆಯಲ್ಲಿ ಅವರ ನೇತೃತ್ವದಲ್ಲಿ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಲಿದೆ.  ವಿಜಯೇಂದ್ರ ಅವರ ನೇತೃತ್ವದಲ್ಲಿ ಪಕ್ಷ ಸಂಘಟನೆಗೆ ಮುಂದಾಗೋಣ. ಆ ಮೂಲಕ ಪ್ರಧಾನಿ ನರೇಂದ್ರ ಮೋದಿ  ಅವರ ಕೈ ಬಲಪಡಿಸೋಣ ಎಂದು ಹರೀಶ್ ಹೇಳಿದರು.

ಈ ವೇಳೆ ಗ್ರಾಮಾಂತರ ಘಟಕದ ಅಧ್ಯಕ್ಷ ಹಿಂಡಸಘಟ್ಟೆ ಲಿಂಗರಾಜ್ ಮಾತನಾಡಿ, ಬಿಜೆಪಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಾಯಕತ್ವದ ಗುಣ ವಿಜಯೇಂದ್ರ ಅವರಲ್ಲಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ. ಕಾರ್ಯಕರ್ತರು ಸಣ್ಣ-ಪುಟ್ಟ ಮನಸ್ತಾಪಗಳನ್ನು ಬದಿಗೊತ್ತಿ, ವಿಜಯೇಂದ್ರ ಅವರ ಸಾರಥ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಮತ್ತೆ ರಾಜ್ಯದ 28 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇಶದ ಪ್ರಗತಿಗಾಗಿ ಹಗಲಿರುಳು ಶ್ರಮಿಸುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದೀಜಿ ಕೈ ಬಲಪಡಿಸೋಣ ಎಂದರು.

  ಈ ವೇಳೆ ನಗರ ಘಟಕ ಅಧ್ಯಕ್ಷ ಅಜಿತ್ ಸಾವಂತ್, ಮಾಜಿ ಅಧ್ಯಕ್ಷ ರಾಜು ರೋಖಡೆ, ಪರಶುರಾಮ್ ಕಾಟ್ವೆ, ದೂಡ ಮಾಜಿ ಸದಸ್ಯ ಬಾತಿ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ  ತುಳಜಪ್ಪ ಭೂತೆ, ಮಂಜಾನಾಯ್ಕ ಹೆಚ್.ವೀರೇಶ್ ಆದಾಪುರ, ಮುಖಂಡರಾದ ಸುನೀಲ್ ಕುಮಾರ್, ರಾಚಪ್ಪ, ಸಂತೋಷ್ ಗುಡಿಮನಿ, ವಿನಾಯಕ ಆರಾಧ್ಯಮಠ,  ಮಂಜು ಅಗಡಿ, ಸಂತೋಷ್ ಪೋಟೋ, ಪ್ರಶಾಂತ್, ಆನಂದ್, ರಾಜು ಕಿರೋಜಿ, ಅದ್ವೈತ ಶಾಸ್ತ್ರಿ, ಓಂ ನಾಗರಾಜ್, ಸುರೇಶ್ ತೆರದಹಳ್ಳಿ, ಪುಟ್ಟ ಶಾಂತನ್ ಇತರರಿದ್ದರು.

error: Content is protected !!