ಮತದಾರರು ಕೈ ಬಿಟ್ಟರೂ ದೇವರು ಕೈ ಬಿಡಲಿಲ್ಲ

ಮತದಾರರು ಕೈ ಬಿಟ್ಟರೂ ದೇವರು ಕೈ ಬಿಡಲಿಲ್ಲ

ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಅರಸಿಕೇರಿಯ ವೈ.ಡಿ.ಅಣ್ಣಪ್ಪ

ಹರಪನಹಳ್ಳಿ, ಅ.16- ತಾಲ್ಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ರೈತರಿಗೆ ಬ್ಯಾಂಕಿನಿಂದ ಸಿಗುವ ಸೌಲಭ್ಯಗಳನ್ನು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಬಿಡಿಸಿಸಿ ಬ್ಯಾಂಕ್‍ನ ನೂತನ ನಿರ್ದೇಶಕ ಅರಸಿಕೇರಿಯ ವೈ.ಡಿ.ಅಣ್ಣಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ನಗರದ ಹಾಲಸ್ವಾಮಿ ಮಠದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಸಮಾಜದಿಂದ ಏರ್ಪಡಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬರಗಾಲ ಇದ್ದು ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ತಾಲ್ಲೂಕಿನ 23 ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಲ್ಲಿ ರೈತರಿಗೆ ನೆರವಾಗಲು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಕೊಡಿ ಸಲು ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದರು.

 ನಾನು ಗ್ರಾಮ, ತಾಲ್ಲೂಕು ಮಟ್ಟದಲ್ಲಿ ಸಹಕಾರ ಕ್ಷೇತ್ರದಲ್ಲಿ ಈಗಾಗಲೇ ಕೆಲಸ ಮಾಡಿದ್ದೆ. ಇದೀಗ ಜಿಲ್ಲಾ ಮಟ್ಟದ ಸಹಕಾರ ಬ್ಯಾಂಕಿಗೆ ಆಯ್ಕೆಯಾಗಿರುವುದು ಸಂತಸ ತಂದಿದೆ ಎಂದರು. ನನಗೆ 13 ರಿಂದ 14 ಮತಗಳು ಬರುವ ನಿರೀಕ್ಷೆ ಇತ್ತು, ಆದರೆ ನಿರೀಕ್ಷೆಗಿಂತ ಕಡಿಮೆ ಮತಗಳು ಬಂದಿವೆ. ಮತದಾರರು ಕೈ ಬಿಟ್ಟರೂ ದೇವರು ಕೈ ಬಿಡಲಿಲ್ಲ ಎಂದು ಲಾಟರಿಯಲ್ಲಿ ಆಯ್ಕೆಯಾಗಿರುವುದಕ್ಕೆ ಉತ್ತರಿಸಿದರು. ನಾನು ಬಿಡಿಸಿಸಿ ಬ್ಯಾಂಕ್‌ನ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದು ಅಧ್ಯಕ್ಷನಾಗಲು ಪ್ರಯತ್ನಿಸುವೆ ಎಂದರು.

ರಾಜಕೀಯದಲ್ಲಿ ಒಂದೊಂದೇ ಮೆಟ್ಟಿಲು ಹತ್ತುತ್ತಿರುವುದಾಗಿ ಹೇಳಿದ ಅವರು, ಮುಂದೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾದರೂ ಅಚ್ಚರಿಯಿಲ್ಲ ಎಂದು ಅವರು ತಿಳಿಸಿದರು.

ಹಾಲಸ್ವಾಮಿ ಮಠದ ವೀರಯ್ಯ ಹಾಲಸ್ವಾಮಿಗಳು ಸೇರಿದಂತೆ ವಿವಿಧ ಮುಖಂಡರು ಶಾಲು ಹೊದಿಸಿ, ಬಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಆಯ್ಕೆಯಾದ ವೈ.ಅಣ್ಣಪ್ಪನವರನ್ನು ಸನ್ಮಾನಿಸಿ, ಅಭಿನಂದಿಸಿದರು.

ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಉಚ್ಚೆಂಗೆಪ್ಪ ಕೆ., ಪುರಸಭಾ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಚಿಗಟೇರಿ ಜಂಬಣ್ಣ, ಪಿಕಾರ್ಡ್‌ ಬ್ಯಾಂಕ್ ಮಾಜಿ ಅಧ್ಯಕ್ಷ ಮುತ್ತಿಗೆ ಜಂಬಣ್ಣ, ನಿರ್ದೇಶಕ ಪಿ.ಬಿ.ಗೌಡ, ಟಿಎಪಿಸಿಎಂಎಸ್ ನಿರ್ದೇಶಕ ಗಿಡ್ಡಳ್ಳಿ ನಾಗರಾಜ, ನಿಚ್ಚವ್ವನಹಳ್ಳಿ ಗ್ರಾ.ಪಂ ಅಧ್ಯಕ್ಷ ಕೆ. ಆನಂದ, ಕಿಚ್ಚ ಯುವ ಸೇನೆ ಜಿಲ್ಲಾಧ್ಯಕ್ಷ ಹಾದಿಮನಿ ಸಂತೋಷ್‌, ಮುಖಂಡರಾದ ಪ್ರಶಾಂತ ಪಾಟೀಲ್, ಬಾಣದ ಅಂಜಿನಪ್ಪ, ಕಮ್ಮಾರ ಹಾಲಪ್ಪ, ಚಿಕ್ಕೇರಿ ವೆಂಕಪ್ಪ,  ದ್ಯಾಮಜ್ಜಿ ಹನುಮಂತಪ್ಪ, ಕೆಂಗಳ್ಳಿ ಪ್ರಕಾಶ್, ದ್ಯಾಮಜ್ಜಿ ದಂಡೆಪ್ಪ, ಪಿ., ಅರುಣ, ನಿಟ್ಟೂರು ದೊಡ್ಡಹಾಲಪ್ಪ, ಎಂ.ಉಚ್ಚೆಂಗೆಪ್ಪ, ಅಜ್ಜಯ್ಯ, ಚಿಕ್ಕೇರಿ ಪಾಲಾಕ್ಷ, ಬಂಗಿ ಚಂದ್ರಪ್ಪ  ಸೇರಿದಂತೆ  ಇತರರು ಹಾಜರಿದ್ದರು.

error: Content is protected !!