ಜಗಳೂರು, ಅ.27- ತಾಲ್ಲೂಕಿನ ಕೆಚ್ಚೇನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಎಸ್.ಎಮ್. ನಂದಿಲಿಂಗೇಶ್ ಸಾರಂಗಮಠ ಮತ್ತು ಡಾಟಾ ಎಂಟ್ರಿ ಆಪರೇಟರ್ ಆರ್.ಅಜ್ಜಯ್ಯ ಈ ಸ್ವತ್ತು ಮಾಡಿಕೊಡಲು 10,000 ರೂ. ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಳಗೋಟೆ ಗ್ರಾಮದ ಬಸವನಗೌಡ ಎಂಬುವರಿಗೆ ಇ-ಸ್ವತ್ತು ಮಾಡಿಕೊಡಲು 10,000 ರೂ. ಲಂಚದ ಬೇಡಿಕೆ ಇಟ್ಟಿದ್ದರು. ಅವರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ಪಿಡಿಒ ನಂದಿಲಿಂಗೇಶ್ ಸಾರಂಗಮಠ ಮತ್ತು ಡಾಟಾ ಎಂಟ್ರಿ ಆಪರೇಟರ್ ಅಜ್ಜಯ್ಯ ಇಂದು ತಾಲ್ಲೂಕು ಪಂಚಾಯಿತಿಯಲ್ಲಿ 10,000 ರೂ. ಲಂಚ ಸ್ವೀಕರಿಸುವಾಗ ಜಿಲ್ಲಾ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ. ಜಿಲ್ಲಾ ಲೋಕಾಯುಕ್ತ ಎಸ್ಪಿ ಎಸ್.ಎಮ್. ಕೌಲಾಪುರೆ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಸಬ್ಇನ್ಸ್ಪೆಕ್ಟರ್ಗಳಾದ ಪ್ರಭು ಬಿ. ಸುರೀನ್, ರಾಷ್ಟ್ರಪತಿ ಮತ್ತು ಮಧುಸೂದನ್ ಮೂರು ಜನರ ತಂಡ ತಾಲ್ಲೂಕು ಪಂಚಾಯತ್ ಕಚೇರಿ ಮೇಲೆ ದಾಳಿ ನಡೆಸಿ, ಕಚೇರಿಯ ಒಳಗೆ ಬಸವನಗೌಡ ಅವರಿಂದ 10,000 ರೂ. ಲಂಚ ಪಡೆಯುತ್ತಿರುವಾಗಲೇ ಪೊಲೀಸರ ಬಲೆಗೆ ಬಿದ್ದಿದ್ದಾರೆ.