ರಾಣೇಬೆನ್ನೂರು, ಅ.29- ಮಹಾತ್ಮರ ಜಯಂತಿ, ಪುಣ್ಯತಿಥಿ ಆಚರಿಸುವುದರ ಜೊತೆಗೆ ಅವರ ತತ್ವಾದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಆಚರಣೆ ಗಳಿಗೆ ಮಹತ್ವ ಬರಲಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ತಾಲ್ಲೂಕು ಪಂಚಾಯ್ತಿ ಸಭಾಭವನದಲ್ಲಿ ನಿನ್ನೆ ಏರ್ಪಾಡಾಗಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ತನ್ನ ಬದುಕು ಕಟ್ಟಿಕೊಳ್ಳಲು ಹಿಂಸಾ ಮಾರ್ಗ ಹಿಡಿದಿದ್ದ ರತ್ನಾಕರ, ನಾರದರ ಬೋಧನೆಯಿಂದ ಸಾತ್ವಿಕ ಬದುಕಿಗೆ ಬದಲಾಗಿ, ಮಹತ್ತರವಾದ ರಾಮಾಯಣ ಗ್ರಂಥವನ್ನು ಮನುಕುಲಕ್ಕೆ ಅರ್ಪಿಸಿ, ವಾಲ್ಮೀಕಿ ಮಹರ್ಷಿಗಳಾದರು. ಅವರ ಹೆಸರು ಇಂದು ಚಿರಾಯು ಆಗಿದೆ ಎಂದು ಹೇಳಿದ ಶಾಸಕರು, ಅಪೂರ್ಣಗೊಂಡಿರುವ ವಾಲ್ಮೀಕಿ ಭವನ ಪೂರ್ಣ ಗೊಳಿಸುವ ಭರವಸೆ ನೀಡಿದರು. ನಗರಸಭೆ ಸದಸ್ಯರಾದ ಶಶಿ ಬಸೇನಾಯ್ಕರ, ಪ್ರಭಾವತಿ ತಿಳವಳ್ಳಿ, ಜಯಶ್ರೀ ಪಿಸೆ, ಗಂಗಮ್ಮ ಹಾವನೂರ, ಪ್ರಕಾಶ ಪೂಜಾರ ಮತ್ತು ಸಮಾಜದ ಮುಖಂಡರಾದ ಚಂದ್ರಪ್ಪ ಬೇಡರ, ರವಿ ಪಾಟೀಲ, ಸಣ್ಣ ತಮ್ಮಪ್ಪ ಬಾರ್ಕಿ, ಅಧಿಕಾರಿಗಳಾದ ಎಂ.ಎಚ್.ಪಾಟೀಲ, ಹನುಮಂತಪ್ಪ ಶಿರಹಟ್ಟಿ, ಸುಮಲತಾ, ದೇವಲಾನಾಯ್ಕ ಮತ್ತಿತರರಿದ್ದರು.
July 23, 2024