ಪ್ರಗತಿಪಥದಲ್ಲಿ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿ

ಪ್ರಗತಿಪಥದಲ್ಲಿ ಮಹಾಲಕ್ಷ್ಮಿ ಕ್ರೆಡಿಟ್ ಸೊಸೈಟಿ

ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಸಹಕಾರಿ ಉಪಾಧ್ಯಕ್ಷ ಹೆಚ್.ಡಿ. ಪ್ರಭುದೇವ್ ಸಂತಸ

ದಾವಣಗೆರೆ, ಅ. 15- ತನ್ನ ಪ್ರಗತಿಯನ್ನು ಕಾಯ್ದುಕೊಂಡು ಮುನ್ನಡೆಯುವಲ್ಲಿ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಯಶಸ್ವಿಯಾಗಿದೆ ಎಂದು ಸಂಘದ ಉಪಾಧ್ಯಕ್ಷ ಹೆಚ್.ಡಿ. ಪ್ರಭುದೇವ್ ಸಂತಸ ವ್ಯಕ್ತಪಡಿಸಿದರು.
ನಗರದ ಕುವೆಂಪು ಕನ್ನಡ ಭವನದಲ್ಲಿ ಕಳೆದ ವಾರ ಏರ್ಪಾಡಾಗಿದ್ದ ಮಹಾಲಕ್ಷ್ಮಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ 2022-23ನೇ ಸಾಲಿನ ಸರ್ವ ಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಂದಿನಂತೆ ಪ್ರಸಕ್ತ ಸಾಲಿನಲ್ಲೂ ತಮ್ಮ ಸಂಘವು ಉತ್ತಮ ವ್ಯವಹಾರ ನಡೆಸಿ, ಕಳೆದ ವರ್ಷಕ್ಕಿಂತ ಹೆಚ್ಚು ಲಾಭ ಗಳಿಸಿದ್ದು, ಸಂಘದ ಷೇರುದಾರರಿಗೆ ಶೇ. 10ರಂತೆ ಲಾಭಾಂಶ ನೀಡಲು ಸಂಘದ ಆಡಳಿತ ಮಂಡಳಿ ತೀರ್ಮಾನ ಕೈಗೊಂಡಿದೆ ಎಂದು ಷೇರುದಾರರ ಚಪ್ಪಾಳೆಗಳ ಮಧ್ಯೆ ಪ್ರಭುದೇವ್ ಘೋಷಿಸಿದರು.
2023, ಮಾರ್ಚ್ ಅಂತ್ಯಕ್ಕೆ ಸಂಘವು 8.40 ಲಕ್ಷ ರೂ. ಲಾಭ ಗಳಿಸಿದ್ದು, ಆಡಳಿತ ಮಂಡಳಿಯ ಹಿತಾಸಕ್ತಿ, ಸಂಘದ ಸಿಬ್ಬಂದಿ ವರ್ಗದವರ ಪರಿಶ್ರಮ, ಠೇವಣಿದಾರರ ಪ್ರೋತ್ಸಾಹ, ಷೇರುದಾರರ ಮತ್ತು ಗ್ರಾಹಕರ ಸಹಕಾರದಿಂದಾಗಿ ಸಂಘವು ಪ್ರಗತಿದಾಯಕವಾಗಿ ಸಾಗುತ್ತಿದೆ ಎಂದು ತಿಳಿಸಿ, ಸಹಕರಿಸಿದ ಎಲ್ಲರನ್ನೂ ಸ್ಮರಿಸಿ, ಕೃತಜ್ಞತೆ ಸಲ್ಲಿಸಿದರು.
ಈವರೆಗೂ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದ ಎ.ಆರ್. ಉಜ್ಜನಪ್ಪ ಅವರ ಆಕಸ್ಮಿಕ ನಿಧನದಿಂದಾಗಿ ಸಂಘಕ್ಕೆ ತೀವ್ರ ಹಾನಿ ಉಂಟಾಗಿದೆ. ಉಜ್ಜನಪ್ಪ ಅವರ ಶ್ರಮದಿಂದಾಗಿ ಸಂಘವು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದ ಪ್ರಭುದೇವ್ ಅವರು, ಉಜ್ಜನಪ್ಪ ಅವರ ವ್ಯಕ್ತಿತ್ವ ಮತ್ತು ಸೇವೆಯನ್ನು ಕೊಂಡಾಡಿದರು.
ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆಯನ್ನು ನಿರ್ದೇಶಕ ಸಿ. ಸುಭಾಶ್ ಓದಿದರು. ಕಳೆದ ಸಾಲಿನ ಮಹಾಸಭೆಯ ನಡಾವಳಿಯನ್ನು ಸಂಘದ ಸಿಬ್ಬಂದಿ ಹೆಚ್.ಪಿ.ಜಿ. ಚಂದ್ರಕಾಂತ್ ಸಭೆಗೆ ವಿವರಿಸಿದರು. ಆಡಿಟ್ ಆದ ಲೆಕ್ಕಪತ್ರ ಮತ್ತು ಮುಂಗಡ ಪತ್ರವನ್ನು ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಮಂಡಿಸಿದರು.
ಇದೇ ಸಂದರ್ಭದಲ್ಲಿ 2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ಕು. ಬಿ.ಹೆಚ್. ಭೂಮಿಕ ಅವರಿಗೆ ಪ್ರಥಮ ಬಹುಮಾನ 4 ಸಾವಿರ ರೂ., ಕು. ಎಂ.ಡಿ. ಪಾವನ ಅವರಿಗೆ ದ್ವಿತೀಯ ಬಹುಮಾನ 3 ಸಾವಿರ ರೂ. ಹಾಗೂ ಚಿ. ಆರ್. ಮನೋಜ್ ಅವರಿಗೆ ತೃತೀಯ ಬಹುಮಾನ 2 ಸಾವಿರ ರೂ. ನಗದು ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಕು. ಚಿನ್ಮಯಿ ಪ್ರಾರ್ಥನೆ ನಂತರ ಸಂಘದ ನೂತನ ಅಧ್ಯಕ್ಷ ಎ.ಪಿ. ಷಡಾಕ್ಷರಪ್ಪ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಎಸ್. ಬಸವರಾಜ್ ಅವರಿಂದ ವಂದನಾರ್ಪಣೆ, ಸಂಘದ ಹಿರಿಯ ಸದಸ್ಯ ಬಿ.ಎಸ್. ಬಸವರಾಜ್ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.
ನಿರ್ದೇಶಕರುಗಳಾದ ಕೆ.ಎನ್. ಶಿವಲಿಂಗಪ್ಪ ಬಾಡಾ, ಬಿ.ಬಿ. ರಾಮಚಂದ್ರ, ಬಿ.ಎನ್. ರೇವಣಸಿದ್ದಪ್ಪ (ಬಾಳೆಹೊಲದ ಸಿದ್ದಣ್ಣ), ಟಿ.ಎಂ. ಮುರುಗೇಂದ್ರಯ್ಯ, ಶ್ರೀಮತಿ ಕೆ.ಎಂ. ಮಮತಾ ವಿಶ್ವನಾಥ್, ಶ್ರೀಮತಿ ಕೆ.ವಿ. ನೇತ್ರಾವತಿ ಗುರು ಮೂರ್ತಿ ಹಾಗೂ ಹೆಚ್.ಎಸ್. ಬಸವಂತಪ್ಪ ಸಮಾರಂಭದ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಿಬ್ಬಂದಿ ಫಿಲೋಮಿನಾ ಮೇರಿ, ಸದಸ್ಯರಾದ ಸಮರ್ಥ್ ಎಸ್. ಹಿರೇಮಠ, ಜಿ.ಎಂ. ನಾಗರಾಜ್ ಮತ್ತಿತರರು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಿದರು.
ಸಮಾರಂಭದ ಆರಂಭದಲ್ಲಿ ಸಂಘದ ಅಧ್ಯ ಕ್ಷರಾಗಿದ್ದ ಎ.ಆರ್. ಉಜ್ಜನಪ್ಪ ಅವರ ನಿಧನಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

error: Content is protected !!