ದಾವಣಗೆರೆ, ಅ. 8- ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ವತಿಯಿಂದ ಡಿ.ಆರ್.ಎಂ.ಸ್ಕೌಟ್ ಭವನದಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸರ್ವಧರ್ಮ ಪ್ರಾರ್ಥನೆ ನಡೆಸಲಾಯಿತು.
ಜಿಲ್ಲಾ ಮುಖ್ಯ ಆಯುಕ್ತ ಮುರುಘರಾಜೇಂದ್ರ ಜೆ. ಚಿಗಟೇರಿ ಕಾರ್ಯಕ್ರಮ ಉದ್ಘಾಟಿಸಿ, ಸರ್ವಧರ್ಮ ಪ್ರಾರ್ಥನೆಯ ಮಹತ್ವ ತಿಳಿಸಿದರು. ಗಾಂಧೀಜಿಯವರು ತಮ್ಮ ಜೀವನ ಚರಿತ್ರೆಯಲ್ಲಿ ಚಿಕ್ಕವರಿದ್ದಾಗ ತಾವು ಮಾಡಿದ್ದ ತಪ್ಪನ್ನೂ ಸಹ ಬರೆದಿದ್ದಾರೆ. ಸತ್ಯ, ಅಹಿಂಸೆಯ ಮಾರ್ಗದಲ್ಲಿ ನಡೆದವರು. ಲಾಲ್ ಬಹದ್ದೂರ್ ಶಾಸ್ತ್ರೀಜಿ ತುಂಬಾ ಸರಳವಾದ ವ್ಯಕ್ತಿ ಎಂದು ತಿಳಿಸಿದರು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಎ.ಪಿ. ಷಡಕ್ಷರಪ್ಪ ಗಾಂಧೀಜಿಯವರ ವ್ಯಕ್ತಿತ್ವ ಮತ್ತು ದೇಶ ಭಕ್ತಿ ಕುರಿತು ಮಾತನಾಡಿದರು.
ಜಿಲ್ಲಾ ಗೈಡ್ ಆಯುಕ್ತರಾದ ಶಾರದ ಮಾಗಾನಹಳ್ಳಿ ಅವರು ಮಾತನಾಡಿ, ಪ್ರತಿಯೊಬ್ಬರೂ ಸಹ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜೀವನ ಚರಿತ್ರೆ ತಿಳಿಯಬೇಕೆಂದು ಹೇಳಿದರು.
ಉಪಾಧ್ಯಕ್ಷರಾದ ಶಾಂತ ಯಾವಗಲ್ ಹಾಗೂ ಸಹಾಯಕ ಜಿಲ್ಲಾ ಆಯುಕ್ತ ಎನ್.ಕೆ. ಕೊಟ್ರೇಶ್, ಕಾಂತಿಲಾಲ್, ಜಿಲ್ಲಾ ಜಂಟಿ ಕಾರ್ಯದರ್ಶಿ ಸುಖವಾಣಿ ಮತ್ತು ಯುವ ಸಮಿತಿ ಸದಸ್ಯರು, ಪೋಷಕರು ಉಪಸ್ಥಿತರಿದ್ದರು. ಜಿಲ್ಲಾ ಕಾರ್ಯದರ್ಶಿ ಎಂ. ರತ್ನ ಕಾರ್ಯಕ್ರಮ ನಿರೂಪಿಸಿದರು. ಎಸ್.ಜಿ.ವಿ. ಅಶ್ವಿನಿ ಸ್ವಾಗತಿಸಿ, ವಂದಿಸಿದರು.