ಕೈಮುಗಿದು ಏರು ಇದು ಕನ್ನಡದ ತೇರು

ಕೈಮುಗಿದು ಏರು ಇದು ಕನ್ನಡದ ತೇರು

ಕೈಮುಗಿದು ಏರು ಇದು ಕನ್ನಡದ ತೇರು - Janathavani

ನಿರ್ವಾಹಕನ ನುಡಿ ಪ್ರೇಮ, ಕನ್ನಡದ ರಥವಾದ ಬಸ್

ಹರಪನಹಳ್ಳಿ-ಕೊಟ್ಟೂರು ಮಾರ್ಗದ ಸರ್ಕಾರಿ ಬಸ್‍ನಲ್ಲಿ  ಕನ್ನಡ ಧ್ವಜದ ಹಾರಾಟ, ಕನ್ನಡ ಹಾಡುಗಳ ನಿನಾದ

ಹರಪನಹಳ್ಳಿ, ನ. 2- ಸರ್ಕಾರಿ ಬಸ್‍ನಲ್ಲಿ ವಿವಿಧ ಕಲಾವಿದರು, ಕನ್ನಡ ಪುಸ್ತಕಗಳು, ಶಿಕ್ಷಣ ಸಂಸ್ಥೆಗಳ ಪರಿಚಯ, ಯುವ ಸಾಹಿತಿಗಳ ಮಾಹಿತಿ, ತಳಿರು ತೋರಣ, ಬಾಳೆಕಂಬದಿಂದ ಸಿಂಗಾರ, ಕನ್ನಡ ಧ್ವಜದ ಹಾರಾಟ, ಕನ್ನಡ ಹಾಡುಗಳ ನಿನಾದ ಇದು  68ನೇ ಕನ್ನಡ ರಾಜ್ಯೋತ್ಸವ ಅಂಗವಾಗಿ ಪಟ್ಟಣದಲ್ಲಿ ರಾಜ್ಯ ರಸ್ತೆ ಸಾರಿಗೆ  ಬಸ್ಸೊಂದರಲ್ಲಿ  ಕಂಡು ಬಂದ ದೃಶ್ಯ.

ಚಿಗಟೇರಿ ಗ್ರಾಮದ ಬಸ್ ಕಂಡಕ್ಟರ್ ಬಿ.ಎಂ. ನಾಗರಾಜ್ ಕಳೆದ 10 ವರ್ಷಗಳಿಂದ ಸಾರಿಗೆ ಬಸ್ಸನ್ನು ರಾಜ್ಯೋತ್ಸವದಂದು ಕನ್ನಡ ರಥವನ್ನಾಗಿ ಮಾರ್ಪಡಿಸಿ ಕನ್ನಡ, ಸಾಹಿತ್ಯ, ಹಾಡುಗಳು, ಸಾಹಿತಿ, ಕವಿಗಳನ್ನು ಬಸ್‍ನಲ್ಲಿ ಪರಿಚಯಿಸಿ ಪ್ರಯಾಣಿಕರ ಗಮನ ಸೆಳೆಯುತ್ತಾ ಬಂದಿದ್ದಾರೆ.

ಪ್ರತಿವರ್ಷ ಒಂದೊಂದು ರೀತಿ ಬಸ್ಸನ್ನು ಕನ್ನಡಮಯವಾಗಿಸುವ ಈತ ಈ ಬಾರಿ ಬಸ್ಸಿನ ಮುಂಭಾಗ ಸುತ್ತಲೂ ಕೆಂಪು, ಹಳದಿ ಬಣ್ಣದ ಬಾವುಟ ಸುತ್ತಿ, ಬಲೂನುಗಳನ್ನು ಹಾರವಾಗಿ ಮಾಡಿ ಹಾಕಿದ್ದಾರೆ. ಒಳಗಡೆ ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂ, ಗಿರೀಶ್ ಕಾರ್ನಾಡ್ ಹೀಗೆ ಸಾಹಿತ್ಯ, ವಿಜ್ಞಾನ, ಸಾಂಸ್ಕೃತಿಕ, ರಂಗಭೂಮಿ, ರಾಜಕೀಯ ಮುಂತಾದ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರ ಭಾವಚಿತ್ರ ಅಂಟಿಸಿದ್ದಾರೆ.

