ಶ್ರಮಿಕ ವರ್ಗದ ಸಮಸ್ಯೆ ಬಗೆಹರಿಸುವಂತೆ ಆಗ್ರಹ

ಶ್ರಮಿಕ ವರ್ಗದ ಸಮಸ್ಯೆ ಬಗೆಹರಿಸುವಂತೆ ಆಗ್ರಹ

ನಗರದಲ್ಲಿ ಕಮ್ಯುನಿಸ್ಟ್ ಪಕ್ಷದಿಂದ ಜನಾಗ್ರಹ ಜನಾಂದೋಲನ

ದಾವಣಗೆರೆ, ಅ. 8- ಜನತೆಗೆ ಕೊಟ್ಟ ಭರವಸೆಗಳನ್ನು ಈಡೇರಿಸಿ, ರೈತ, ಕಾರ್ಮಿಕರ, ದುಡಿಯುವ ಜನರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸಿಪಿಐ ಜಿಲ್ಲಾ ಮಂಡಳಿ ಜನಾಗ್ರಹ ಜನಾಂದೋಲನದ ಮೂಲಕ ಒತ್ತಾಯಿಸಿತು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಸಿಕ 15 ಸಾವಿರ, ಸಹಾಯಕಿಯರಿಗೆ 10 ಸಾವಿರ, ಆಶಾ ಕಾರ್ಯಕರ್ತೆಯರಿಗೆ 8 ಸಾವಿರ ಹಾಗೂ ಬಿಸಿಯೂಟ ತಯಾರಕರಿಗೆ 6 ಸಾವಿರ ರೂ. ಗೌರವ ಧನ ಹೆಚ್ಚಿಸಬೇಕು. ಬಿಜೆಪಿ ಜಾರಿಗೊಳಿಸಿದ್ದ ಕೃಷಿ ಕಾಯ್ದೆ, ಎಪಿಎಂಸಿ ಕಾಯ್ದೆಗಳನ್ನು ರದ್ದುಗೊಳಿಸಬೇಕು. ರೈತರ ಮೇಲೆ ದಾಖಲಾಗಿರುವ ರಾಜಕೀಯ ಪ್ರೇರಿತ ಮೊಕದ್ದಮೆಗಳನ್ನು ವಾಪಾಸ್ಸು ಪಡೆಯಬೇಕೆಂದು ಒತ್ತಾಯಿಸಿದರು. 12 ತಾಸಿಗೆ ಹೆಚ್ಚಿಸಿರುವ ಕೆಲಸದ ಅವಧಿಯನ್ನು ಎಂದಿನಂತೆ 8 ತಾಸಿಗೆ ನಿಗದಿಗೊಳಿಸಬೇಕು. ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸುವ ಕಾನೂನು ತಿದ್ದುಪಡಿಯನ್ನು ಹಿಂಪಡೆಯಬೇಕೆಂದು ಮನವಿ ಮಾಡಿದರು.

ಪೌರ ಕಾರ್ಮಿಕರ ಸೇವೆಯನ್ನು ಖಾಯಂಗೊಳಿಸಿ, ಸರ್ಕಾರಿ ಸೌಲಭ್ಯಗಳನ್ನು ವಿಸ್ತರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.

ಸಿಪಿಐ ಜಿಲ್ಲಾ ಖಜಾಂಚಿ ಆನಂದರಾಜ್, ಸಹಕಾರ್ಯದರ್ಶಿಗಳಾದ ಹೆಚ್.ಜಿ. ಉಮೇಶ್, ಆವರಗೆರೆ ವಾಸು, ಜಗಳೂರು ಮಹಮ್ಮದ್ ಬಾಷಾ, ಮುಖಂಡರಾದ ಐರಣಿ ಚಂದ್ರು, ನರೇಗಾ ರಂಗನಾಥ್, ಸಿದ್ದೇಶ್‌ ಮಾತನಾಡಿದರು.

ಜನಾಗ್ರಹ ಆಂದೋಲನದ ನೇತೃತ್ವವನ್ನು ಮುಖಂಡರಾದ ಟಿ.ಎಸ್. ನಾಗರಾಜ್, ಹರಿಹರದ ಟಿ.ಹೆಚ್. ನಾಗರಾಜ್, ಸಿ. ರಮೇಶ್, ಗದಿಗೇಶ್, ಜಯ್ಯಪ್ಪ, ಸರೋಜಾ, ಜ್ಯೋತಿಲಕ್ಷ್ಮಿ, ಪದ್ಮ, ನಿಟುವಳ್ಳಿ ಬಸವರಾಜ್, ಕೆ.ಜಿ. ಶಿವಮೂರ್ತಿ, ಕುಮಾರ ನಾಯಕ, ವಿ. ಲಕ್ಷ್ಮಣ, ಬೆಳಲಗೆರೆ ರುದ್ರಮ್ಮ ಸೇರಿದಂತೆ ನೂರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು. 

error: Content is protected !!