ದಾವಣಗೆರೆ, ನ.12- ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಸಮರ್ಥ ಯುವ ನಾಯಕನ ಆಯ್ಕೆಯಿಂದ ನನಗೂ ಹಾಗೂ ರಾಜ್ಯದ ಜನರಿಗೂ ಬಹಳ ಸಂತೋಷವಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ಅವರ ನಿವಾಸಕ್ಕೆ ಭೇಟಿ ನೀಡಿ, ದಂಪತಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ರನ್ನಾಗಿ ಮಾಡಿದ್ದು, ಕಾರ್ಯಕರ್ತರಲ್ಲಿ ಹುಮ್ಮಸ್ಸು ಹೆಚ್ಚುವಂತೆ ಮಾಡಿದ್ದು, ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ ಎಂದ ರೇಣುಕಾಚಾರ್ಯ, ವಿಜಯೇಂದ್ರ ಅವರು `ಹಳೇ ಬೇರು, ಹೊಸ ಚಿಗುರು’ಗಳನ್ನು ಸೇರಿಸಿಕೊಂಡು ಒಟ್ಟುಗೂಡಿಸಿಕೊಂಡು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 25 ಸ್ಥಾನ ಗೆದ್ದಿದ್ದು, ಈ ಬಾರೀ ವಿಜಯೇಂದ್ರ ಅವರ ಸಾರಥ್ಯದಲ್ಲಿ 28 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲುತ್ತದೆಂಬ ವಿಶ್ವಾಸ ಇದೆ. ವಿಧಾನಸಭಾ ಚುನಾವಣೆಯಲ್ಲಿ 125 ರಿಂದ 130 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆಂದು ವಿಶ್ವಾಸ ವ್ಯಕ್ತ ಪಡಿಸಿದರು.
ಪ್ರಿಯಾಂಕ ಖರ್ಗೆ ವಿರುದ್ದ ಆಕ್ರೋಶ : ಪ್ರಿಯಾಂಕ ಖರ್ಗೆ ಅವರು ಬಿಜೆಪಿಯವರದ್ದು ಕುಟುಂಬ ರಾಜಕಾರಣ ಎಂದು ಹೇಳಿದ್ದು, ಅವರಿಗೆ ಟೀಕೆ ಮಾಡುವ ನೈತಿಕತೆ ಇಲ್ಲ ಎಂದ ರೇಣುಕಾಚಾರ್ಯ, ಕಾಂಗ್ರೆಸ್ ಎಂದರೆ ಕುಟುಂಬ ರಾಜಕಾರಣ, ನೆಹರೂ ಕಾಲದಿಂದ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಇಷ್ಟು ಜನ ಕುಟುಂಬ ರಾಜಕಾರಣ ಮಾಡಿದ್ದು, ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣ ಇದೆ ಎಂದರು.
ಲೋಕಸಭೆಗೆ ಪ್ರಬಲ ಆಕಾಂಕ್ಷಿ : ಕಾರ್ಯಕರ್ತರ, ಮುಖಂಡರ ಅಪೇಕ್ಷೆಯಿಂದ ಎಲ್ಲರ ಒತ್ತಾಯಕ್ಕೆ ಮಣಿದು ನಾನು ದಾವಣಗೆರೆ ಲೋಕಸಭೆಗೆ ಪ್ರಬಲ ಆಕಾಂಕ್ಷಿ ಎಂದ ರೇಣುಕಾಚಾರ್ಯ, ನಾನು ಸೋಲು-ಗೆಲುವು ಎರಡನ್ನೂ ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಹಾಗಾಗಿ ಕಳೆದ ಆರು ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕೂರದೇ ಅವಳಿ ತಾಲ್ಲೂಕಿನಲ್ಲಿ ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.
ನನಗೆ ಸಂಘರ್ಷ ಬೇಕಾಗಿಲ್ಲ, ಇನ್ನೇನಿದ್ದರೂ ಸಾಮರಸ್ಯ ಬೇಕಾಗಿದೆ. ಒಟ್ಟಾಗಿ ಸೇರಿ ಪಕ್ಷ ಕಟ್ಟ ಬೇಕಾಗಿದೆ ಎಂದ ಅವರು, ಇನ್ನು ಮುಂದೆ ರೇಣುಕಾಚಾರ್ಯ ನಿದ್ರೆ ಮಾಡೊಲ್ಲ. ನಾನು ಎಲೆ ಮರೆ ಕಾಯಿಯಾಗಿ, 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸುಮಾ ಎಂ.ಪಿ.ರೇಣುಕಾಚಾರ್ಯ, ಕೆ.ಪಿ. ಕಲ್ಲಿಂಗಪ್ಪ, ರಾಜು (ವೀರಣ್ಣ) ಸೇರಿದಂತೆ ಇತರರಿದ್ದರು.