ಕರ್ನಾಟಕದ ಹೆಸರಾಂತ ಸ್ಥಳಗಳ ಪರಿಚಯ, ಭಾವಚಿತ್ರ, ಮಾಹಿತಿ, ಕವಿಗಳ, ಸಾಹಿತಿಗಳ ಪರಿಚಯ ಹಾಗೂ ರಕ್ತದಾನ ಮಾಡಿ ಜೀವ ಉಳಿಸಿ ಎಂಬ ಬರಹ, ಇವೆಲ್ಲವುಗಳ ಮಧ್ಯೆ ಕನ್ನಡದ ನಾಡು- ನುಡಿಗೆ ಸಂಬಂಧಪಟ್ಟ  ಸರ್ಕಾರ ನಿರ್ದೇಶನ ನೀಡಿದ `ಉದಯವಾಗಲಿ ನಮ್ಮ ಕನ್ನಡ ನಾಡು,’ ಎಲ್ಲಾದರೂ ಇರು ಎಂತಾದರೂ ಇರು ನಿ ಕನ್ನಡಿವಾಗಿರು, ಒಂದೇ ಒಂದೇ ಕರ್ನಾಟಕ ಒಂದೇ, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ಹೊತ್ತಿತು ಹೊತ್ತಿತು ಕನ್ನಡ ದೀಪ ಹೀಗೆ ಇಂಪಾದ ಹಾಡುಗಳ ನೀನಾದ, ಒಟ್ಟಾರೆ ಬಸ್‍ನಲ್ಲಿ ಹತ್ತಿದರೆ ಇಳಿಯಲು ಮನಸ್ಸು ಬರವುದಿಲ್ಲ. ಈ ಬಸ್ ಹರಪನಹಳ್ಳಿ-ಕೊಟ್ಟೂರು ಮಾರ್ಗದಲ್ಲಿ ಸಂಚರಿಸುತ್ತದೆ.

ಕಂಡಕ್ಟರ್ ಬಿ.ಎಂ. ನಾಗರಾಜ್ ಮಾತನಾಡಿ, ಕನ್ನಡ ಸಾಹಿತ್ಯದ ಬಗ್ಗೆ ಜನರಿಗೆ ಜಾಗೃತಿ ಮೂಡಲಿ ಎಂಬ ಸದಾಶಯದಿಂದ ಪ್ರತಿವರ್ಷ ವಿಭಿನ್ನವಾಗಿ ಬಸ್ಸನ್ನು ಕನ್ನಡಮಯವಾಗಿಸುತ್ತೇನೆ, ಪ್ರತಿವರ್ಷ ಸ್ವಂತ ಖರ್ಚಿನಲ್ಲಿ ಕನ್ನಡ ಉಳಿಸುವ ಕಾಯಕ ಮಾಡುತ್ತಾ ಬಂದಿದ್ದೇನೆ. ಕನ್ನಡದ ಕೆಲಸಕ್ಕೆ ಸ್ಥಳೀಯ ಡಿಪೋ ಮ್ಯಾನೇಜರ್ ಹಾಗೂ ಸಿಬ್ಬಂದಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮೆಕ್ಯಾನಿಕ್‍ಗಳಾದ ರಮೇಶ್‌ ಹಾಗೂ ಗಜನಾಯ್ಕ ಅವರ ಪ್ರೋತ್ಸಾಹ ಹಾಗೂ ಸಹಕಾರ ಯಾವಾಗಲೂ ಇದೆ ಎನ್ನುತ್ತಾರೆ.

error: Content is protected !!