‘ಕರುನಾಡ ರತ್ನ’ ಅಪ್ಪು ಆದರ್ಶಗಳು ಸಮಾಜಸೇವೆಗೆ ದಾರಿದೀಪ

‘ಕರುನಾಡ ರತ್ನ’ ಅಪ್ಪು ಆದರ್ಶಗಳು ಸಮಾಜಸೇವೆಗೆ ದಾರಿದೀಪ

ಪುನಿತ್ ರಾಜಕುಮಾರ್ 2ನೇ ಪುಣ್ಯಸ್ಮರಣೆಯಲ್ಲಿ ಗಡಿಗುಡಾಳ್ ಮಂಜುನಾಥ್

ದಾವಣಗೆರೆ, ಅ.29- ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿನ ಉದ್ಯಾನವನದಲ್ಲಿರುವ ಪುನಿತ್‌ ಆನಂದವನದಲ್ಲಿ ಪವರ್ ಸ್ಟಾರ್ ದಿ. ಪುನಿತ್ ರಾಜಕುಮಾರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಮಾಡಲಾಯಿತು. 

ಪೌರ ಕಾರ್ಮಿಕರೊಂದಿಗೆ ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಅವರು ಪುಣ್ಯಸ್ಮರಣೆ ಮಾಡಿದ್ದು ವಿಶೇಷ. ಪೌರ ಕಾರ್ಮಿ ಕರು ಹಾಗೂ ಗಡಿಗುಡಾಳ್ ಮಂಜುನಾಥ್ ಅವರು ಪುನಿತ್ ರಾಜಕುಮಾರ್ ಅವರ ಪ್ರತಿಮೆಗೆ ಹೂವಿನ ಹಾರ ಹಾಕಿ ಪೂಜೆ ಸಲ್ಲಿಸುವ ಮೂಲಕ ಸ್ಮರಿಸಿದರು. 

ಈ ವೇಳೆ ಮಾತನಾಡಿದ ಅವರು, ಪುನಿತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಇಂದಿಗೆ ಎರಡು ವರ್ಷ. ಆದರೂ ಕರ್ನಾಟಕ ಮಾತ್ರವಲ್ಲ ದೇಶದ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಈಗಲೂ ನೆಲೆಸಿದ್ದಾರೆ. ಎರಡೂ ವರ್ಷವಾದರೂ ಅಭಿಮಾನಿಗಳು ಮಾತ್ರ ಸ್ಮರಣೆ ನಿಲ್ಲಿಸಿಲ್ಲ. ಕೋಟ್ಯಾನುಕೋಟಿ ಫ್ಯಾನ್ಸ್‌ಗೆ ಅವರು ಇಂದಿಗೂ ಆದರ್ಶ. ಅವರ ಬದುಕು, ಜೀವನಶೈಲಿ, ಮಾಡಿದ ಸಮಾಜ ಸೇವೆ ಎಲ್ಲರಿಗೂ ಪ್ರೇರಣೆ ಎಂದು ಹೇಳಿದರು. 

ಪುನಿತ್ ರಾಜಕುಮಾರ್ ಅವರ ವಿನಯತೆ ಈಗಲೂ ಎಲ್ಲರೂ ನೆನಪು ಮಾಡಿಕೊಳ್ಳುತ್ತಿದ್ದಾರೆ. ಪುನಿತ್ ರಾಜಕುಮಾರ್ ಅವರ ಸಮಾಧಿಗೆ ಈಗಲೂ ಬರುತ್ತಿರುವ ಕೋಟ್ಯಾಂತರ ಅಭಿಮಾನಿಗಳೇ ಸಾಕ್ಷಿ. ಇಂತಹ ನಟನ ಜೀವನ ಶೈಲಿಯನ್ನು ನಾವು ಕೇವಲ ಮಾತಿನಲ್ಲಿ ಹೇಳದೇ, ನಿಜ ಜೀವನದಲ್ಲಿಯೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.

error: Content is protected !!