ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಬಣ್ಣನೆ
ಜಗಳೂರು, ನ.2- ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಸರಳ ಜೀವನ, ಆಡಳಿತ ವೈಖರಿ ಇಂದಿನ ರಾಜಕಾರಣಿಗಳಿಗೆ ಆದರ್ಶ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಜನಸಂಪರ್ಕ ಕೇಂದ್ರದಲ್ಲಿ ಇಂದಿರಾ ಗಾಂಧಿ ಅವರ 39ನೇ ಪುಣ್ಯಸ್ಮರಣೆ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಇಂದಿರಾ ಗಾಂಧಿ ಅವರು ಆಗರ್ಭ ಶ್ರೀಮಂತನ ಮಗಳಾಗಿ ಜನಿಸಿದರೂ ಬಡವರ ಪ್ರತಿಬಿಂಬವಾಗಿ ತನ್ನದೇ ಜೀವನಶೈಲಿಯಲ್ಲಿ ಪ್ರತಿಯೊಬ್ಬರ ಬದುಕಿನ ಆಶಾಕಿರಣವಾಗಿದ್ದರು. ದೇಶಕ್ಕಾಗಿ ಅವರು ಪ್ರಾಣ ತ್ಯಾಗ ಮಾಡಿದ ಅಜರಾಮರ ಎಂದು ಬಣ್ಣಿಸಿದರು.
ದೇಶದ ಒಗ್ಗೂಡಿಕೆಗಾಗಿ 1885 ರಲ್ಲಿ ಎ.ಓ.ಹ್ಯೂಮ್ ಅವರು ಸ್ಥಾಪಿಸಿದ ಕಾಂಗ್ರೆಸ್ ಪಕ್ಷ ದೇಶದ ಜನಪರ, ಜನಪ್ರಿಯ ಆಡಳಿತಕ್ಕೆ ಕೈಗನ್ನಡಿಯಾಗಿದೆ.ದೇಶಕ್ಕೆ ಸ್ವಾತಂತ್ರ್ಯ, ತ್ರಿವರ್ಣ ಧ್ವಜ ಒದಗಿಸಿದ ಕಾಂಗ್ರೆಸ್ ಪಕ್ಷಕ್ಕೆ ಇತಿಹಾಸವಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕಛೇರಿಯಿಲ್ಲದೆ ಪಕ್ಷದ ಸಭೆ ನಡೆಸಲು ಸ್ಥಳಕ್ಕಾಗಿ ಪರದಾಡಬೇಕಿತ್ತು. ಇದೀಗ ಚಿರಪರಿಚಿತ ಪಟ್ಟಣ ಪಂಚಾಯಿತಿ ಹಳೇ ಕಟ್ಟಡ ಜನಸಂಪರ್ಕ ಕೇಂದ್ರವಾಗಿ ಸುಂದರ ಅಲಂಕಾರಗೊಂಡು, ಪುಸ್ತಕಗಳ ಜ್ಞಾನಭಂ ಡಾರವಾಗಿ ಮಾರ್ಪಟ್ಟಿದೆ ಎಂದರು.
ಕೆಪಿಸಿಸಿ ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ, ಕೆಪಿಸಿಸಿ ಸದಸ್ಯ ಕಲ್ಲೇಶ್ರಾಜ್ ಪಟೇಲ್, ಕೆಪಿಸಿಸಿ ಎಸ್ಸಿ ಘಟಕದ ಸಿ.ತಿಪ್ಪೇಸ್ವಾಮಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಪಲ್ಲಾಗಟ್ಟೆ ಶೇಖರಪ್ಪ, ಓಬಣ್ಣ, ಪ್ರಕಾಶ್ ರೆಡ್ಡಿ, ಗುರುಮೂರ್ತಿ, ಪ್ರಭು, ಕಾಟಪ್ಪ, ಅಹಮ್ಮದ್ ಅಲಿ, ಎ. ವೆಂಕಟೇಶ್, ವಿಜಯ್ ಕೆಂಚೋಳ್, ಸತ್ಯಮೂರ್ತಿ, ಬಿ.ಮಹೇಶ್ವರಪ್ಪ, ಪ.ಪಂ ಸದಸ್ಯ ರಮೇಶ್ ರೆಡ್ಡಿ, ತಾನಾಜಿ, ಜಯ್ಯಣ್ಣ, ಶಾಂತಕುಮಾರ್ ಮುಂತಾದವರು ಇದ್ದರು.